ಜನರ ಬಳಿಗೆ ಕಟ್ಟಡ ತ್ಯಾಜ್ಯ ಮರುಬಳಕೆ ತಂತ್ರಜ್ಞಾನ: ಸಸಿಕಾಂತ್ ಸೆಂಥಿಲ್
ಕಟ್ಟಡ ತ್ಯಾಜ್ಯಗಳ ಪುನರ್ಬಳಕೆಯ ಬಗ್ಗೆ ಕಾರ್ಯಾಗಾರ
ಮಂಗಳೂರು, ಆ.28: ಸರಕಾರ ಮತ್ತು ಜನ ಸಹಭಾಗಿತ್ವದೊಂದಿಗೆ ನಿರ್ಮಿತಿ ಕೇಂದ್ರದ ಮೂಲಕ ಕಟ್ಟಡ ತ್ಯಾಜ್ಯ ಸಾಮಗ್ರಿಗಳ ಮರುಬಳಕೆಯ ತಂತ್ರಜ್ಞಾನವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಅಗತ್ಯವಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಸಾಧ್ಯ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಭಿಪ್ರಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ನಿರ್ಮಿತಿ ಕೇಂದ್ರದ ವತಿಯಿಂದ ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ಕಟ್ಟಡ ತ್ಯಾಜ್ಯಗಳ ಪುನರ್ಬಳಕೆಯ ಬಗ್ಗೆ ಹಮ್ಮಿಕೊಂಡ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರದ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಜನತೆಯ ಸಹಭಾಗಿತ್ವ ಉತ್ತಮ ರೀತಿಯಲ್ಲಿ ದೊರೆತಿದೆ. ನಿರ್ಮಿತಿ ಕೇಂದ್ರವನ್ನು ನಿರ್ಮಾಣ ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಹೊಸ ತಂತ್ರಜ್ಞಾನವನ್ನು ಸುಲಭವಾಗಿ ದೊರೆಯುವಂತೆ ಮಾಡುವ ಉದ್ದೇಶದೊಂದಿಗೆ ಸ್ಥಾಪಿಸಲಾಗಿದೆ. ಈ ನಿಟ್ಟಿನಲ್ಲಿ ಕಟ್ಟಡ ತ್ಯಾಜ್ಯವನ್ನು ಮರುಬಳಕೆ ಮಾಡುವ ತಂತ್ರಜ್ಞಾನವನ್ನು ಹೆಚ್ಚು ಸುಶಿಕ್ಷಿತರು ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರ ಬಳಿಗೆ ತೆಗೆದುಕೊಂಡು ಹೋಗಲು ಸಾಧ್ಯ. ಕಟ್ಟಡ ತ್ಯಾಜ್ಯವನ್ನು ಮರುಬಳಸಿ ನಿರ್ಮಾಣ ಕಾಮಗಾರಿಯನ್ನು ಕೈ ಗೊಳ್ಳುವುದು ಉತ್ತಮ ಯೋಜನೆಯಾಗಿದೆ. ಈ ನಿಟ್ಟಿ ನಿರ್ಮಿತಿ ಕೇಂದ್ರ ಕಾರ್ಯಪ್ರವೃತ್ತವಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ಹಳ್ಳಿಗಳಲ್ಲೂ ತ್ಯಾಜ್ಯ ಸಂಸ್ಕರಣೆ ಪ್ರಮುಖ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಈ ತ್ಯಾಜ್ಯವೇ ಸಂಪತ್ತಾಗಿ ಪರಿವರ್ತನೆಯಾಗಬೇಕಾದರೆ ಅವುಗಳನ್ನು ಸಮರ್ಪಕವಾದ ರೀತಿಯಲ್ಲಿ ಮರುಬಳಕೆ ಮಾಡಬೇಕಾಗಿದೆ. ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಬಳಸಿ ತ್ಯಾಜ್ಯ ನಿರ್ವಹಣೆಯನ್ನು ಮಾಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಗೃತಿ ಮೂಡಿಸಬೇಕಾಗಿದೆ. ಇದಕ್ಕೆ ಸಮಾಜದ ಎಲ್ಲ ಜನವರ್ಗದ ಸಹಕಾರ ಅಗತ್ಯ ಎಂದರು.
ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಾಜಿ ನಿರ್ದೇಶಕ ಡಾ.ವಿಮಲ್ ಕುಮಾರ್, ಎನ್ಐಟಿಕೆ ಸುರತ್ಕಲ್ನ ಸಿವಿಲ್ ಇಂಜಿನಿಯರಿಂಗ್ ತಜ್ಞ ಕಟ್ಟಾ ವೆಂಕಟ್ರಾಮನ್, ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲ್ಬಾವಿ, ನಿರ್ಮಾಣ ಕ್ಷೇತ್ರದ ಉದ್ಯಮಿಗಳಾದ ಮೋಹನ್ ರಾಮನಾಥನ್, ಅಭಿಜಿತ್ ಗೌಡ ಮೊದಲಾದವರು ಉಪಸ್ಥಿತರಿದ್ದರು.