ಆ.28: ಕಂದಾಯ ಅಧಿಕಾರಿಯ ವರ್ಗಾವಣೆ ವಿರೋಧಿಸಿ ಪ್ರತಿಭಟನೆ
ಮಂಗಳೂರು, ಆ.27: ಮಂಗಳೂರು ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ ಪ್ರವೀಣ್ಚಂದ್ರ ಕರ್ಕೇರ ಅವರ ವರ್ಗಾವಣೆಯ ಹಿಂದೆ ಕಾಂಗ್ರೆಸ್ ಕುಮ್ಮಕ್ಕು ಇದೆ. ಅದನ್ನು ಖಂಡಿಸಿ ಮತ್ತು ಪ್ರವೀಣ್ರ ವರ್ಗಾವಣೆ ವಿರೋಧಿಸಿ ಆ.28ರಂದು ಬೆಳಗ್ಗೆ 10 ಗಂಟೆಗೆ ಪಾಲಿಕೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ದ.ಕ.ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ದಿನೇಶ್ ಅಮ್ಟೂರ್ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಲಾಧಿಕಾರಿಯ ಆದೇಶದಂತೆ ಪ್ರವೀಣ್ ನಗರದಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಹೋರ್ಡಿಂಗ್, ಫ್ಲೆಕ್ಸ್ ತೆರವಿಗೆ ಮುಂದಾಗಿದ್ದರು. ಆದರೆ ಮಾಜಿ ಶಾಸಕ ಜೆ.ಆರ್.ಲೋಬೊ ರಾಜಕೀಯ ಶಕ್ತಿ ಬಳಸಿ ಪ್ರವೀಣ್ರನ್ನು ಎತ್ತಂಗಡಿ ಮಾಡಿದ್ದಾರೆ. ಕಾಂಗ್ರೆಸ್ನ ಈ ನಿಲುವನ್ನು ವಿರೋಧಿಸಿ ಪ್ರತಿಭಟನೆ ನಡೆಯಲಿದೆ. ಯಾವುದೇ ಕಾರಣಕ್ಕೂ ಪ್ರವೀಣ್ ವರ್ಗಾವಣೆ ಆಗಬಾರದು ಎಂದರು.
ತಮ್ಮದು ಅಹಿಂದ ಸರಕಾರ ಎನ್ನುತ್ತಿದ್ದ ಕಾಂಗ್ರೆಸ್ ದಲಿತ ಸಮುದಾಯದ ಅಧಿಕಾರಿಗಳಿಗೆ ಕೊಡುವ ಬಹುಮಾನ ವರ್ಗಾವಣೆಯ ಶಿಕ್ಷೆಯೇ?. ಭ್ರಷ್ಟಾಚಾರ ನಿಲ್ಲಬೇಕು ಎನ್ನುವ ಕಾಂಗ್ರೆಸ್ ಅಕ್ರಮವಾಗಿ ಹೋರ್ಡಿಂಗ್ ಅಳವಡಿಸಿದ್ದನ್ನು ತೆರವುಗೊಳಿಸಲು ಮುಂದಾದಾಗ ಅದಕ್ಕೆ ತಡೆ ಒಡ್ಡುವ ಷಡ್ಯಂತ್ರ ನಡೆಸಿದ್ದೇಕೆ ? ಎಂದು ದಿನೇಶ್ ಅಮ್ಟೂರ್ ಪ್ರಶ್ನಿಸಿದರು.
ಹೊಸ ನೀತಿಯಿಂದಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಸಮುದಾಯದ ಮಂದಿ ಮನೆ ಕಟ್ಟಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಪಾಲಿಕೆ ಆಯುಕ್ತರು ಮೊದಲಿದ್ದ ಕಾನೂನಿಗೆ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಕಾನೂನನ್ನು ಸರಳೀಕರಣಗೊಳಿಸಿ ಮನೆ ಕಟ್ಟುವಲ್ಲಿ ಎದುರಾಗಿರುವ ಸಮಸ್ಯೆಗೆ ಮುಕ್ತಿ ಕಾಣಿಸಬೇಕು ಎಂದು ದಿನೇಶ್ ಅಮ್ಟೀರ್ ಮನವಿ ಮಾಡಿದರು.
ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರ ಕಾರು ಚಾಲಕರ ನೇಮಕ ವೇಳೆ ಮಾಜಿ ಸಚಿವ ರಮಾನಾಥ ರೈ ಅಡ್ಡಗಾಲು ಹಾಕಿದ್ದಾರೆ. ಈ ಮೂಲಕ ಪರಿಶಿಷ್ಟ ಜಾತಿಯ ಕಾರು ಚಾಲಕನಿಗೆ ಅನ್ಯಾಯ ಮಾಡಿದ್ದಾರೆ ಎಂದು ದಿನೇಶ್ ಅಮ್ಟೂರ್ ಆರೋಪಿಸಿದರು.
ಕುದ್ಮಲ್ ರಂಗರಾವ್ ಹೆಸರಿಡಲು ಆಗ್ರಹ
ಮಂಗಳೂರಿನ ಪುರಭವನಕ್ಕೆ ಕುದ್ಮಲ್ ರಂಗರಾವ್ರ ಹೆಸರಿಡಬೇಕು ಎಂದು ಎರಡು ವರ್ಷಗಳ ಹಿಂದೆ ಪಾಲಿಕೆ ತೀರ್ಮಾನ ಕೈಗೊಂಡಿದ್ದರೂ ಇನ್ನೂ ಆ ಕಾರ್ಯ ಆಗಿಲ್ಲ. ಒಂದು ವಾರದೊಳಗೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಪಾಲಿಕೆ ಮುಂಭಾಗ ಅಹೋರಾತ್ರಿ ಭಜನಾ ಕಾರ್ಯಕ್ರಮದ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿನಯನೇತ್ರ ದಡ್ಡಲ್ಕಾಡು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಸಿ ಮೋರ್ಚಾದ ಮುಖಂಡರಾದ ಬಿ.ಎಸ್.ವಸಂತ ಕುಮಾರ್, ಉಮಾನಾಥ ಅಮೀನ್ ನಂತೂರು, ಉಮೇಶ್ ಕೋಟ್ಯಾನ್ ವಾಮಂಜೂರು, ವಿಠಲ ಸಾಲ್ಯಾನ್, ಆನಂದ ಪಾಂಗಾಳ, ವನಿತಾ ಸೋಮನಾಥ ಉಪಸ್ಥಿತರಿದ್ದರು.