ಆಕ್ರಮ ಮರ ಸಾಗಾಟ: ಆರೋಪಿ ಬಂಧನ
ಪುತ್ತೂರು, ಆ. 27: ಆನೆಗುಂಡಿ ಮೀಸಲು ಅರಣ್ಯದಿಂದ ಅಕ್ರಮವಾಗಿ ಸಾಗುವಾನಿ ಮರವನ್ನು ಕಡಿದು ದಿಮ್ಮಿಗಳನ್ನಾಗಿ ಪರಿವರ್ತಿಸಿ ಮಾರುತಿ ಓಮ್ನಿಯಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪುತ್ತೂರು ಉಪವಿಭಾಗದ ಅರಣ್ಯ ಇಲಾಖೆಯ ಅಧಿಕಾರಿಗಳು ಪತ್ತೆ ಮಾಡಿ, ಆರೋಪಿಯೊಬ್ಬನ್ನು ಬಂಧಿಸಿದ್ದಾರೆ.
ಸುಳ್ಯ ತಾಲ್ಲೂಕಿನ ಜಾಲ್ಸೂರು ಗ್ರಾಮದ ಬೈದಿರಕುಳಂಜ ನಿವಾಸಿ ಮಂಜು ಬಿ.(24) ಬಂಧಿತ ಆರೋಪಿ. ಇನ್ನೊಬ್ಬ ಆರೋಪಿಯಾಗಿದ್ದ ಜಾಲ್ಸೂರು ಗ್ರಾಮದ ಕಲ್ಲಮುರ ನಿವಾಸಿ ಸಂದೇಶ್ (25) ಎಂಬಾತ ತಪ್ಪಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಆರೋಪಿಗಳು ಆನೆಗುಂಡಿ ಮೀಸಲು ಅರಣ್ಯದಿಂದ ಸಾಗುವಾನಿ ಮರವನ್ನು ಅಕ್ರಮವಾಗಿ ಕಡಿದು ದಿಮ್ಮಿಗಳಾಗಿ ಪರಿವರ್ತಿಸಿ ಸುಳ್ಯ ತಾಲ್ಲೂಕಿನ ಜಾಲ್ಸೂರು ಗ್ರಾಮದ ಸುಂಕಡ್ಕದಿಂದ ಕೆಮ್ಮನಬಳ್ಳಿಗೆ ಹಾದು ಹೋಗುವ ಮಣ್ಣಿನ ರಸ್ತೆಯಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಆನೆಗುಂಡಿ ಶಾಖಾ ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ ಬಿ.ಟಿ, ಅರಣ್ಯ ರಕ್ಷಕ ವೆಂಕಟೇಶ್ ಮೊಗೇರ, ಅರಣ್ಯ ವೀಕ್ಷಕರಾದ ದೀಪಕ್ ಮತ್ತು ವಿನೋದ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಮುಂಜು ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾರುತಿ ಆಮ್ನಿ ಕಾರಿನಲ್ಲಿದ್ದ 7 ಸಾಗುವಾನಿ ಮರದ ದಿಮ್ಮಿಗಳನ್ನು ಸಾಗಾಟಕ್ಕೆ ಬಳಸಿದ ಮಾರುತಿ ಆಮ್ನಿ ಕಾರಿನ ಸಮೇತ ವಶಪಡಿಸಿಕೊಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಸೊತ್ತುಗಳ ಮೌಲ್ಯ ರೂ 75 ಸಾವಿರ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.