ಕಾಸರಗೋಡು ಜಿಲ್ಲೆಯ ಬಸ್ಗಳಲ್ಲಿಂದು ಟಿಕೆಟ್ ಬದಲು ಬಕೆಟ್!
ಕೇರಳ ಜಲ ಪ್ರಳಯಕ್ಕೆ ಖಾಸಗಿ ಬಸ್ ಮಾಲಕರು, ಸಿಬ್ಬಂದಿಯಿಂದ ಸಹಾಯಹಸ್ತ
ಕಾಸರಗೋಡು, ಆ.30: ಕೇರಳದಲ್ಲಿ ಉಂಟಾದ ಜಲ ಪ್ರಳಯ ಸಂತ್ರಸ್ತರಿಗೆ ಸಹಾಯಹಸ್ತ ಚಾಚಲು ಕಾಸರಗೋಡು ಜಿಲ್ಲಾ ಖಾಸಗಿ ಬಸ್ಸು ಮಾಲಕರು ಹಾಗೂ ಸಿಬ್ಬಂದಿ ಮುಂದಾಗಿದ್ದಾರೆ. ಇಂದಿನ ಟಿಕೆಟ್ ಕಲೆಕ್ಷನ್, ಜೊತೆಗೆ ನೌಕರರ ವೇತನವನ್ನು ಕೇರಳ ಮುಖ್ಯಮಂತ್ರಿಯವರ ನೆರೆ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಇಂದು ಖಾಸಗಿ ಬಸ್ಗಳಲ್ಲಿ ಟಿಕೆಟ್ ನೀಡುವ ಬದಲು ನಿರ್ವಾಹಕ ಬಕೆಟ್ ಹಿಡಿದುಕೊಂಡು ಪ್ರಯಾಣಿಕರ ಮುಂದೆ ಹಾಜರಾಗುತ್ತಿದ್ದಾರೆ. ಧನ ಸಂಗ್ರಹಕ್ಕಾಗಿ ನಡೆಯುವ ಇಂದಿನ ಬಸ್ ಯಾನಗಳಿಗೆ ‘ಕಾರುಣ್ಯ ಯಾತ್ರೆ’ ಎಂದು ಹೆಸರಿಡಲಾಗಿದೆ.
ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಸಜಿತ್ಬಾಬು ಕಾರುಣ್ಯ ಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭ ಸಾರಿಗೆ ಅಧಿಕಾರಿ ಕೆ.ಅಬ್ದುಲ್ ಶುಕೂರ್, ಡಿವೈಎಸ್ಪಿ ಪಿ.ಸುಕುಮಾರನ್, ಪ್ರೆಸ್ ಕ್ಲಬ್ ಅಧ್ಯಕ್ಷ ಟಿ.ಎ.ಶಾಫಿ, ಸಂಘದ ಜಿಲ್ಲಾ ಕಾರ್ಯದರ್ಶಿ ಸತ್ಯನ್ ಪೂಚಕ್ಕಾಡ್, ತಾಲೂಕು ಅಧ್ಯಕ್ಷ ಎನ್.ಎಂ.ಹಸೈನಾರ್, ಕಾರ್ಯದರ್ಶಿ ಸಿ.ಎ.ಮುಹಮ್ಮದ್ ಕುಂಞಿ, ಕೋಶಾಧಿಕಾರಿ ಶಂಕರ ನಾಯ್ಕ್, ಪಿ.ಎಂ.ಶ್ರೀಪತಿ, ಹುಸೈನಾರ್, ತಾರಾನಾಥ್, ಎನ್.ಎಂ.ಮುಹಮ್ಮದ್, ಕೆ.ಬಾಲನ್, ಇಬ್ರಾಹೀಂ, ಬಶೀರ್, ಸಲೀಂ, ರಾಜನ್ ಹಾಗೂ ಇತರ ಬಸ್ಗಳ ಮಾಲಕರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ 450ರಷ್ಟು ಖಾಸಗಿ ಬಸ್ಗಳು ಓಡಾಟ ನಡೆಸುತ್ತಿವೆ. ಈ ಬಸ್ಗಳಲ್ಲಿ ಇಂದು ಪ್ರಯಾಣಿಸುವ ಪ್ರಯಾಣಿಕರಿಗೆ ಟಿಕೆಟ್ ಲಭಿಸದು. ನಿರ್ವಾಹಕ ಬಕೆಟ್ ಹಿಡಿದುಕೊಂಡು ಧನಸಂಗ್ರಹ ಮಾಡುತ್ತಿದ್ದಾರೆ. ಸಂಗ್ರಹವಾದ ಮೊತ್ತವನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುತ್ತದೆ.