ನಗರಸಭಾ ಚುನಾವಣೆಯಲ್ಲಿ ಬಿಜೆಪಿ ತಂತ್ರ ಫಲಿಸದು- ಎಂ.ಎಸ್. ಮಹಮ್ಮದ್
ಪುತ್ತೂರು, ಆ. 28: ಶಾಸಕಿ ಶಕುಂತಳಾ ಶೆಟ್ಟಿ ಅವರ ಶಾಸಕತ್ವದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದಿದ್ದರೂ ಬಿಜೆಪಿ ಸುಳ್ಳು ಪ್ರಚಾರ ಹಾಗೂ ಅಪಪ್ರಚಾರದ ಮೂಲಕ ಇಲ್ಲಿ ಗೆಲವು ಸಾಧಿಸಿದೆ. ಆದರೆ ನಗರಸಭಾ ಚುನಾವಣೆಯಲ್ಲಿ ಬಿಜೆಪಿಯ ಈ ತಂತ್ರ ಫಲಿಸದು, ಇಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಪಡೆಯಲಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಹೇಳಿದ್ದಾರೆ.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೋಮುವಾಧ, ಜಾತಿವಾದಗಳ ಮೂಲಕ ಜನರನ್ನು ಒಡೆದು ಆಳುತ್ತಿರುವ ಕೋಮುವಾದಿ ಬಿಜೆಪಿಯನ್ನು ಚುನಾವಣೆಯಲ್ಲಿ ಅಲ್ಪಸಂಖ್ಯಾತ ಬಂಧುಗಳು ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು. ಇಲ್ಲಿ ಸಾಕಷ್ಟು ಪ್ರಜ್ಞಾವಂತರು ಹಾಗೂ ಬುದ್ದಿವಂತ ಮತದಾರರಿದ್ದಾರೆ. ಅಪಪ್ರಚಾರದ ಮೂಲಕ ಬಿಜೆಪಿಗರಿಗೆ ಅವರ ಮತವನ್ನು ಪಡೆಯಲು ಸಾಧ್ಯವಿಲ್ಲ ಎಂದ ಅವರು ಅಲ್ಪ ಸಂಖ್ಯಾತರನ್ನು ತುಚ್ಚವಾಗಿ ಬಿಜೆಪಿ ಕಾಣುತ್ತಿದೆ. ಇತ್ತೀಚೆಗೆ ಶಾಸಕ ಯತ್ನಾಳ್ ತನ್ನ ಕಚೇರಿಗೆ ಬುರ್ಕಾ ಹಾಗೂ ಟೊಪ್ಪಿ ಹಾಕಿಕೊಂಡವರು ಬರಬಾರದು ಎಂಬ ಹೇಳಿಕೆ ನೀಡಿರುವುದು, ಈಶ್ವರಪ್ಪ ಅಲ್ಪ ಸಂಖ್ಯಾತರು ನಮ್ಮ ಕಚೇರಿಯ ಕಸ ಗುಡಿಸುವ ಕೆಲಸ ಮಾಡಲಿ ಎಂಬ ಹೇಳಿಕೆ ನೀಡಿರುವುದು ಅವರ ಮನೋಸ್ಥಿತಿಯನ್ನು ಸೂಚಿಸುತ್ತದೆ. ಸ್ವಾಭಿಮಾನಿ ಅಲ್ಪ ಸಂಖ್ಯಾತರು ಇದನ್ನು ತಡೆಯಲು ಕಾಂಗ್ರೆಸ್ ಬೆಂಬಲಿಸಬೇಕು ಎಂದರು.
ಕಾಂಗ್ರೆಸ್ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವ ಕೆಲಸ ಮಾಡಿದೆ. ಎಲ್ಲಾ ಸಮುದಾಯಕ್ಕೂ ಅವಕಾಶ ನೀಡುವ ಮೂಲಕ ನಗರಸಭೆಗೆ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ನಡುವೆ ಬಿಜೆಪಿ ಮುಖಂಡರು ಪುತ್ತೂರಿನ ಎಲ್ಲಾ 31 ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ ಎಂಬ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಅವರ ಕನಸು ಎಂದಿಗೂ ನನಸಾಗದು ಎಂದರು.
ನಗರಸಭಾ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದಿಂದ ಅಲ್ಪ ಸಂಖ್ಯಾತ ಸಮುದಾಯಕ್ಕೆ ಅನ್ಯಾಯವಾಗಿಲ್ಲ. ಕೆಲವರಿಗೆ ವೈಯಕ್ತಿಕ ಅನ್ಯಾಯ ಆಗಿರಬಹುದು ಆದರೆ ಅದು ಸಮುದಾಯಕ್ಕೆ ಆಗಿರುವ ಅನ್ಯಾಯವಲ್ಲ. 11 ಅಲ್ಪ ಸಂಖ್ಯಾತ ಅಭ್ಯರ್ಥಿಗಳನ್ನು ಪಕ್ಷವು ಕಣಕ್ಕಿಳಿಸಿದೆ ಎಂದ ಅವರು ಈಗಾಗಲೇ ತಮಗೆ ಅನ್ಯಾಯವಾಗಿದೆ ಎಂದು ಹೇಳುವ ಯಾರೂ ಪಕ್ಷದ ವಿರೋಧ ಮಾಡಲಾರರು. ಅವರೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಯತ್ನ ನಡೆಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪ ಸಂಖ್ಯಾತ ಮುಖಂಡರಾದ ಇಸಾಕ್ ಸಾಲ್ಮರ, ನಿರ್ಮಲ್ ಕುಮಾರ್ ಜೈನ್, ಯಾಕೂಬ್ ಹಾಜಿ, ವಲೇರಿಯನ್ ಡಯಾಸ್, ಮಹಮ್ಮದ್ ಫಾರೂಕ್ ಉಪಸ್ಥಿತರಿದ್ದರು.