ಬಂಟ್ವಾಳ ಪುರಸಭಾ ಚುನಾವಣೆ: ಬಿಜೆಪಿ-ಎಸ್ಡಿಪಿಐ ನಡುವೆ ಸ್ಪರ್ಧೆ; ಹರಿಕೃಷ್ಣ ಬಂಟ್ವಾಳ
ಬಂಟ್ವಾಳ, ಆ. 27: ಬಂಟ್ವಾಳ ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಸ್ಡಿಪಿಐ ನಡುವೆ ನೇರ ಸ್ಪರ್ಧೆ ನಡೆಯಲಿದ್ದು, ಕಾಂಗ್ರೆಸ್ಗೆ ಮೂರನೆ ಸ್ಥಾನ ಸಿಗಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
ಮಂಗಳವಾರ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಮುಕ್ತ ಪುರಸಭೆಯನ್ನಾಗಿಸಲು ಬಿಜೆಪಿಗೆ ಬೆಂಬಲಿಸುವಂತೆ ಮನವಿ ಮಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ನಡೆದಿರುವ ಎಲ್ಲ ಅಕ್ರಮ ವ್ಯವಹಾರಗಳನ್ನು ತನಿಖೆ ನಡೆಸಲಿದೆ ಎಂದು ಭರವಸೆ ನೀಡಿದರು.
ತ್ಯಾಜ್ಯ ಸಂಗ್ರಹದ ಶುಲ್ಕ ವಸೂಲಿಯ ಬಗ್ಗೆ ಪುರಸಭೆಗೆ ಲೆಕ್ಕ ನೀಡದಿರುವುದು, ಪುರಸಭೆಯ ಕಾರ್ಮಿಕರಲ್ಲದವರಿಗೆ ಪಿಎಫ್-ಇಎಸ್ಐ ಸೌಲಭ್ಯ, ಮಫತ್ ಲಾಲ್ ಲೇಔಟ್ ಖಾಸಗಿ ಜಾಗಕ್ಕೆ ಸರಕಾರದ ಅನುದಾನ ಬಳಕೆ, 2017-18ನೆ ಸಾಲಿಗೆ ಮಂಡಿಸಲಾದ ಅಯ-ವ್ಯಯ ಮತ್ತು ಜಮಾಖರ್ಚಿನಲ್ಲಿ ಸುಮಾರು 57 ಲಕ್ಷ ರೂ. ವ್ಯತ್ಯಾಸ, ಸಮಗ್ರ ಒಳಚರಂಡಿ ಯೋಜನೆಯ ಕಳಪೆ ಕಾಮಗಾರಿ, ಟ್ರೀ ಪಾರ್ಕ್ನ ಕೋಣೆಯೊಂದಕ್ಕೆ ಲೈಟ್, ಫ್ಯಾನ್ಗೆ 10 ಸಾವಿರ ರೂ. ಬಿಲ್ಲು, ಪಾರ್ಕ್ ನಿರ್ವಹಣೆಗೆ 65 ಸಾವಿರ ರೂ., ಮಫತ್ಲಾಲ್ ಲೇಔಟ್ನಲ್ಲಿ ಅಧಿಕಾರಿಗಳಿಗೆ ಸಹಿತ ಕಾಂಗ್ರೆಸ್ ಮುಖಂಡರೊಬ್ಬರಿಗೆ ಸೈಟ್ ನೀಡಿಕೆ, ಅಕ್ರಮ ಕಟ್ಟಡಗಳಿಗೆ ಪರವಾನಿಗೆ ಹೀಗೆ ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತದಲ್ಲಾಗಿರುವ ಹಗರಣಗಳ ಆರೋಪಪಟ್ಟಿಯನ್ನು ದಾಖಲೆ ಸಮೇತವಾಗಿ ಬಿಡುಗಡೆಗೊಳಿಸಿದರು.
ಪುರಸಭೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯ ಸದಾಶಿವ ಬಂಗೇರ ಅವರು ಧ್ವನಿಯೆತ್ತಿದ್ದಾರೆ. ಅಲ್ಲದೆ, ಭ್ರಷ್ಟಚಾರಮುಕ್ತ ಆಡಳಿತ ನೀಡುವವರೆಗೆ ತಾನು ಗೌರವಧನ, ಉಪಾಹಾರ ಸ್ವೀಕರಿಸುವುದಿಲ್ಲ ಎಂದು ತಮ್ಮ ಪತ್ರ ಬರೆದಿದ್ದಾರೆ. ಇದಕ್ಕೆ ಕಾಂಗ್ರೆಸ್, ಸದಸ್ಯ ಸದಾಶಿವ ಬಂಗೇರ ಅವರನ್ನು ಬುಡಾ ಅಧ್ಯಕ್ಷರನ್ನಾಗಿ ಮಾಡಿತು ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಯು.ರಾಜೇಶ್ ನಾಯ್ಕ್, ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಪುರಸಭಾ ಸದಸ್ಯ ಗೋವಿಂದ ಪ್ರಭು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್, ಜಿಪಂ ಸದಸ್ಯೆ ಕಮಾಲಾಕ್ಷಿ ಪೂಜಾರಿ, ಮೋನಪ್ಪ ದೇವಸ್ಯ, ಜಿ.ಆನಂದ ಉಪಸ್ಥಿತರಿದ್ದರು.