ಅದೃಷ್ಟ ನಂಬಬೇಡಿ, ಪ್ರಯತ್ನ ಮುಖ್ಯ: ಡಾ.ಮೋಹನದಾಸ್ ಭಟ್
ಉಡುಪಿ, ಆ.29: ವಿದ್ಯಾರ್ಥಿಗಳು ತಮಗೆ ಲಭಿಸಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕಲಿಕೆಗೆ ಆದ್ಯತೆ ನೀಡಬೇಕು. ಕೇವಲ ಅದೃಷ್ಟ ವನ್ನು ನಂಬಿ ಪ್ರಯತ್ನದಿಂದ ವಿಮುಖರಾಗಬಾರದು ಎಂದು ಬೆಂಗಳೂರು ಎಂ.ಎಸ್.ರಾಮಯ್ಯ ಯುನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸ್ನ ಮಾಜಿ ನಿರ್ದೇಶಕ ಡಾ.ಮೋಹನದಾಸ್ ಭಟ್ ಹೇಳಿದ್ದಾರೆ.
ಉಡುಪಿ ಕನ್ನರ್ಪಾಡಿ ಜಯ ದುರ್ಗಾಪರಮೇಶ್ವರಿ ದೇವಳ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಕಿನ್ನಿಮೂಲ್ಕಿ ಕನ್ನರ್ಪಾಡಿ ಬ್ರಾಹ್ಮಣ ಸಭಾ ವಾರ್ಷಿಕೋತ್ಸವದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಭಾದ ಸದಸ್ಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡುತಿದ್ದರು.
ಮಣಿಪಾಲ ಎಂಐಟಿ ಸಹನಿರ್ದೇಶಕ(ಅಭಿವೃದ್ಧಿ) ಡಾ.ಸೋಮಶೇಖರ ಭಟ್, ಕನ್ನರ್ಪಾಡಿ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ವಿದ್ಯಾರ್ಥಿ ವೇತನ ಪ್ರಾಯೋಜಕ ಕೆ.ಆರ್.ಮಂಜ ಉಪಸ್ಥಿತರಿದ್ದರು. ಬ್ರಾಹ್ಮಣ ಸಭಾ ಅಧ್ಯಕ್ಷ ಕೆ.ರಘುಪತಿ ರಾವ್ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕಾರ್ಯದರ್ಶಿ ಜನಾರ್ದನ ಭಟ್ ಸ್ವಾಗತಿಸಿದರು. ಕೋಶಾಧಿಕಾರಿ ಮುರಳಿ ಕೃಷ್ಣ ಭಟ್ ವಂದಿಸಿದರು. ಸತೀಶ ರಾವ್ ಕಾರ್ಯಕ್ರಮ ನಿರೂಪಿಸಿದರು.