ಚಾರ್ಮಾಡಿ ಘಾಟಿಯಲ್ಲಿ ರಾತ್ರಿಯ ವೇಳೆ ಪ್ರತಿ ದಿನ ಟ್ರಾಫಿಕ್ ಜಾಮ್
ಬೆಳ್ತಂಗಡಿ, ಆ. 30: ಚಾರ್ಮಾಡಿ ಘಾಟಿಯಲ್ಲಿ ರಾತ್ರಿಯ ವೇಳೆ ಪ್ರತಿ ದಿನ ಟ್ರಾಫಿಕ್ ಜಾಮ್ ಆಗುತ್ತಿದ್ದು, ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗಿನ ಜಾವದವರೆಗೂ ಆಗಾಗ ವಾಹನ ಸಂಚಾರ ಸ್ಥಗಿತಗೊಳ್ಳುತ್ತಿತ್ತು. ಘಾಟಿಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಘನ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೂ ರಾತ್ರಿಯ ವೇಳೆ ಖಾಸಗಿ ಬಸ್ಸುಗಳು ನೂರಾರು ಸಂಖ್ಯೆಯಲ್ಲಿ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದು ದೊಡ್ಡ ವಾಹನಗಳು ತಿರುವುಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದೆ. ರಾತ್ರಿಯ ವೇಳೆ ಈ ರೀತಿಯಾಗಿ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ.
ಚಾರ್ಮಾಡಿ ಘಾಟಿಯ ಮೂಲಕ ಘನ ವಾಹನಗಳ ಸಂಚಾರಕ್ಕೆ ಸಂಚಾರಿ ಪೋಲೀಸರು ಸಂಪೂರ್ಣ ತಡೆ ಹಾಕಿದ ಹಿನ್ನಲೆಯಲ್ಲಿ ಸರುಕುಗಳನ್ನು ಹೊತ್ತ ಘನ ವಾಹನಗಳನ್ನು ಬುಧವಾರ ಬೆಳಗಿನಿಂದಲೇ ಗುರುವಾಯನಕೆರೆ ಪರಿಸರದಲ್ಲಿ ತಡೆ ಹಿಡಿಯಲಾಗಿತ್ತು. ಇದರಿಂದಾಗಿ ಈ ವಾಹನಗಳನ್ನು ಗುರುವಾಯನಕೆರೆಯ ರಸ್ತೆಗಳ ಬದಿಯಲ್ಲಿಯೇ ನಿಲ್ಲಿಸಲಾಗಿದ್ದು ಇದು ಮೊದಲೇ ಇಕ್ಕಟ್ಟಾದ ಗುರುವಾಯನಕೆರೆ ಪೇಟೆಯಲ್ಲಿ ವಾಹನ ಸಂಚಾರವನ್ನು ಮತ್ತಷ್ಟು ಅಸ್ತವ್ಯಸ್ತಗೊಳಿಸಿತ್ತು. ಇದನ್ನು ತಿಳಿದು ಗುರುವಾಯನಕೆರೆಗೆ ಆಗಮಿಸಿದ ಬೆಳ್ತಂಗಡಿ ತಹಶೀಲ್ದಾರ್ ಮದನ್ಮೋಹನ್ ಅವರೇ ರಸ್ತೆಗಿಳಿದು ಸಂಚಾರ ನಿಯಂತ್ರಣ ಮಾಡಿದ್ದಲ್ಲದೆ ನಿಲ್ಲಿಸಲಾಗಿದ್ದ ಎಲ್ಲ ಸರಕು ವಾಹನಗಳನ್ನೂ ಚಾರ್ಮಾಡಿ ಘಾಟಿಯ ಮೂಲಕ ತೆರಳಲು ಅವಕಾಶ ನೀಡಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗು ಪ್ರಕೃತಿ ವಿಕೋಪದಿಂದ ಆಗುವ ಅಪಾಯಗಳ ಮುನ್ನಚ್ಚೆರಿಕೆಯಾಗಿ ಜಿಲ್ಲಾಡಳಿತ ಘನ ವಾಹನಗಳಿಗೆ ನಿರ್ಬಂಧ ವಿಧಿಸಿತ್ತು. ಶಿರಾಡಿ ಹಾಗು ಸಂಪಾಜೆ ಘಾಟಿ ರಸ್ತೆ ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ಘನ ವಾಹನಗಳು ಚಾರ್ಮಾಡಿ ರಸ್ತೆಯನ್ನು ಅವಲಂಬಿಸಿವೆ. ತಾಲೂಕಿನ ಗುರುವಾಯನಕೆರೆ, ಉಜಿರೆ, ಬೆಳ್ತಂಗಡಿಯ ಮತ್ತಿತರ ಪ್ರಮುಖ ಪಟ್ಟಣಗಳಲ್ಲಿ ಘನ ವಾಹನಗಳನ್ನು ತಡೆಹಿಡಿದಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು.
ಇದೀಗ ಚಾರ್ಮಾಡಿ ಘಾಟಿಯ ಮೂಲಕವಾಗಿ ಎಲ್ಲ ರೀತಿಯ ಸರಕು ಸಾಗಾಟದ ವಾಹನಗಳೂ ಸಂಚರಿಸುತ್ತಿದ್ದು ವಾಹನಗಳ ದಟ್ಟಣೆಯಿಂದಾಗಿ ಆಗಾಗ ಘಾಟಿ ರಸ್ತೆ ಬ್ಲಾಕ್ ಆಗುತ್ತಿದೆ.