ಯಕ್ಷಗಾನ ವೇಷಧಾರಿ ಐತಪ್ಪ ಗೌಡಗೆ ಆಸ್ರಣ್ಣ ಪ್ರಶಸ್ತಿ
ಮಂಗಳೂರು, ಆ.28: ಕಳೆದ 3 ದಶಕಗಳಿಂದ ಕಟೀಲು ಮೇಳದಲ್ಲಿ ನಿರಂತರವಾಗಿ ಯಕ್ಷಗಾನ ವೇಷಧಾರಿಯಾಗಿ ಕಲಾ ಸೇವೆಗೈಯುತ್ತಿರುವ ಬಿ.ಐತಪ್ಪಗೌಡ ಅವರನ್ನು ಕಟೀಲು ಆಸ್ರಣ್ಣ ಶಿಷ್ಯವೃಂದದಿಂದ ನೀಡುವ ಪ್ರತಿಷ್ಠಿತ ಆಸ್ರಣ್ಣ ಪ್ರಶಸ್ತಿ-2018ಕ್ಕೆ ಆಯ್ಕೆಯಾಗಿದ್ದಾರೆ.
ಮಿತ್ತನಡ್ಕ ರಾಮಕೃಷ್ಣ ಕಮ್ತಿ ಅವರ ಶಿಷ್ಯ ಬಿ.ಐತಪ್ಪಗೌಡ ತನ್ನ 16ನೇ ವರ್ಷ ವಯಸ್ಸಿನಲ್ಲಿ ತಿರುಗಾಟವನ್ನು ಆರಂಭಿಸಿದ್ದಾರೆ. ಧರ್ಮಸ್ಥಳ, ಮೂಲ್ಕಿ, ಸುಬ್ರಹ್ಮಣ್ಯ, ವೇಣೂರು, ಚೌಡೇಶ್ವರಿ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ.
ಕಟೀಲು ಮೇಳವೊಂದರಲ್ಲಿ 28 ವರ್ಷಗಳಿಂದ ತಿರುಗಾಟ ನಡೆಸುತ್ತಿದ್ದಾರೆ. ಶುಂಭ, ರಾಮಾ, ಕುಂಭಕರ್ಣ, ಭೀಮ, ವೃತ್ರಾಸುರ, ಶೂರ್ಪನಖಿ, ತಾಟಕಿ, ಅಜಮುಖಿ, ಬಣ್ಣ, ಹೆಣ್ಣು ಬಣ್ಣ ವೇಷಗಳಲ್ಲಿ ವಿಶೇಷ ಪರಿಣತಿಯನ್ನು ಸಾಧಿಸಿದ್ದಾರೆ. ಪರಂಪರೆಯ ಯಕ್ಷಗಾನ ಬಯಲಾಟದ ಪೌರಾಣಿಕ ಸೊಗಡನ್ನು ಉಳಿಸಿ ಬೆಳೆಸುವಲ್ಲಿ ಅನುಪಮ ದೇಣಿಗೆ ನೀಡಿರುವ ಹಿರಿಯ ಕಲಾವಿದರು.
ಆಸ್ರಣ್ಣ ಪ್ರಶಸ್ತಿ ವಿತರಣಾ ಸಮಾರಂಭವು ಸೆ.1ರಂದು ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಸಭಾ ಭವನದಲ್ಲಿ ಜರಗಲಿದೆ ಎಂದು ಎಸ್.ಪ್ರದೀಪಕುಮಾರ ಕಲ್ಕೂರ ಹಾಗೂ ನವನೀತ ಶೆಟ್ಟಿ ಕದ್ರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.