ಮೊಬೈಲ್ ಟವರ್ ಹೆಸರಲ್ಲಿ ವಂಚನೆ: ಓರ್ವನ ಬಂಧನ
ಕುಂದಾಪುರ, ಆ.29: ಮೊಬೈಲ್ ಟವರ್ ನಿರ್ಮಿಸುವ ಹೆಸರಿನಲ್ಲಿ ವಂಚಿಸಿದ ಬೆಳಗಾವಿ ಮೂಲ ವ್ಯಕ್ತಿಯೊಬ್ಬನನ್ನು ಕುಂದಾಪುರ ಪೊಲೀಸರು ಆ. 28ರಂದು ಬಂಧಿಸಿದ್ದಾರೆ.
ಬೆಳಗಾಂ ಮೂಲದ ಅಂತಾರಾಜ್ಯ ವಂಚಕ ಇಲಿಯಾಸ್ ಪಾಟಾನ್ ಬಂಧಿತ ಆರೋಪಿ. ಕುಂದಾಪುರದ ಕಲ್ಲುಕಂಬ ನಿವಾಸಿ ಜಿ.ಹಸೈನಾರ್ ಎಂಬವರ ಮನೆಗೆ ಆ.28ರಂದು ಬಂದ ಇಲಿಯಾಸ್, ರಿಲಾಯನ್ಸ್ ಕಂಪೆನಿ ಯ ಮೊಬೈಲ್ ಟವರ್ ನಿರ್ಮಿಸಲು ಜಾಗ ನೀಡಿದರೆ ತಿಂಗಳಿಗೆ 15 ಸಾವಿರ ರೂ. ಬಾಡಿಗೆ ನೀಡುವುದಾಗಿ ಹೇಳಿದ್ದನು.
ಅಲ್ಲಿಂದ ಜಾಗದ ನೋಂದಣಿಗಾಗಿ ಹಸೈನಾರ್ ಅವರನ್ನು ಕಾರಿನಲ್ಲಿ ತಹ ಶೀಲ್ದಾರರ ಕಚೇರಿಗೆ ಕರೆದುಕೊಂಡು ಬಂದು ಇಲಿಯಾಸ್, ಅದಕ್ಕಾಗಿ 7 ಸಾವಿರ ರೂ. ನಗದು ಹಾಗೂ ಮೊಬೈಲ್ ಪಡೆದು ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಕುರಿತು ಹಸೈನಾರ್ ನೀಡಿದ ದೂರಿನಂತೆ ಕುಂದಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ, ಪಾರಿಜಾತ ಸರ್ಕಲ್ ಬಳಿ ಮಾರುತಿ ಕಾರಿನಲ್ಲಿದ್ದ ಇಲಿಯಾಸ್ ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡರು. ಆತನ ಬಳಿಯಿದ್ದ 3,888 ರೂ. ನಗದು, ಸ್ಯಾಮ್ಸಂಗ್ ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಲಿಯಾಸ್ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಹಾಗೂ ಇತರ ರಾಜ್ಯ ಗಳಲ್ಲೂ ಈ ರೀತಿ ವಂಚನೆ ಮಾಡಿರುವುದು ತಿಳಿದುಬಂದಿದೆ. ಅಧಿಕಾರಿಗಳ ಸೋಗಿನಲ್ಲಿ ಮೋಸ ಮಾಡುತ್ತಿದ್ದ ಈತ, ತಹಶೀಲ್ದಾರ್, ಚುನಾವಣಾಧಿಕಾರಿ, ಭೂಸ್ವಾಧೀನಾಧಿಕಾರಿಗಳ ಪರಿಚಯವಿದೆಯೆಂದು ಹೇಳಿಕೊಂಡು ವಂಚನೆ ಎಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.