ಚಾಲಕನ ವರ್ಗಾವಣೆ ಪ್ರಕರಣ: ರೈ ನೇತೃತ್ವದಲ್ಲಿ ಅಧಿಕಾರಿಗಳಿಗೆ ಧೈರ್ಯ
ಬಂಟ್ವಾಳ, ಆ. 27: ಚಾಲಕನ ವರ್ಗಾವಣೆಯ ವಿಚಾರವಾಗಿ ಬಂಟ್ವಾಳ ತಾಲೂಕು ಪಂಚಾಯತ್ ಕಚೇರಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ನಡೆಸಿದ ಧರಣಿಗೆ ಪ್ರತಿಯಾಗಿ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ನಿಯೋಗ ಸೋಮವಾರ ಸಂಜೆ ತಾಲೂಕು ಪಂಚಾಯತ್ ಕಚೇರಿಗೆ ತೆರಳಿ ಜನಪ್ರತಿನಿಧಿಗಳು ಒತ್ತಡಕ್ಕೆ ಸಿಲುಕದೆ ನ್ಯಾಯಪರವಾಗಿ ಕೆಲಸ ಮಾಡಿ, ಪ್ರತಿಭಟನೆಗೆ ಹೆದರಿ ಕೆಲಸ ಮಾಡಬೇಡಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಸಂಸದರೊಬ್ಬರು ಸಣ್ಣ ವಿಚಾರವೊಂದನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದರೆ ಮುಂದೇ ಪ್ರತಿಭಟನೆಗಳೇ ಇಲ್ಲಿ ನಡೆಯುತ್ತಿರುತ್ತದೆ. ಚಾಲಕನ ವರ್ಗಾವಣೆ ವಿಚಾರವಾಗಿ ಲೋಪವಾಗಿದ್ದರೆ ಅದನ್ನು ಸರಿಪಡಿಸುವ ಕೆಲಸ ಮಾಡಬೇಕಿತ್ತು. ಅದರ ಬದಲು ಪ್ರತಿಭಟನೆ ಮಾಡಿ ಅಧಿಕಾರಿಗಳನ್ನು ಹೆದರಿಸುವ ಕೆಲಸ ಮಾಡಿದ್ದಾರೆ. ಪೊಲೀಸರನ್ನು, ತಹಶೀಲ್ದಾರರನ್ನು, ಕಾರ್ಯನಿರ್ವಾಹಣಾಧಿಕಾರಿಯನ್ನು ಹೆದರಿಸುವ ತಂತ್ರವನ್ನು ಸಂಘಪರಿವಾರದವರು ಅನುಸರಿಸುತ್ತಿದ್ದಾರೆ. ಅದಕ್ಕೆ ನಾವಿಲ್ಲಿ ಅವಕಾಶ ಕೊಡುವುದಿಲ್ಲ, ಜನಪ್ರತಿನಿಧಿಗಳ ಒತ್ತಡಕ್ಕ ಸಿಲುಕದೆ ನ್ಯಾಯಪರವಾಗಿ ಕೆಲಸ ಮಾಡಿ, ಪ್ರತಿಭಟನೆಗೆ ಹೆದರಿ ಕೆಲಸ ಮಾಡಬೇಡಿ ಎಂದು ಅಧಿಕಾರಿಗಳಿಗೆ ಧೈರ್ಯ ತುಂಬಿರುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ಪದ್ಮಶೇಖರ ಜೈನ್, ಮಮತಾಗಟ್ಟಿ, ಮಂಜುಳಾ ಮಾವೆ, ಬೇಬಿ ಕುಂದರ್, ಮಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ ಮತ್ತಿತರರು ಹಾಜರಿದ್ದರು.