ಸೆ.1: ಮರೆಗುಳಿತನ ಕಾಯಿಲೆ ಕುರಿತು ಜಾಗೃತಿ ಮಾಸಾಚರಣೆಗೆ ಚಾಲನೆ
ಮಂಗಳೂರು, ಆ. 28: ಮರೆಗುಳಿತನ ಕಾಯಿಲೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸೆಪ್ಟಂಬರ್ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪೀಪಲ್ಸ್ ಅಸೋಸಿಯೇಶನ್ ಫಾರ್ ಜಿರಿಯಾಟ್ರಿಕ್ ಎಂಪವರ್ಮೆಂಟ್ನ ಅಧ್ಯಕ್ಷೆ ಡಾ. ಒಲಿಂದಾ ಪಿರೇರಾ ಹೇಳಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು ಸದ್ಯ ಸುಮಾರು 50 ಮಿಲಿಯನ್ ಜನರು ಈ ರೋಗಕ್ಕೆ ತುತ್ತಾಗಿದ್ದಾರೆ. 2050ರ ವೇಳೆಗೆ ಇದು 150 ಮಿಲಿಯನ್ ಜನರಿಗೆ ತಗಲುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಸಂಪೂರ್ಣವಾಗಿ ತೊಡೆದು ಹಾಕುವ ಅಗತ್ಯವಿದೆ. ಅದಕ್ಕಾಗಿ ಸೆಪ್ಟಂಬರ್ 1ರಂದು ಬೆಳಗ್ಗೆ 7 ಗಂಟೆಗೆ ಕದ್ರಿ ಪಾರ್ಕ್ನಲ್ಲಿ ಮರೆಗುಳಿತನ ರೋಗಿಗಳ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ರೋಗಿಗಳ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಮಾಡಲಾಗುತ್ತದೆ.ಅಲ್ಲದೆ, ರೋಗಿಗಳಿಗೆ ಕಾಲ್ನಡಿಗೆ, ಆಟೋಟ, ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ಡಾ. ಪ್ರಭಾ ಮಾತನಾಡಿ ಸೆಪ್ಪಂಬರ್ನಲ್ಲಿ ವಿವಿಧೆಡೆ ಕನಿಷ್ಠ 100 ಕಾರ್ಯಕ್ರಮಗಳನ್ನು ಆಯೋಜಿಸಿ ಸುಮಾರು 1 ಸಾವಿರ ಮಂದಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹಾಕಲಾಗಿದೆ. ಸೆಪ್ಟಂಬರ್ 22ರಂದು ನಗರದ ಪುರಭವನದಲ್ಲಿ ಬೆಳಗ್ಗೆ 9ರಿಂದ ಅಲ್ಜೀಮರ್ಸ್ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆಪ್ಟಂಬರ 30ರಂದು ನೇರಳ ವಸ್ತ್ರಧಾರಿಗಳಿಂದ ಓಟ ನಡೆಯಲಿದೆ. ಅಕ್ಟೋಬರ್ 1ರಂದು ನೆನಪಿನ ಶಕ್ತಿಗೆ ಸಂಬಂಧಿಸಿದಂತೆ ಕಾರ್ಯಾಗಾರ ನಡೆಸಲಾಗುವುದು ಎಂದು ಹೇಳಿದರು.
ವಿಶ್ವದಲ್ಲಿ ಪ್ರತೀ ಮೂರು ಸೆಕೆಂಡಿಗೆ ಒಂದು ಮರೆಗುಳಿತನ ಕಾಯಿಲೆ ಪತ್ತೆಯಾಗುತ್ತಿವೆ. ಹೆಚ್ಚಾಗಿ ಆರ್ಥಿಕವಾಗಿ ಹಿಂದುಳಿದ ರಾಷಟ್ಗೆಗಳಲ್ಲಿ ಈ ಸಮಸ್ಯೆಯು ಕಾಣಿಸಿಕೊಳ್ಳುತ್ತವೆ. ಇದು ರೋಗಿಗೆ ಮಾತ್ರವಲ್ಲ, ಅವರನ್ನು ಉಪಚರಿಸುವವರಿಗೆ ಕೂಡ ಸಮಸ್ಯೆಯಾಗಿ ಪರಿಣಮಿಸಲಿದೆ. ಇದು ಕೇವಲ ನೆನಪಿನ ಶಕ್ತಿಯನ್ನು ಕುಂಠಿತ ಗೊಳಿಸುವುದಲ್ಲ, ಬದುಕನ್ನೇ ಹರಣ ಮಾಡುತ್ತದೆ. ಆ ನಿಟ್ಟಿನಲ್ಲಿ ಜಾಗೃತಿ ಅತ್ಯಗತ್ಯ ಎಂದು ಡಾ. ಪ್ರಭಾ ನುಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಜರ್ಡಿನ್ ಡಿಸೋಜ, ಮೋಹನ್ ರಾಜ್, ಸುರೇಶ್ ಉಪಸ್ಥಿತರಿದ್ದರು.