ದ.ಕ., ಮಂಗಳೂರಿಗೆ ಬೆಂಗಳೂರು ಮಾದರಿಯಲ್ಲಿ ಪೊಲೀಸ್ ಸಿಬ್ಬಂದಿ ನೇಮಕ: ಎಡಿಜಿಪಿ ಕಮಲ್ ಪಂತ್
ಶಿರೂರು ಸ್ವಾಮೀಜಿ ಸಾವು ಪ್ರಕರಣ: ಅಂತಿಮ ವರದಿಯನ್ನಾಧರಿಸಿ ಕ್ರಮ
ಮಂಗಳೂರು, ಆ.30: ಮಂಗಳೂರು ನಗರ ಮತ್ತು ದ.ಕ ಜಿಲ್ಲಾ ಪೊಲೀಸ್ ಇಲಾಖೆಗೆ ಬೆಂಗಳೂರು ಮಾದರಿಯಲ್ಲಿ ಪೊಲೀಸ್ ಸಿಬ್ಬಂದಿಯ ನೇಮಕಾತಿ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಎಡಿಜಿಪಿ ಕಮಲ್ ಪಂತ್ ತಿಳಿಸಿದ್ದಾರೆ.
ನಗರಕ್ಕೆ ಆಗಮಿಸಿದ ಅವರು ಇಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಗತ್ಯವಿರುವ ಪೊಲೀಸ್ ಸಿಬ್ಬಂದಿಯ ನೇಮಕಾತಿ ಬಗ್ಗೆ ಚರ್ಚಿಸಲಾಗಿದೆ. ದ.ಕ ಮತ್ತು ಮಂಗಳೂರು ಪೊಲೀಸ್ ವ್ಯಾಪ್ತಿಯಲ್ಲಿ ಕೆಲಸದ ಒತ್ತಡ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮವೀರ್ ಸಮಿತಿ ನೀಡಿರುವ ವರದಿಯ ಆಧಾರದಲ್ಲಿ ಬೆಂಗಳೂರು ಮಾದರಿಯಲ್ಲಿ ಇಲ್ಲಿ ಪೊಲೀಸ್ ಸಿಬ್ಬಂದಿಯ ನೇಮಕದ ಬಗ್ಗೆ ಚಿಂತನೆ ನಡೆದಿದೆ ಎಂದು ಎಡಿಜಿಪಿ ತಿಳಿಸಿದರು.
# ಶಿರೂರು ಸ್ವಾಮೀಜಿ ಸಾವು ಪ್ರಕರಣ: ಅಂತಿಮ ವರದಿಯನ್ನಾಧರಿಸಿ ಕ್ರಮ
ಶಿರೂರು ಮಠಾಧೀಶರಾಗಿದ್ದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಸಾವಿಗೆ ಸಂಬಂಧಿಸಿ ಮರಣೋತ್ತರ ವರದಿ ಮತ್ತು ಎಫ್ಎಸ್ಎಲ್ ವರದಿಯನ್ನು ತಾಳೆ ಹಾಕಲಾಗುತ್ತಿದೆ. ಇದರ ಅಂತಿಮ ವರದಿ ಬಂದ ಕೂಡಲೇ ಅದಕ್ಕನುಗುಣವಾಗಿ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಎಡಿಜಿಪಿ ತಿಳಿಸಿದರು.
ಸ್ವಾಮೀಜಿಯ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರು ಮಾಡಿದ್ದಾರೆ. ಫೊರೆನ್ಸಿಕ್ ತಜ್ಞರು ಎಫ್ಎಲ್ಎಲ್ ವರದಿ ನೀಡಿದ್ದಾರೆ. ಈ ಎರಡೂ ವರದಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಅಂತಿಮ ವರದಿ ನೀಡುವಂತೆ ಫೊರೆನ್ಸಿಕ್ ತಜ್ಞರನ್ನು ಕೇಳಲಾಗಿದೆ. ಜೊತೆಗೆ ಈ ಪ್ರಕರಣದಲ್ಲಿ ಸ್ವಾಮೀಜಿಯ ಸಾವು ವಿಷಪ್ರಾಶಣದಿಂದ ಆಗಿದೆ ಎಂದು ಕೆಎಂಸಿ ಯಾವ ಮಾನದಂಡವನ್ನಾಧರಿಸಿ ವರದಿ ನೀಡಿದೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕೋರಿದ್ದಾರೆ. ಈ ಸಂಬಂಧ ಮೂರು ಸುತ್ತಿನ ಪ್ರಶ್ನಾವಳಿ ನಡೆದಿದ್ದು, ಕೆಎಂಸಿ ಮೊದಲ ಸುತ್ತಿನ ಪ್ರಶ್ನೆಗೆ ಮಾತ್ರ ಉತ್ತರಿಸಿದೆ.ಈ ಸಂಬಂಧ ಕೆಎಂಸಿ ನೀಡುವ ವಿವರಣೆ ಸೇರಿದಂತೆ ಎಲ್ಲ ಮಾಹಿತಿಗಳನ್ನು ಕ್ರೋಡೀಕರಿಸಲಾಗುವುದು ಎಂದು ಕಮಲ್ ಪಂತ್ ವಿವರಿಸಿದರು.
# ಮಾದಕ ದ್ರವ್ಯ ನಿಯಂತ್ರಣಕ್ಕೆ ಕ್ರಮ
ದ.ಕ. ಜಿಲ್ಲೆಯಲ್ಲಿ ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಈ ಬಗ್ಗೆ ಇಂದಿನ ಪೊಲೀಸ್ ಅಧಿಕಾರಿಗಳ ಸಭೆಯಲ್ಲೂ ಚರ್ಚಿಸಲಾಗುವುದು. ಡ್ರಗ್ಸ್ ಮಾಫಿಯದಲ್ಲಿ ತೊಡಗಿರುವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.
# ಜೋಡುಪಾಲ ದುರಂತ: ದ.ಕ. ಜಿಲ್ಲಾಡಳಿತ, ಪೊಲೀಸ್ ಕಾರ್ಯವೈಖರಿಗೆ ಶ್ಲಾಘನೆ
ಇತ್ತೀಚೆಗೆ ಮಡಿಕೇರಿ ತಾಲೂಕು ವ್ಯಾಪ್ತಿಯ ಜೋಡುಪಾಲದಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದ ಸಂದರ್ಭ ರಕ್ಷಣಾ ಕಾರ್ಯಾಚರಣೆಯಲ್ಲಿ ದ.ಕ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಕಾರ್ಯವೈಖರಿ ಮಾದರಿಯಾಗಿತ್ತು ಎಂದು ಎಡಿಜಿಪಿ ಕಮಲ್ ಪಂತ್ ಮೆಚ್ಚುಗೆ ವ್ಯಕ್ತಪಡಿಸಿದರು.
ಜೋಡುಪಾಲ ನೆರೆಯ ಜಿಲ್ಲೆಯ ಭಾಗವಾಗಿದ್ದರೂ ಇಲ್ಲಿನ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ಬಹಳ ಮುತುವರ್ಜಿಯಿಂದ ಸಂತ್ರಸ್ತರ ರಕ್ಷಣೆಗೆ ಮುಂದಾಗಿದ್ದಲ್ಲದೆ, ಎಲ್ಲ ಅಗತ್ಯ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದಾರೆ. ಅವರ ಈ ಸೇವೆಯನ್ನು ಇಲಾಖೆ ಪರಿಗಣಿಸಿದ್ದು, ಸೂಕ್ತ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ದ.ಕ. ಎಸ್ಪಿರವಿಕಾಂತೇಗೌಡ, ಉಡುಪಿ ಎಸ್ಪಿಲಕ್ಷ್ಮಣ್ ನಿಂಬರಗಿ, ಡಿಸಿಪಿ ಉಮಾ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.