ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ: ಕಾಂಗ್ರೆಸ್-ಬಿಜೆಪಿ ಸ್ಪಷ್ಟನೆ
ಬಂಟ್ವಾಳ, ಆ. 27: ಕಾಂಗ್ರೆಸ್ ಮತ್ತು ಬಿಜೆಪಿ ಬಂಟ್ವಾಳ ಪುರಸಭೆ ಚುನಾವಣೆಯಲ್ಲಿ ಆಡಳಿತ ನಡೆಸಲು ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿವೆ.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ ಮಾಧ್ಯಮ ಸಂವಾದದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬಹುಮತ ಬಾರದೇ ಇದ್ದರೆ ವಿಪಕ್ಷದಲ್ಲಿ ಕೂರಲು ಸಿದ್ಧ ಎಂದರೆ ಎಸ್ಡಿಪಿಐ ಸಮಾನ ಮನಸ್ಕ ಜನಪ್ರತಿನಿಧಿಗಳೊಂದಿಗೆ ಆಡಳಿತ ನಡೆಸುತ್ತೇವೆ ಎಂದು ಹೇಳಿದೆ.
ಕಾಂಗ್ರೆಸ್ ನಿಂದ ನಿಕಟಪೂರ್ವ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಬಿಜೆಪಿಯಿಂದ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಎಸ್ಡಿಪಿಐನಿಂದ ಬಂಟ್ವಾಳ ಪುರಸಭೆ ಘಟಕ ಅಧ್ಯಕ್ಷ ಮುನಿಶ್ ಅಲಿ ಮತ್ತು ಜೆಡಿಎಸ್ ನಿಂದ ಹಾರೂನ್ ರಶೀದ್ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಕಳೆದ ಅವಧಿಯಲ್ಲಿ ಗರಿಷ್ಠ ಮೊತ್ತದ ಅನುದಾನವನ್ನು ಮಾಜಿ ಸಚಿವ ರಮಾನಾಥ ರೈ ಅವರ ಮುತುವರ್ಜಿಯಿಂದ ಪುರಸಭೆಗೆ ಒದಗಿಸಲಾಗಿದ್ದು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ ಕಾಂಗ್ರೆಸ್ನ ರಾಮಕೃಷ್ಣ ಆಳ್ವ, ಮುಂದೆಯೂ ಮಂಜೂರುಗೊಂಡ ಯೋಜನೆಗಳನ್ನು ಕಾರ್ಯ ಗತಗೊಳಿಸುವುದು ಹಾಗೂ ಬಂಟ್ವಾಳದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಈ ಸಂದರ್ಭ ಮಾತನಾಡಿದ ಬಿಜೆಪಿಯ ದೇವದಾಸ ಶೆಟ್ಟಿ, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಆಯವ್ಯಯದಲ್ಲಿ ಲೋಪದೋಷಗಳಾಗಿವೆ, ಹಲವು ಹಗರಣಗಳು ನಡೆದಿವೆ ಎಂದು ಆರೋಪಿಸಿ, ಬಂಟ್ವಾಳವನ್ನು ಭ್ರಷ್ಟಾಚಾರಮುಕ್ತ ಹಾಗೂ ಪಾರದರ್ಶಕ ಆಡಳಿತ ನಡೆಸುವುದು ಬಿಜೆಪಿಯ ಸಂಕಲ್ಪ ಎಂದರು.
ಪುರಸಭೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯವಸ್ಥಿತ ಮಾರುಕಟ್ಟೆ ಕುರಿತು ಪ್ರಶ್ನೆಗೆ ಉತ್ತರಿಸಿದ ದೇವದಾಸ ಶೆಟ್ಟಿ ವಾರದ ಸಂತೆ ನಡೆಸುವುದು, ಬೀದಿಬದಿ ವ್ಯಾಪಾರಸ್ಥರಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದರು. ಈಗಾಗಲೇ ಅದಕ್ಕೆ ತನ್ನ ಆಡಳಿತ ಅವಧಿಯಲ್ಲಿ ಜಾಗ ಗುರುತಿಸಲಾಗಿದ್ದು, ಚುನಾವಣಾ ಘೋಷಣೆ ಹಿನ್ನೆಲೆಯಲ್ಲಿ ಕಾರ್ಯಗತಗೊಳ್ಳಲಿಲ್ಲ ಎಂದು ಆಳ್ವ ಹೇಳಿದರು.
ತ್ಯಾಜ್ಯ ವಿಲೇವಾರಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎಸ್ಡಿಪಿಐನ ಮುನಿಶ್ ಅಲಿ, ಮನೆ, ಮಳಿಗೆಗಳಿಂದಲೇ ತ್ಯಾಜ್ಯವನ್ನು ಸಮರ್ಪಕವಾಗಿ ತೆಗೆದುಕೊಂಡು ಹೋಗುವ ವ್ಯವಸ್ಥೆ ನಿರ್ಮಾಣ ಆಗಿಲ್ಲ. ತಮ್ಮ ಆಡಳಿತ ಅವಧಿಯಲ್ಲಿ ಕಸ ವಿಲೇವಾರಿಯನ್ನು ಸುಸಜ್ಜಿತಗೊಳಿಸುವುದು ಆದ್ಯತೆ ಎಂದರೆ, ಬಿಜೆಪಿಯ ದೇವದಾಸ ಶೆಟ್ಟಿ ಅವರು, ಕಂಚಿನಡ್ಕಪದವಿನಲ್ಲಿ ನಮ್ಮ ಸರಕಾರ ಇದ್ದಾಗ ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಜಾಗ ಗುರುತಿಸಿತ್ತು. ಆದರೆ ಆಡಳಿತ ಬದಲಾದ ಬಳಿಕ ಅದನ್ನು ಮುಂದುವರಿಸಲು ಆಗಿರಲಿಲ್ಲ ಎಂದು ದನಿಗೂಡಿಸಿದರು. ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ನ ರಾಮಕೃಷ್ಣ ಆಳ್ವ, ಪೈರೋಲಿಸಿಸ್ ಯಂತ್ರ ಅಳವಡಿಸಿ ಸಮಗ್ರ ತ್ಯಾಜ್ಯ ವಿಲೇವಾರಿ ನಡೆಸುವುದಾಗಿ ಹೇಳಿದರು.
ಬಂಟ್ವಾಳ ಪೇಟೆ ಅಗಲೀಕರಣವನ್ನು ಮಾಡಿಯೇ ಸಿದ್ಧ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿನಿಧಿಗಳು ಹೇಳಿದರು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡುತ್ತೇವೆ ಎಂದು ಆಳ್ವ ಮತ್ತು ದೇವದಾಸ ಶೆಟ್ಟಿ ಹೇಳಿದರೆ, ಫುಟ್ಪಾತ್, ಪಾರ್ಕಿಂಗ್ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಭರವಸೆ ನೀಡಿದರು. ಪ್ಲಾಸ್ಟಿಕ್ ಮುಕ್ತ ಪುರಸಭೆಯಾಗಲು ಸರಕಾರ ಮುತುವರ್ಜಿ ವಹಿಸಬೇಕು ಎಂದು ಆಳ್ವ ಹೇಳಿದರೆ, ಜನಜಾಗೃತಿ ಆಗಬೇಕು ಎಂದು ಶೆಟ್ಟಿ ಹೇಳಿದರು.
ಮೂಲಭೂತ ಸೌಕರ್ಯಗಳನ್ನು ಜನರಿಗೆ ತಲುಪಿಸುವ ಮಧ್ಯವರ್ತಿಯಾಗಿ ಸ್ವಚ್ಛ ಆಡಳಿತ ನಡೆಸುವುದಾಗಿ ಮುನಿಶ್ ಆಲಿ ಹೇಳಿದರೆ, ಕುಮಾರಸ್ವಾಮಿ ಅವರ ಮುತುವರ್ಜಿಯಿಂದ ಗರಿಷ್ಠ ಅನುದಾನವನ್ನ ತರಿಸುವುದಾಗಿ ಹಾರೂನ್ ರಶೀದ್ ಹೇಳಿದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ ಸಮನ್ವಯಕಾರರಾಗಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಮುಹಮ್ಮದ್ ಆಲಿ ವಂದಿಸಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಪತ್ರಕರ್ತರಾದ ವೆಂಕಟೇಶ ಬಂಟ್ವಾಳ, ಯಾದವ ಅಗ್ರಬೈಲು, ಅಬ್ದುಲ್ ರಹಿಮಾನ್ ತಲಪಾಡಿ, ಗೋಪಾಲ ಅಂಚನ್, ಸಂದೀಪ್ ಸಾಲ್ಯಾನ್, ವಾಮನ ಪೂಜಾರಿ, ಲತೀಫ್ ನೇರಳಕಟ್ಟೆ, ರತ್ನದೇವ ಪುಂಜಾಲಕಟ್ಟೆ, ರಾಜಾ ಬಂಟ್ವಾಳ, ಚಂದ್ರಶೇಖರ ಕಲ್ಮಲೆ, ಮೋಹನ್ ಕೆ. ಶ್ರೀಯಾನ್, ಜಯಾನಂದ ಪೆರಾಜೆ ಭಾಗವಹಿಸಿದ್ದರು.