ಪತ್ರಿಕೆಗಳು ಎಲ್ಲ ಆಯಾಮದಲ್ಲೂ ಕಾರ್ಯ ನಿರ್ಚಹಿಸಲಿ: ಡಾ. ನರೇಂದ್ರ ರೈ ದೇರ್ಲ
ಮಂಗಳೂರು, ಆ.28: ಪತ್ರಿಕೆಗಳ ಕೇಂದ್ರಿಕರಿಸುವ ವಿಚಾರ ವಿಷಯಗಳು ಭಿನ್ನವಾಗಬೇಕು. ಮಾಧ್ಯಮ ಇನ್ನೊಂದು ಮಾಧ್ಯಮವನ್ನು ವಿಶ್ಲೇಷಿಸುವ ಸನ್ನಿವೇಶದ ನಿರ್ಮಾಣವಾಗಬೇಕು. ಪ್ರತಿಯೊಬ್ಬರೂ ಪತ್ರಿಕೆ ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆಗ ಬರೆಯುವ ಹವ್ಯಾಸ ಬೆಳೆಯುತ್ತದೆ ಎಂದು ಅಂಕಣಕಾರ ನರೇಂದ್ರ ರೈ ದೇರ್ಲ ತಿಳಿಸಿದರು.
ನಗರದ ರೋಶನಿ ನಿಲಯದಲ್ಲಿ ದ.ಕ. ಜಿಲ್ಲಾ ಕಸಾಪ ಮತ್ತು ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ ಕನ್ನಡ ಸಂಘಗಳ ಸಹಭಾಗಿತ್ವದಲ್ಲಿ ವಿದ್ವಾನ್ ವಿ.ಬಿ. ಹೊಸಮನಿ, ಭಾರಧ್ವಾಜ ಪ್ರಕಾಶನ ಕೊಂಚಾಡಿ ಮಂಗಳೂರು ಇದರ ಕಲಾ ದರ್ಶನ ದತ್ತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪಕುಮಾರ ಕಲ್ಕೂರ, ಕನ್ನಡ ತನ್ನೊಳಗಿನ ಭಾಷೆಯಾಗಬೇಕು. ಆಗ ನಾಡು ನುಡಿ ಕುರಿತಂತೆ ಆಸಕ್ತಿ ಬೆಳೆಯುತ್ತದೆ. ಕನ್ನಡ ಕೇವಲ ಕನ್ನಡಿಗರಿಗೆ ಸೀಮಿತವಾಗಿರದೆ ಈ ನಾಡಿನಲ್ಲಿರುವ ಎಲ್ಲರದ್ದೂ ಆಗಬೇಕು. ಕನ್ನಡ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಕನ್ನಡೇತರರನ್ನು ಭಾಗಿಯಾಗಿಸುವ ಮೂಲಕ ನಾಡು, ನುಡಿಯ ಋಣ ಸಂದಾಯವಾಗುವಂತಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಶುಪಾಲೆ ಜ್ಯೂಲಿಯಟ್ ಸಿ.ಜೆ. ವಹಿಸಿದ್ದರು. ಈ ಸಂದರ್ಭ ಮಂಗಳೂರು ಘಟಕದ ಕಾರ್ಯದರ್ಶಿಗಳಾದ ಡಾ.ಎಸ್.ಪದ್ಮನಾಭ ಭಟ್ ಮತ್ತು ದೇವಕಿ ಅಚ್ಯುತ್, ಕೋಶಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಕಸಾಪ ಮಂಗಳೂರು ತಾಲೂಕು ಘಟಕಾಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ ಸ್ವಾಗತಿಸಿದರು. ಕಾಲೇಜಿನ ಕನ್ನಡ ಸಂಘದ ಅಧ್ಯಕ್ಷ ಓಬನಾಥ್ ವಂದಿಸಿದರು. ವಿದ್ಯಾರ್ಥಿನಿ ಸಿಸ್ಟರ್ ಜೊವಿಟ ನಿರೂಪಿಸಿದರು.