ಮನಪಾ ಕಂದಾಯ ಅಧಿಕಾರಿ ವರ್ಗಾವಣೆ ಪ್ರಕರಣ: ಲಿಖಿತ ಮನವಿಯೊಂದಿಗೆ ಸಚಿವರ ಭೇಟಿಗೆ ನಿರ್ಣಯ
* ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆ
ಮಂಗಳೂರು, ಆ.30: ಕಂದಾಯ ಇಲಾಖೆಯ ಹಿರಿಯ ಅಧಿಕಾರಿ ಪ್ರವೀಣ್ ಚಂದ್ರ ಕರ್ಕೇರ ಎಂಬವರನ್ನು ಇತ್ತೀಚೆಗೆ ಅನಧಿಕೃತ ಹೋರ್ಡಿಂಗ್ ತೆರವು ವಿಚಾರದಲ್ಲಿ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವು ಮನಪಾ ಸಾಮಾನ್ಯ ಸಭೆಯಲ್ಲಿಂದು ಪ್ರತಿಧ್ವನಿಸಿತು.
ಮೇಯರ್ ಭಾಸ್ಕರ ಕೆ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಸ್ಪರ ಚರ್ಚೆ, ಪ್ರತಿಪಕ್ಷದ ಆಕ್ಷೇಪದ ಬಳಿಕ, ‘ಪಾಲಿಕೆಯಲ್ಲಿ ಅಧಿಕಾರಿಗಳ ಕೊರತೆ ಇರುವುದರಿಂದ, ಈಗಾಗಲೇ ವರ್ಗಾವಣೆ ಮಾಡಿರುವ ಕಂದಾಯ ಅಧಿಕಾರಿಯನ್ನು ಮರು ನೇಮಕ ಮಾಡಬೇಕು’ ಎಂಬ ಲಿಖಿತ ಮನವಿಯೊಂದಿಗೆ ಪ್ರತಿಪಕ್ಷದ ಸದಸ್ಯರನ್ನು ಒಳಗೊಂಡು ನಿಯೋಗ ಸಚಿವರನ್ನು ಭೇಟಿಯಾಗಲು ನಿರ್ಣಯಿಸಲಾಯಿತು.
ಪ್ರತಿಪಕ್ಷದ ಸದಸ್ಯ ಸುಧೀರ್ ಶೆಟ್ಟಿ ವಿಷಯ ಪ್ರಸ್ತಾಪಿಸಿ, ನಗರ ಪಾಲಿಕೆಯಲ್ಲಿ ಈಗಾಗಲೇ ಸಾಕಷ್ಟು ಅಧಿಕಾರಿಗಳ ಕೊರತೆ ಇದೆ. ಇದರಿಂದಾಗಿ ತೆರಿಗೆ ಸಂಗ್ರಹ ಶೇ. 33ರಷ್ಟು ಮಾತ್ರವೇ ಆಗಿದೆ. ನಗರದಲ್ಲಿ ಸಾಕಷ್ಟು ಅನಧಿಕೃತ ಜಾಹೀರಾತುಗಳನ್ನು ಹಾಕಲಾಗಿದೆ. ನಗರದ ಪ್ರಮುಖ ಮಾರುಕಟ್ಟೆ ಪಾರ್ಕಿಂಗ್ನಿಂದ 7.25 ಲಕ್ಷ ರೂ. ಆದಾಯ ಸಂಗ್ರಹ ಆಗಬೇಕಾಗಿತ್ತು. ಸುರತ್ಕಲ್ ಮಾರುಕಟ್ಟೆಯಿಂದ 10 ಲಕ್ಷ ರೂ. ಬಾಕಿ ಇದೆ. ಆದರೆ ಅಧಿಕಾರಿಗಳ ಕೊರತೆಯಿಂದ ತೆರಿಗೆ ಸಂಗ್ರಹವಾಗದೆ ಪಾಲಿಕೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕಂದಾಯ ಇಲಾಖೆಯ ಓರ್ವ ಅಧಿಕಾರಿಯನ್ನು ಅನಧಿಕೃತ ಜಾಹೀರಾತು ತೆರವಿಗಾಗಿ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಭಾಸ್ಕರ ಕೆ., ಅನಧಿಕೃತ ಹೋರ್ಡಿಂಗ್ ತೆರವಿಗೆ ಆದೇಶ ನೀಡಿದ್ದು ಆಯುಕ್ತರು. ಆ ಕಾರಣಕ್ಕಾಗಿ ವರ್ಗಾವಣೆ ಆಗಿದ್ದರೆ ಆಯುಕ್ತರು ಆಗಬೇಕಿತ್ತಲ್ಲ ಎಂದು ಪ್ರಶ್ನಿಸಿದರು.
ಈ ಸಂದರ್ಭ ಸದಸ್ಯ ಮಧುಕಿರಣ್, ಹಾಗಾದರೆ ನಗರದಲ್ಲಿ ಅನಧಿಕೃತ ಹೋರ್ಡಿಂಗ್ ಕಾರ್ಯಾಚರಣೆ ಮುಂದುವರಿಸಿ ಎಂದಾಗ, ಮೇಯರ್, ಈ ಬಗ್ಗೆ ಹಿಂದಿನ ಸಭೆಯಲ್ಲೇ ನಿರ್ಣಯಿಸಲಾಗಿದೆ ಎಂದರು. ಈ ವೇಳೆ ಕೆಲ ಹೊತ್ತು ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಪಕ್ಷದ ಸದಸ್ಯರು ವರ್ಗಾವಣೆಗೊಂಡ ಕಂದಾಯ ಅಧಿಕಾರಿಯನ್ನು ಮರು ನೇಮಕ ಮಾಡುವಂತೆ ಆಗ್ರಹಿಸಿ ಮೇಯರ್ ಪೀಠದೆದುರು ತೆರಳಿ ಒತ್ತಾಯವನ್ನೂ ಮಾಡಿದರು. ಕೊನೆಗೆ ಮೇಯರ್ರವರು, ಈ ಬಗ್ಗೆ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಲು ನಿರ್ಧರಿಸಿದರು.
ಸದಸ್ಯರ ಅಸಮಾಧಾನಕ್ಕೆ ಕಾರಣವಾದ ದಾರಿದೀಪಗಳ ಸಮಸ್ಯೆ!
ನಗರದಲ್ಲಿ ದಾರಿದೀಪಗಳ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದೆ ಎಂಬ ಬಗ್ಗೆ ಅಸಮಾಧಾನ ಸಭೆಯಲ್ಲಿ ಸದಸ್ಯರನೇಕರಿಂದ ವ್ಯಕ್ತವಾಯಿತು. ವಿಷಯ ಪ್ರಸ್ತಾಪಿಸಿದ ಸದಸ್ಯ ಅಬ್ದುಲ್ ರವೂಫ್, ದಾರಿದೀಪಗಳ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಒದಗಿಸಬೇಕು. ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸದಸ್ಯರಾದ ಅಪ್ಪಿ, ರೇವತಿ, ಅಶೋಕ್ ಡಿ.ಕೆ., ಪುರುಷೋತ್ತಮ ಚಿತ್ರಾಪುರ, ಅಖಿಲಾ ಆಳ್ವ, ಆಶಾ ಡಿಸಿಲವಾ, ಅಝೀಝ್, ರತಿಕಲಾ, ಸುರೇಂದ್ರ ಮೊದಲಾದವರು ಕೂಡಾ ದಾರಿ ದೀಪಗಳ ಸಮಸ್ಯೆ ಬಗ್ಗೆ ದನಿಗೂಡಿಸಿದರು. ಆಯುಕ್ತ ಮುಹಮ್ಮದ್ ನಝೀರ್ ಪ್ರತಿಕ್ರಿಯಿಸಿ, ಗುತ್ತಿಗೆದಾರರ ಸಮಸ್ಯೆ ಆಗಿದ್ದಲ್ಲಿ ಅವರ ಟೆಂಡರ್ ರದ್ದುಪಡಿಸಿ, ಕಪ್ಪು ಪಟ್ಟಿಗೆ ಸಿದ್ಧಪಡಿಸಬೇಕು ಎಂದರು.
ಸಮಸ್ಯೆ ಅಧಿಕಾರಿಗಳದ್ದೋ, ಗುತ್ತಿಗೆದಾರರದ್ದೋ ನಮಗೆ ತಿಳಿಯದು. ಸಮಸ್ಯೆಯನ್ನು ಪರಿಹರಿಸಿ ಎಂದು ಪುರುಷೋತ್ತಮ ಚಿತ್ರಾಪುರ ಭಿನ್ನವಿಸಿದರು.
ಸದಸ್ಯೆ ಅಪ್ಪಿ ಮಾತನಾಡಿ, ಪುರಭವನಕ್ಕೆ ಕುದ್ಮುಲ್ ರಂಗರಾವ್ ಹೆಸರಿಟ್ಟಿರುವುದು ಸ್ವಾಗತಾರ್ಹ. ಪ್ರತಿ ವರ್ಷ ಮನಪಾ ವತಿಯಿಂದ ಅವರ ಜನ್ಮ ದಿನವನ್ನು ಆಚರಿಸಬೇಕೆಂದು ಒತ್ತಾಯಿಸಿದರು. ಉಪ ಮೇಯರ್ ಮುಹಮ್ಮದ್ ಕೆ., ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ, ನವೀನ್ ಡಿಸೋಜ, ರಾಧಾಕೃಷ್ಣ, ಲತಾ ಸಾಲ್ಯಾನ್, ಆಯುಕ್ತ ಮುಹ್ಮಮದ್ ನಝೀರ್ ಉಪಸ್ಥಿತರಿದ್ದರು.
112ಸಿಯಡಿ ಮನೆ ನಂಬ್ರ: ಆ.31ರಿಂದಲೇ ಕಾರ್ಯಾಚರಣೆ
ಕಳೆದ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ 112ಸಿಯಡಿ ಮನೆ ನಂಬ್ರ ನೀಡಿಕೆಗೆ ಸಂಬಂಧಿಸಿ ಇಂದಿನ ಸಭೆಯಲ್ಲೂ ಸದಸ್ಯರು ಆಕ್ಷೇಪಿಸಿದರು.
ಕಳೆದ ಸಭೆಯಲ್ಲಿ ಮೇಯರ್ 112ಸಿಯಡಿ 1000 ಚದರ ಅಡಿಯ ಮನೆಗಳಿಗೆ ಮನೆ ನಂಬ್ರವನ್ನು ಸ್ಥಳ ಪರಿಶೀಲನೆ ಮಾಡಿ ಒದಗಿಸುವುದಾಗಿ ನಿರ್ಣಯ ಮಾಡಿದ್ದರೂ ಒಂದು ತಿಂಗಳಾದರೂ ಯಾರಿಗೂ ಮನೆ ನಂಬ್ರ ನೀಡಿಲ್ಲ ಎಂದು ಪ್ರೇಮಾನಂದ ಶೆಟ್ಟಿ ಹಾಗೂ ಸುಧೀರ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ವಾಸ್ತವ್ಯದ ಉದ್ದೇಶಕ್ಕೆ ಮನೆ ನಂಬ್ರ ನೀಡಲಾಗುತ್ತಿದೆ ಎಂದು ಮೇಯರ್ ತಿಳಿಸಿದಾಗ, ಒಂದು ತಿಂಗಳಲ್ಲಿ ಎಷ್ಟು ಮನೆ ನಂಬ್ರ ನೀಡಲಾಗಿದೆ ಎಂದು ಪ್ರತಿಪಕ್ಷದ ಸದಸ್ಯರು ಪ್ರಶ್ನಿಸಿದರು.
ಕಂದಾಯ ಇಲಾಖೆಯ ಅಧಿಕಾರಿ ಪ್ರತಿಕ್ರಿಯಿಸಿ, 112ಸಿಯಡಿ 13 ಅರ್ಜಿಗಳು ಬಂದಿದ್ದು, 7 ಅರ್ಜಿಗಳ ಸ್ಥಳ ಪರಿಶೀಲನೆ ಮಾಡಲಾಗಿದೆ ಎಂದರು. 112ಸಿ ದುರುಪಯೋಗಪಡಿಸಿಕೊಂಡು ಕೆಲವರು ವಾಣಿಜ್ಯ ಕಟ್ಟಡಕ್ಕೆ ಮನೆ ನಂಬ್ರ ಪಡೆದುಕೊಂಡಿದ್ದಾರೆ ಎಂದು ಸದಸ್ಯ ದೀಪಕ್ ಪೂಜಾರಿ ಸಭೆಯಲ್ಲಿ ಆಕ್ಷೇಪಿಸಿದರು.
ಈ ವಿಷಯದ ಬಗ್ಗೆ ಕೆಲ ಹೊತ್ತಿನ ಚರ್ಚೆಯ ಬಳಿಕ ಪ್ರತಿಕ್ರಿಯಿಸಿದ ಆಯುಕ್ತ ಮುಹಮ್ಮದ್ ನಝೀರ್, ಮೇಯರ್ರ ನಿರ್ದೇಶನದ ಮೇರೆಗೆ 1,000 ಚದರ ಅಡಿಯಲ್ಲಿ ವಾಸ್ತವ್ಯದ ಮನೆ ನಿರ್ಮಾಣಕ್ಕೆ ಮನೆ ನಂಬ್ರ ನೀಡಲು ಸ್ಥಳ ಪರಿಶೀಲನೆ ಮಾಡಿ ದುಪ್ಪಟ್ಟು ತೆರಿಗೆ ಹಾಕಿ ಮನೆ ನಂಬ್ರ ನೀಡಲಾಗುವುದು. ಶುಕ್ರವಾರದಿಂದಲೇ ಆ ಬಗ್ಗೆ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಭರವಸೆ ನೀಡಿದರು.
ಶ್ರೀಮಂತರಿಗೊಂದು- ಬಡವರಿಗೊಂದು ನ್ಯಾಯ!
ಹಾಲಿ- ಮಾಜಿ ಮೇಯರ್ಗಳ ಮಾತಿನ ಚಕಮಕಿ
ಮನಪಾದಲ್ಲಿ ಶ್ರೀಮಂತರಿಗೆ ಒಂದು ನ್ಯಾಯ? ಬಡವರಿಗೆ ಒಂದು ನ್ಯಾಯವೇ ಎಂದು ಮಾಜಿ ಮೇಯರ್ ಕವಿತಾ ಸನಿಲ್ ಹಾಲಿ ಮೇಯರ್ರನ್ನು ಪ್ರಶ್ನಿಸಿದ ಪ್ರಸಂಗವೂ ಸಭೆಯಲ್ಲಿ ನಡೆಯಿತು.
ಪಚ್ಚನಾಡಿ ಆಶ್ರಯ ಕಾಲನಿಯಲ್ಲಿ 1.5 ಸೆಂಟ್ಸ್ ಜಾಗದಲ್ಲಿದ್ದ ರಿಕ್ಷಾ ಚಾಲಕರೊಬ್ಬರ ಮನೆಯನ್ನು ಕೆಡವಿ ಹಾಕಲಾಗಿದೆ. ಆದರೆ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ, ಅನಧಿಕೃತ ಕಟ್ಟಡಗಳು, ಮಸಾಜ್ ಪಾರ್ಲರ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗುತ್ತಿಲ್ಲ. ನ್ಯಾಯಾಲಯದಿಂದ ಆದೇಶ ಆದ 52 ಕಟ್ಟಡಗಳ ತೆರವಿಗೆ ಕ್ರಮವಾಗಿಲ್ಲ. ಆದರೆ ಬಡಪಾಯಿಯ ಮನೆಯನ್ನು ನೆಲಸಮ ಮಾಡಿದ್ದು ಯಾಕೆ ಎಂದು ಕವಿತಾ ಸನಿಲ್ ಪ್ರಶ್ನಿಸಿದರು.
ಮೇಯರ್ ಭಾಸ್ಕರ್ ಕೆ. ಪ್ರತಿಕ್ರಿಯಿಸುತ್ತಾ, ನೀವು ಅಧಿಕಾರದಲ್ಲಿದ್ದಾಗ ತೆಗೆಸಬಹುದಿತ್ತಲ್ಲಾ ಎಂಬ ಪ್ರಶ್ನೆಗೆ, ನಾನು ಮೇಯರ್ ಆಗಿದ್ದಾಗ, ಸಾಕಷ್ಟು ದಾಳಿ, ಕ್ರಮಗಳನ್ನು ಮಾಡಲಾಗಿದೆ ಎಂದು ಕವಿತಾ ಸನಿಲ್ ಉತ್ತರಿಸಿದರು.
ಅವರ ಮಾತುಗಳಿಗೆ ಪ್ರತಿಯಾಗಿ ಮೇಯರ್ ಭಾಸ್ಕರ ಮೊಯ್ಲಿ, ನೀವು ಏನೆಲ್ಲಾ ಮಾಡಿದ್ದೀರಿ ಎಂಬುದು ಗೊತ್ತಿದೆ ಎಂದು ಕೊಂಕು ಮಾತನಾಡಿದರು. ಇದರಿಂದಾಗಿ ಕೆಲಕ್ಷಣ ಸಭೆಯು ಹಾಲಿ ಹಾಗೂ ಮಾಜಿ ಮೇಯರ್ಗಳ ನಡುವೆ ಮಾತಿನ ಚಕಮಕಿಗೆ ಸಾಕ್ಷಿಯಾಯಿತು.