ಮರಿಯಾಶ್ರಮ ಶಾಲಾ ಅಮೃತ ಮಹೋತ್ಸವ ಕಟ್ಟಡಕ್ಕೆ ಶಂಕು ಸ್ಥಾಪನೆ
ತಲಪಾಡಿ, ಆ.29: ಶಿಕ್ಷಣ ಸಂಸ್ಥೆಗಳಲ್ಲಿ ಹಳೆ ವಿದ್ಯಾರ್ಥಿಗಳ ರಚನಾತ್ಮಕ ಕಾರ್ಯ ಮಹತ್ವಪೂರ್ಣವಾದುದು. ಅದರಲ್ಲೂ ಪ್ರಾಥಮಿಕ ಶಿಕ್ಷಣ ಸಂಸ್ಥೆಯನ್ನು ಸದಾ ಸ್ಮರಿಸುವ, ಮರಿಯಾಶ್ರಮ ಹಳೆ ವಿದ್ಯಾರ್ಥಿ ಸಂಘದ ಕಾರ್ಯವೈಖರಿ ಶ್ಲಾಘನೀಯ ಎಂದು ಮರಿಯಾಶ್ರಮ ಶಾಲೆಯ ಸಂಚಾಲಕ ಧರ್ಮಗುರು ಎಡ್ವಿನ್ ಮಸ್ಕರೇನ್ಹಸ್ ಹೇಳಿದರು.
ಅವರು ಶಾಲೆಯ ಅಮೃತಮಹೋತ್ಸವ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಅಮೃತಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ಕಣ್ವತೀರ್ಥ ಮಾತನಾಡಿ, ಶಾಲೆಗೆ ಕರ್ನಾಟಕ ಗಡಿನಾಡ ಅಭಿವದ್ಧಿ ಪ್ರಾಧಿಕಾರ ಬಿಡುಗಡೆಗೊಳಿಸಿದ ಪ್ರಾರಂಭಿಕ ಹಂತದ ಸಹಾಯಧನ ಹಾಗೂ ಅದಕ್ಕಾಗಿ ಸಹಕರಿಸಿದ ಸಂಸದ ಡಾ.ಎಂ.ವೀರಪ್ಪಮೊಯ್ಲಿ ಹಾಗೂ ಸಚಿವ ಯು. ಟಿ.ಖಾದರ್ರನ್ನು ಅಭಿನಂದಿಸಿದರು. ಸುಮಾರು 65 ಲಕ್ಷ ರೂ. ಅಂದಾಜು ವೆಚ್ಚದ ಈ ಯೋಜನೆಯ ಬಗ್ಗೆ ಅವರು ವಿವರಿಸಿದರು.
ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ವಿನಯ ನಾಯಕ್ ಮಾತನಾಡಿ, ಯೋಜನೆಯ ಒಟ್ಟು ವೆಚ್ಚವನ್ನು ಸರಿದೂಗಿಸಲು ಹಳೆ ವಿದ್ಯಾರ್ಥಿಗಳ ವಿವಿಧ ಸ್ತರಗಳಲ್ಲಿ ಶ್ರಮಿಸಬೇಕೆಂದು ವಿನಂತಿಸಿದರು.
ಮುಖ್ಯ ಶಿಕ್ಷಕಿ ಮೇರಿ ಪಿಂಟೊ, ಮಧುಸೂದನ ಆಚಾರ್, ನಾರಾಯಣ ಪೂಜಾರಿ, ವಿನ್ಸೆಂಟ್ ಡಿಸೋಜ, ಮೂಸಾ ತಲಪಾಡಿ ಮುಂತಾದವರು ಉಪಸ್ಥಿತರಿದ್ದರು.
ವಿನೂ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಕಮಾಂಡರ್ ವಿಜಯ ಕುಮಾರ್ ಕಣ್ವತೀರ್ಥ ವಂದಿಸಿದರು. ಸಿದ್ದೀಕ್ ತಲಪಾಡಿ ಕಾರ್ಯಕ್ರಮ ನಿರ್ವಹಿಸಿದರು.