ಮಂಗಳೂರಿನಲ್ಲಿ 'ನಮ್ಮ ಗೌರಿ' ಚಿತ್ರ ಪ್ರದರ್ಶನ, ವಿಚಾರ ಸಂಕಿರಣ
ಮಂಗಳೂರು, ಆ. 28: ಗೌರಿ ಲಂಕೇಶ್ ಬಳಗ ಆ.30ರಿಂದ ಸೆ. 5ರವರೆಗೆ ರಾಜ್ಯವ್ಯಾಪಿ ನಡೆಸಲಿರುವ "ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹದ" ಅಂಗವಾಗಿ ಆ. 30ರಂದು ಸಂಜೆ 4 ಗಂಟೆಗೆ ಮಂಗಳೂರಿನ ಅಲ್ ರಹಬಾ ಫ್ಲಾಝಾದಲ್ಲಿರುವ ಕ್ಯಾಂಪಸ್ ಕೆರಿಯರ್ ಅಕಾಡೆಮಿಯಲ್ಲಿ "ನಮ್ಮ ಗೌರಿ" ಚಿತ್ರ ಪ್ರದರ್ಶನ ಮತ್ತು ವಿಚಾರ ಸಂಕಿರಣ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗೌರಿ ಲಂಕೇಶ್ ಬಳಗದ ಸಂಚಾಲಕ ಇಸ್ಮತ್ ಪಜೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ. 30ರಂದು ಹಿರಿಯ ವಿದ್ವಾಂಸ ಡಾ.ಎಂ.ಎಂ.ಕಲ್ಬುರ್ಗಿ ಹತ್ಯೆಯಾಗಿ ಮೂರು ವರ್ಷ ಮತ್ತು ಸೆಪ್ಟೆಂಬರ್ ಐದಕ್ಕೆ ಖ್ಯಾತ ಪತ್ರಕರ್ತೆ ಮತ್ತು ಮಾನವ ಹಕ್ಕು ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷ ತುಂಬುತ್ತದೆ. ಈ ನಿಟ್ಟಿನಲ್ಲಿ ಈ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪೆಡಸ್ಟ್ರಿಯನ್ ಪಿಕ್ಚರ್ಸ್ ನಿರ್ಮಿಸಿದ ಗೌರಿ ಲಂಕೇಶ್ ಬದುಕು, ಬರಹ ಮತ್ತು ಚಳವಳಿಗಳ ಮೇಲೆ ಪಕ್ಷಿ ನೋಟ ಬೀರುವ ಚಿತ್ರವನ್ನು ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಪ್ರದರ್ಶಿಸಲಾಗುತ್ತಿದೆ. ವಿಚಾರ ಸಂಕಿರಣದ ಅಧ್ಯಕ್ಷತೆ ಯನ್ನು ಹಿರಿಯ ಲೇಖಕ ಹಾಗೂ ಮಾನವ ಹಕ್ಕು ಹೋರಾಟಗಾರ ಸುರೇಶ್ ಭಟ್ ಬಾಕ್ರಬೈಲ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕರಾದ ಪ್ರೊ. ಫಣಿರಾಜ್, ಡಾ.ವಾಸುದೇವ ಬೆಳ್ಳೆ ಮತ್ತು ದಲಿತ ಮುಖಂಡ ದೇವದಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.