ಕಾಂಗ್ರೆಸ್ ಮುಕ್ತ ಭಾರತ ಅಸಾಧ್ಯ: ಪ್ರಮೋದ್
ಉಡುಪಿ, ಆ.29: ಕಾಂಗ್ರೆಸ್ ಮುಕ್ತ ಭಾರತ ಎಂಬುದು ಅಸಾಧ್ಯದ ಮಾತು. ಭೂಮಿಯ ಮೇಲೆ ಸೂರ್ಯ ಚಂದ್ರರಿರುವವರೆಗೆ ಭಾರತದಲ್ಲಿ ಕಾಂಗ್ರೆಸ್ ಪಕ್ಷವಿರುತ್ತದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನುಡಿದಿದ್ದಾರೆ.
ಉಡುಪಿಯ ಪ್ರೆಸ್ ಕ್ಲಬ್ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಕಾಂಗ್ರೆಸ್ ಪಕ್ಷ ದೇಶದ ಪ್ರಾಚೀನ ಪಕ್ಷವಾಗಿದ್ದು, ಅದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರಿಗೂ, ಯಾರಿಂದಲೂ ಸಹ ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಪಕ್ಷ ಎಂಬುದು ಆನೆಯಿದ್ದಂತೆ. ನೀವು ಆನೆಯ ಎಷ್ಟೇ ಚಿಕ್ಕ ಚಿತ್ರವನ್ನಾದರೂ ಬಿಡಿಸಿ. ಆದರೆ ಅದು ಆನೆಯಾಗಿಯೇ ಇರುತ್ತದೆ. ಒಂದು ವೇಳೆ ನಾನು ಸೇರಿದಂತೆ ಯಾರೂ ಪಕ್ಷ ಬಿಟ್ಟರೂ ಕಾಂಗ್ರೆಸ್ ಪಕ್ಷ ಉಳಿದಿರುತ್ತದೆ. ಹಾಗೆಂದು ನಾನು ಪಕ್ಷ ಬಿಡುವ ಯೋಚನೆ ಏನೂ ಇಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ಮತ್ತೆ ಗೆಲ್ಲಿಸಿ: ಐದು ವರ್ಷಗಳ ಹಿಂದೆ ಉಡುಪಿ ಜನತೆಯ ಆಶೀರ್ವಾದದಿಂದ ಕಾಂಗ್ರೆಸ್ಗೆ ನಗರಸಭೆಯಲ್ಲಿ ಆಡಳಿತದ ಅವಕಾಶ ದೊರೆಯಿತು. ಅದಕ್ಕೆ ಮೊದಲಿದ್ದ ಬಿಜೆಪಿಯ ಭ್ರಷ್ಟ ಆಡಳಿತದಿಂದ ಬೇಸತ್ತು ಜನತೆ ಕಾಂಗ್ರೆಸ್ಗೆ ಮತ ನೀಡಿದ್ದರು. ಆಗ ನಗರದಲ್ಲಿದ್ದ 8,500 ಸಂಪರ್ಕಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗದೇ ಪಕ್ಷ ಕೈಚೆಲ್ಲಿ ಕುಳಿತಿತ್ತು ಎಂದು ಪ್ರಮೋದ್ ನುಡಿದರು.
ಆದರೆ ಕಾಂಗ್ರೆಸ್ನ ಐದು ವರ್ಷಗಳ ಅವಧಿಯಲ್ಲಿ ಪಕ್ಷ ಭ್ರಷ್ಟಾಚಾರ ರಹಿತ ಆಡಳಿತ ನೀಡಿದೆ. ನಗರಸಭೆಯ ಯಾವೊಬ್ಬ ಕಾಂಗ್ರೆಸ್ ಸದಸ್ಯರ ಮೇಲೆ ಭ್ರಷ್ಟಾಚಾರದ ಆರೋಪಗಳಿಲ್ಲ. ಅಲ್ಲದೇ ಈ ಐದು ವರ್ಷಗಳಲ್ಲಿ 18,500 ಸಂಪರ್ಕಗಳಿಗೆ ಕುಡಿಯುವ ನೀರಿಗೆ ಯಾವುದೇ ಕೊರತೆಯಾಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಐದು ವರ್ಷಗಳಲ್ಲಿ ನಗರಸಭಾ ವ್ಯಾಪ್ತಿಯ ಜನತೆ ನೀರು ಸೇರಿದಂತೆ ಯಾವುದೇ ವಿಷಯಗಳಿಗಾಗಿ ಪ್ರತಿಭಟನೆ ನಡೆಸಿಲ್ಲ. ರಾಜಕೀಯ ಪ್ರೇರಿತವಾಗಿ ಬಿಜೆಪಿ ಒಂದು ಪ್ರತಿಭಟನೆ ನಡೆಸಿದ್ದು ಬಿಟ್ಟರೆ, ಕಾಂಗ್ರೆಸ್ ಆಡಳಿತಕ್ಕೆ ಯಾವುದೇ ವಿರೋಧ ಎದುರಾಗಿಲ್ಲ ಎಂದು ಪ್ರಮೋದ್ ನುಡಿದರು.
ಬಿಜೆಪಿ ಆಡಳಿತದ ಅವಧಿಯಲ್ಲಿ ನಗರಸಭೆಯ ಅಭಿವೃದ್ಧಿಗೆ ಕೇವಲ 103 ಕೋಟಿ ರೂ.ಗಳ ಅನುದಾನ ಬಂದಿದ್ದರೆ, ನಾನು ಶಾಸಕ, ಸಚಿವನಾಗಿ ನಗರಸಭೆಗೆ 503 ಕೋಟಿ ರೂ.ಅನುದಾನವನ್ನು ತಂದಿದ್ದೇನೆ. ಇದರಲ್ಲಿ ಈಗಾಗಲೇ 353 ಕೋಟಿ ರೂ.ಗಳ ಕಾಮಗಾರಿ ಅನುಷ್ಠಾನದ ವಿವಿಧ ಹಂತದಲ್ಲಿದೆ. ಈ ಎಲ್ಲಾ ಕಾಮಗಾರಿಗಳು ಸಾಂಗವಾಗಿ ನಡೆಯಲು ಆ.31ರಂದು ನಡೆಯುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಪಕ್ಷಕ್ಕೆ ಬಹುಮತ ನೀಡುವಂತೆ ವಿನಂತಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಪಪ್ರಚಾರದಿಂದ ನಮಗೆ ಸೋಲಾಗಿದೆ. ನಾವೂ ಚುನಾವಣೆ ಎದುರಿಸುವಲ್ಲಿ ಕೆಲವು ತಪ್ಪುಗಳನ್ನು ಮಾಡಿದ್ದೇವೆ. ಆದರೆ ಈ ಬಾರಿ ನಗರಸಭಾ ಚುನಾವಣೆಗೆ ಸಮರ್ಥ ಅಭ್ಯರ್ಥಿಗಳನ್ನು 35 ವಾರ್ಡುಗಳಲ್ಲೂ ಇಳಿಸಿದ್ದೇವೆ. ಅವರಿಗೆ ಮತ್ತೊಮ್ಮೆ ಆಶೀರ್ವದಿಸುವಂತೆ ತಾವು ಜನರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.
ನಗರದ ವಸತಿ ರಹಿತರಿಗಾಗಿ ಹೆರ್ಗ ಗ್ರಾಮದಲ್ಲಿ 695ಮಂದಿಗೆ ಜಾಗ ಗುರುತಿಸಲಾಗಿದ್ದು, ಹಕ್ಕು ಪತ್ರ ನೀಡಲು ರಾಜೀವಗಾಂಧಿ ವಸತಿ ನಿಗಮಕ್ಕೆ ಪತ್ರ ಹೋಗಿದೆ. ಚುನಾವಣೆ ಮುಗಿದ ತಕ್ಷಣ ಅವರಿಗೆ ಹಕ್ಕುಪತ್ರವನ್ನು ಹಂಚಲಾಗುವುದು. ವ್ಯಾಪಾರ ತೆರಿಗೆ ಕುರಿತಂತೆ ಬಿಜೆಪಿ ಜನರಿಗೆ ಸುಳ್ಳು ಭರವಸೆ ನೀಡಿ ತಪ್ಪು ದಾರಿಗೆಳೆಯುತ್ತಿದೆ. 1965ರಿಂದ ನಗರಸಭೆಯಲ್ಲಿ ತೆರಿಗೆ ಹೆಚ್ಚಿಸಿರಲಿಲ್ಲ. ಇದರಿಂದ ನಗರಸಭೆಗೆ ಬರುತ್ತಿರುವ ತೆರಿಗೆ 65 ಲಕ್ಷ ರೂ.ಆಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಅವರು ಕೇವಲ ಒಂದು ದಿನ ಮಾತ್ರ ಚುನಾವಣಾ ಪ್ರಚಾರ ಮಾಡಿರುವ ಕುರಿತು ಪ್ರಶ್ನಿಸಿದಾಗ, ಒಂದೇ ದಿನದಲ್ಲಿ ಅವರು ಕಾಂಗ್ರೆಸ್ ಪರವಾಗಿ ‘ಹವಾ ಎಬ್ಬಿಸಿದ್ದಾರೆ’. ಜಯಮಾಲ ಗ್ಲಾಮರಸ್ ಜಿಲ್ಲಾ ಉಸ್ತುವಾರಿ ಸಚಿವೆ ಎಂದು ಹೊಗಳಿದರು.
ಈ ಬಾರಿ ಬಿದ್ದ ಭಾರೀ ಮಳೆಗೆ ರಸ್ತೆಗಳೆಲ್ಲಾ ಹಾಳಾಗಿದ್ದು, ಇದರ ದುರಸ್ಥಿಗಾಗಿ ಸಚಿವ ಜಯಮಾಲ 75 ಕೋಟಿ ರೂ.ಗೆ ಮನವಿ ಮಾಡಿದ್ದು, ಸರಕಾರ 25 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಮಳೆ ನಿಂತ ತಕ್ಷಣ ದುರಸ್ಥಿ ಪ್ರಾರಂಭಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ನಾಯಕರಾದ ದಿವಾಕರ ಕುಂದರ್, ದಿನೇಶ್ ಪುತ್ರನ್, ಜನಾರ್ದನ್ ಭಂಡಾರ್ಕರ್, ಹರೀಶ್ ಕಿಣಿ, ಸತೀಶ್ ಅಮೀನ್ ಪಡುಕೆರೆ, ಕಿಶನ್ ಹೆಗ್ಡೆ, ಭಾಸ್ಕ್ ರಾವ್ ಕಿದಿಯೂರು ಉಪಸ್ಥಿತರಿದ್ದರು.