ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯಲ್ಲಿ ನಿರ್ಲಕ್ಷ್ಯ: ಕಾಂಗ್ರೆಸ್ ಆರೋಪ
ಬಂಟ್ವಾಳ, ಆ. 27: ಮಹಾ ಮಾನವತವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮದಿಚರಣೆಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು ಎಂದು ಎರಡು ವರ್ಷಗಳ ಹಿಂದೇಯೇ ಸರಕಾರ ಆದೇಶಿಸಿದ್ದರೂ ಬಂಟ್ವಾಳ ತಾಲೂಕಾಡಳಿತ ನಾರಾಯಣ ಗುರುಗಳ ಜಯಂತಿಯನ್ನು ಆಚರಿಸದೇ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ. ಇದು ಮಾನವ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಈ ಬಗ್ಗ ಮಾಜಿ ಸಚಿವ ಬಿ.ರಮಾನಾಥ ರೈ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಎಂಎಲ್ಎ ಅವರನ್ನು ಕೇಳಿ ದಿನಾಂಕ ನಗದಿಪಡಿಸುವುದಾಗಿ ತಹಶೀಲ್ದಾರ್ ಹೇಳಿದ್ದಾರೆ. ಇದು ದಿನಾಂಕ ನಿಗದಿಪಡಿಸಿ ಆಚರಿಸುವ ಕಾರ್ಯಕ್ರಮವಲ್ಲ, ಅವರ ಜಯಂತಿಯ ದಿನದಂದೇ ಆಚರಿಸಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಡ ತಂದ ಕಾರಣ ರಾಜ್ಯದ್ಯಂತ ಬ್ರಹ್ಮಶ್ರೀ ನಾರಾಯಣ ಗುರುಗಳ ದಿನಾಚರಣೆ ಆಚರಿಸಬೇಕೆಂದು ಬಂಟ್ವಾಳ ತಾಲೂಕಿನ ಸಜೀಪಮೂಡದಲ್ಲೇ ಅವರು ಘೋಷಣೆ ಮಾಡಿ ಬಳಿಕ ಆದೇಶವನ್ನು ಹೊರಡಿಸಿದ್ದರು. ಆದರೆ, ಬಂಟ್ವಾಳದಲ್ಲೇ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಿಸದೆ ಅವಮಾನಿಸಲಾಗಿದೆ. ಇದಕ್ಕೆ ಯಾರೋ ಒತ್ತಡ ತಂದಿದ್ದಾರೆ ಎನ್ನುವ ಗುಮಾನಿ ಇದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದು ಸಮುದಾಯಕ್ಕೆ ಸೀಮಿತರಾದ ವ್ಯಕ್ತಿತ್ವವಲ್ಲ. ಈ ದೇಶದ ಸಾಮಾಜಿಕ ಸಾಮರಸ್ಯಕ್ಕಾಗಿ, ದುರ್ಬಲರ ನೋವಿಗಾಗಿ ಸ್ಪಂದಿಸಿದ ಹೋರಾಡಿದ ಧೀಮಂತ ಸಂತ. ಈ ದಾರ್ಶನಿಕನ ಜಯಂತಿಯನ್ನು ತಾಲೂಕಾಡಳಿತ ಮಾಡದೇ ಲೋಪವೆಸಗಿದ್ದಾರೆ. ಇದಕ್ಕೆ ಚುನಾಯಿತ ಮುಖಂಡರೇ ಕಾರಣ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ಪದ್ಮಶೇಖರ ಜೈನ್, ಮಮತಾಗಟ್ಟಿ, ಮಂಜುಳಾ ಮಾವೆ, ಬೇಬಿ ಕುಂದರ್, ಮಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ ಮತ್ತಿತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು.