ಪಣಿಯೂರು ರಸ್ತೆಯಲ್ಲಿ ದರೋಡೆ: ಇಬ್ಬರ ಬಂಧನ
ಪಡುಬಿದ್ರೆ, ಆ. 28 : ಬೈಕ್ನಲ್ಲಿ ಸಂಚರಿಸುತಿದ್ದ ವ್ಯಕ್ತಿಯೋರ್ವರ ಮೇಲೆ ಉಚ್ಚಿಲದ ಪಣಿಯೂರು ರಸ್ತೆಯ ದುರ್ಗಾನಗರ ಕ್ರಾಸ್ ಬಳಿ ಹಲ್ಲೆ ನಡೆಸಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಆರೀಫ್ ಸಾಹೇಬ್ ಯಾನೆ ಆರೀಫ್(21) ಮುದರಂಗಡಿ ಹಾಗೂ ಅಕ್ಬರ್ ಪಣಿಯೂರು(23) ಗುರುತಿಸಲಾಗಿದೆ. ಉಡುಪಿಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಕುಂಜೂರು ತೋಟದ ಮನೆ ನಿವಾಸಿ ಪವನ್ಕುಮಾರ್ ಎಂಬವರು ಬೈಕ್ನಲ್ಲಿ ಉಚ್ಚಿಲದ ಕಡೆಗೆ ಹೋಗುತ್ತಿದ್ದಾಗ ದುರ್ಗಾ ನಗರ ಕ್ರಾಸ್ ಬಳಿ ಹಿಂದಿನಿಂದ ಎರಡು ಬೈಕುಗಳಲ್ಲಿ ಬೈಕಲ್ಲಿ ಬಂದಿದ್ದ ಮೂವರು ಪವನ್ ಕುಮಾರ್ರಿಗೆ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ ನಾಲ್ಕೂವರೆ ಪವನಿನ ಚಿನ್ನದ ಸರ ಮತ್ತು 11500ರೂ. ನಗದೂ ಸೇರಿದಂತೆ ಒಟ್ಟು 1, 01,500 ರೂ. ಮೊತ್ತದ ಸೊತ್ತುಗಳನ್ನು ದರೋಡೆಗೈದಿದ್ದರು.
ಇನ್ನೋರ್ವ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇವರು ಕುಡಿತದ ಮತ್ತು ಗಾಂಜಾ ವ್ಯಸನಿಗಳಾಗಿದ್ದು ಈ ಘಟನೆಗೂ ಮುಂಚೆ ಕಳತ್ತೂರು ಬಾರ್ ಒಂದರಲ್ಲಿ ಸಾಲ ಮಾಡಿ ಕುಡಿದು ಸಾಲಕ್ಕೆ ತಮ್ಮ ಮೊಬೈಲ್ ಅಡವಿಟ್ಟು ಬಂದಿದ್ದರು. ಇದೇ ವೇಳೆ ದಾರಿಯಲ್ಲಿ ಸ್ಥಳೀಯರೊಬ್ಬರ ಮೇಲೂ ಹಲ್ಲೆಗೈದಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.