ಮಂಗಳೂರು: ಕೃಷಿ ಸಾಲ ಮನ್ನಾ ನೀತಿಯ ವಿರುದ್ಧ ಪ್ರತಿಭಟನೆ
ಮಂಗಳೂರು,ಆ.30: ರಾಜ್ಯ ಸರಕಾರದ ಕೃಷಿ ಸಾಲ ಮನ್ನಾ ನೀತಿ ಅಸಮರ್ಪಕ ಮತ್ತು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಸಹಕಾರ ಭಾರತಿಯು ಗುರುವಾರ ದ.ಕ. ಜಿಲ್ಲಾಧಿಕಾರಿಯ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಸಾಲಮನ್ನಾಕ್ಕೆ ಸೂಕ್ತ ಮಾರ್ಗಸೂಚಿ ರಚಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಸಹಕಾರ ಸಂಘಗಳ ಸಾಲ ಮನ್ನಾದ ಬಗ್ಗೆ ಅಧಿಸೂಚನೆ ಹೊರಡಿಸಿರುವ ಸರಕಾರವು ವಾಣಿಜ್ಯ ಬ್ಯಾಂಕ್ಗಳಲ್ಲಿರುವ ಕೃಷಿ ಸಾಲದ ಬಗ್ಗೆ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಈ ಮಧ್ಯೆ ಹೊರಡಿಸಿರುವ ನೂತನ ಅಧಿಸೂಚನೆಯಲ್ಲಿ ಕೃಷಿ ಸಾಲಗಾರರು ಯಾವುದೇ ಸಹಕಾರಿ ಸಂಸ್ಥೆ ಮತ್ತು ವಾಣಿಜ್ಯ ಬ್ಯಾಂಕ್ಗಳಲ್ಲಿ ನಿರಖು ಠೇವಣಿ ಹೊಂದಿದ್ದರೆ ಅಷ್ಟು ಮೊತ್ತವನ್ನು ಲಭ್ಯ ಸಾಲ ಮನ್ನಾದಿಂದ ಕಡಿತ ಮಾಡಲಾಗುವುದು ಎಂದು ತಿಳಿಸಿರುವುದು ಖಂಡನೀಯ ಮತ್ತು ರೈತ ವಿರೋಧಿ ಸುತ್ತೋಲೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರೈತರ ಮಕ್ಕಳು ತಮ್ಮ ಮದುವೆ, ವಿದ್ಯಾಭ್ಯಾಸ, ಮನೆ ದುರಸ್ತಿ, ಆರೋಗ್ಯ ಇತ್ಯಾದಿ ಕನಿಷ್ಠ ಆವಶ್ಯಕತೆಗಾಗಿ ಉಳಿತಾಯ ಮಾಡಿರುವ ಹಣದ ಮೇಲೆ ಸರಕಾರ ಕಣ್ಣು ಹಾಕಿರುವುದು ಸರಿಯಲ್ಲ. ರೈತರ ಮೇಲೆ ಸರಕಾರಕ್ಕೆ ನಿಜಕ್ಕೂ ಕಾಳಜಿ ಇದ್ದರೆ ತಕ್ಷಣ ಈ ಅಧಿಸೂಚನೆಯನ್ನು ವಾಪಸ್ ಪಡೆಯಬೇಕು. ಮತ್ತು ಕೊಡಗು ಮತ್ತು ದ.ಕ. ಸಹಿತ ಅನೇಕ ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತಿತರ ಕಾರಣದಿಂದ ಅಪಾರ ಪ್ರಮಾಣದ ಕೃಷಿ ನಾಶವಾಗಿದೆ. ಹಾಗಾಗಿ ಸರಕಾರ ನಷ್ಟಕ್ಕೊಳಗಾದ ರೈತರಿಗೆ ಯಾವುದೇ ಷರತ್ತು ವಿಧಿಸದೆ ಸಾಲ ಮನ್ನಾ ಮಾಡಬೇಕಯ ಮತ್ತು ಸೂಕ್ತ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಹಕಾರ ಭಾರತಿಯ ರಾಜ್ಯ ಸಂಘಟನಾ ಪ್ರಮುಖ್ ಎಸ್.ಆರ್.ಸತೀಶ್ಚಂದ್ರ, ಪ್ರಾಂತ ಸಹ ಸಂಘಟನಾ ಪ್ರಮುಖ್ ಹರೀಶ್ ಆಚಾರ್ಯ, ಪ್ರಾಂತ ಮಹಿಳಾ ಸಂಘಟನಾ ಪ್ರಮುಖ್ ಸುಮನಾ ಶರಣ್, ದ.ಕ.ಜಿಲ್ಲಾಧ್ಯಕ್ಷ ಕೃಷ್ಣ ಪ್ರಸಾದ್ ಮಡ್ತಿಲ, ಮಂಗಳೂರು ಮಹಾನಗರ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮತ್ತಿತರರು ಪಾಲ್ಗೊಂಡಿದ್ದರು.