ಹಿಂದುಳಿದ ವರ್ಗದವರಿಗೆ ನ್ಯಾಯ ಕೊಟ್ಟ ದೇವರು ಕೃಷ್ಣ: ಪಲಿಮಾರು ಶ್ರೀ
ಉಡುಪಿ, ಆ. 29: ಎಲ್ಲರಿಗೂ ಇಷ್ಟ ಆಗುವ ಹಾಗೂ ಎಲ್ಲರಲ್ಲೂ ಇರುವ ಕೃಷ್ಣ ಇಡೀ ಜಗತ್ತಿನಲ್ಲಿ ತುಂಬಿದ್ದಾನೆ. ಮಕ್ಕಳಿಂದ ಹಿಡಿದು ರಾಜಕಾರಣಿಗಳಿಗೆ ಕೂಡ ಕೃಷ್ಣ ಬೇಕಾಗಿದ್ದಾನೆ. ಹಿಂದುಳಿದ ವರ್ಗದವರಿಗೆ ನ್ಯಾಯ ಕೊಟ್ಟ ದೇವರು ಕೃಷ್ಣ ಎಂದು ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪಲಿಮಾರು ಮಠದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಲೀಯೋತ್ಸವದ ಪ್ರಯುಕ್ತ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸಪ್ತಾಹವನ್ನು ಬುಧವಾರ ಉ್ಘಾಟಿಸಿ ಅವರು ಮಾತನಾಡುತಿದ್ದರು.
ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ದೇಶದ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕೃಷ್ಣ ಜನ್ಮಾಷ್ಟಮಿ ಯಂತಹ ಹಬ್ಬಗಳ ಆಚರಣೆಗಳು ಸಹಕಾರಿಯಾಗುತ್ತಿವೆ. ಎಲ್ಲ ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು. ಅಂತಹ ವಾತಾವರಣವನ್ನು ಸೃಷ್ಠಿ ಮಾಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮಾಹೆಯ ಉಪಕುಲಪತಿ ಡಾ.ಎಚ್.ಎಸ್. ಬಲ್ಲಾಳ್, ಬ್ರಹ್ಮಾವರ ಜಿ.ಎಂ.ವಿದ್ಯಾನಿಕೇತನದ ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕ ಪ್ರಕಾಶ್ಚಂದ್ರ ಶೆಟ್ಟಿ, ಉದ್ಯಮಿಗಳಾದ ರತ್ನಾಕರ ಶೆಟ್ಟಿ, ಚಂದ್ರಕಾಂತ್ ಶೆಟ್ಟಿ, ಬಾಲಾಜಿ ರಾಘವೇಂದ್ರ ಆಚಾರ್ಯ, ಉಡುಪಿ ಸಾಯಿಬಾಬ ಮಂದಿರದ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.