ಬೊಜ್ಜು ನಿವಾರಣಾ ಚಿಕಿತ್ಸಾ ಶಿಬಿರ
ಉಡುಪಿ, ಆ.29: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಸ್ವಸ್ಥ ರಕ್ಷಣಾ ವಿಭಾಗದ ವತಿಯಿಂದ ಸ್ಥೌಲ್ಯ(ಬೊಜ್ಜು) ನಿವಾರಣಾ ಚಿಕಿತ್ಸಾ ಶಿಬಿರದ ದ್ವಿತೀಯ ಸರಣಿಯನ್ನು ಆ.25 ರಿಂದ ಸೆ.3ರವರೆೆ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಬಿರವನ್ನು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ನವೀನ್ ಉದ್ಘಾಟಿಸಿ, ಇಂದಿನ ಆಧುನಿಕ ಯುಗದಲ್ಲಿ ಯಾಂತ್ರಿಕ ಜೀವನ ಶೈಲಿಯಿಂದ ಕಾಯಿಲೆಗಳು ಸರ್ವೆ ಸಾಮಾನ್ಯವಾಗಿದೆ. ಅನಿಯಮಿತ ಆಹಾರ ಸೇವನೆ ಮತ್ತು ವ್ಯಾಯಾಮದ ಕೊರತೆಯಿಂದ ಶರೀರದಲ್ಲಿ ಕೊಬ್ಬು ಸಂಗ್ರಹವಾಗಿ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಬರುತ್ತಿವೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ ಆಚಾರ್ಯ, ಸ್ವಸ್ಥವೃತ್ತ ವಿಭಾಗದ ಮುಖ್ಯಸ್ಥ ಡಾ.ಬಿ.ಆರ್.ದೊಡಮನಿ, ಸಹಪ್ರಾಧ್ಯಾಪಕರಾದ ಡಾ. ವಿಜಯ್ ನೆಗಳೂರು, ಡಾ.ಶ್ರೀನಿಧಿ ಧನ್ಯ, ಆಸ್ಪತ್ರೆಯ ಪ್ರಬಂಧಕ ಸಿ. ಶ್ರೀನಿವಾಸ ಹೆಗ್ಡೆ, ವೈದ್ಯಾಧಿಕಾರಿ ಡಾ.ರಶ್ಮಿ ಉಪಸ್ಥಿತರಿದ್ದರು.
ಸ್ವಸ್ಥರಕ್ಷಣಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಂದೇಶ್ ಕುಮಾರ್ ಶೆಟ್ಟಿ ಚಿಕಿತ್ಸೆಯ ಮಾಹಿತಿ ವಿವರಿಸಿದರು. ಸ್ವಸ್ಥವೃತ್ತ ವಿಭಾಗದ ಸಹಪ್ರಾಧ್ಯಾಪಕ ಡಾ.ಯೋಗೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.