ಉಡುಪಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಮತದಾರರ ವಿವರ
ಉಡುಪಿ, ಆ.30: ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಮತದಾರರ ಹಾಗೂ ಮತಗಟ್ಟೆಯ ವಿವರ ಕೆಳಕಂಡಂತಿದೆ.
ಉಡುಪಿ ನಗರ ಸಭೆಯ 35 ವಾರ್ಡುಗಳಲ್ಲಿ 98 ಮತಗಟ್ಟೆಗಳಿದ್ದು, ಒಟ್ಟು 97,561 ಮತದಾರಿದ್ದಾರೆ. ಇವರಲ್ಲಿ 47,538 ಪುರುಷರು, 50,022 ಮಹಿಳೆಯರು ಹಾಗೂ ಒಬ್ಬ ಇತರರು ಸೇರಿದ್ದಾರೆ. ಕುಂದಾಪುರ ಪುರಸಭೆಯ 23 ವಾರ್ಡುಗಳಲ್ಲಿ 23 ಮತಗಟ್ಟೆಗಳಿದ್ದು, 11,292 ಪುರುಷರು, 12,010 ಮಹಿಳೆಯರು ಸೇರಿದಂತೆ ಒಟ್ಟು 23,302 ಮತದಾರರು ಇದ್ದಾರೆ. ಕಾರ್ಕಳ ಪುರಸಭೆಯ 23 ವಾರ್ಡುಗಳಲ್ಲಿ 23 ಮತಗಟ್ಟೆಗಳಿದ್ದು, 9,879 ಮಂದಿ ಪುರುಷರು, 10,725 ಮಂದಿ ಮಹಿಳೆಯರು ಸೇರಿ ಒಟ್ಟು 20,604 ಮಂದಿ ಮತದಾರರಿದ್ದಾರೆ.
ಸಾಲಿಗ್ರಾಮ ಪಟ್ಟಣ ಪಂಚಾಯತ್ನ 16 ವಾರ್ಡುಗಳಲ್ಲಿ 16 ಮತಗಟ್ಟೆ ಗಳಿದ್ದು, 6,213 ಮಂದಿ ಪುರುಷರು, 6,748 ಮಂದಿ ಮಹಿಳೆಯರು ಸೆೀರಿ ಒಟ್ಟು 12,961 ಮತದಾರರಿದ್ದಾರೆ.
ಚುನಾವಣೆಗೆ ಬಳಸಲಾಗುವ ಇವಿಎಂಗಳ ಸಂಖ್ಯೆ: ಉಡುಪಿ ನಗರಸಭೆಗೆ 98, ಕುಂದಾಪುರ ಪುರಸಭೆಗೆ 23, ಕಾರ್ಕಳ ಪುರಸಭೆಗೆ 23 ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ಗೆ 16. ಚುನಾವಣೆಗೆ ನೇಮಕ ಮಾಡಲಾದ ಮತಗಟ್ಟೆ ಮಟ್ಟದ ಅಧಿಕಾರಿಗಳ ವಿವರ: ಉಡುಪಿ ನಗರಸಭೆಗೆ 98, ಕುಂದಾಪುರ ಪುರಸಭೆಗೆ 23, ಕಾರ್ಕಳ ಪುರಸಭೆಗೆ 23 ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ಗೆ 16. ಒಟ್ಟು 48 ಮೀಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಳಿಸಲಾಗದ ಶಾಯಿಯನ್ನು ಮತದಾರರ ಎಡಗೈ ಉಂಗುರದ ಬೆರಳಿಗೆ ಹಾಕಲು ರಾಜ್ಯ ಚುನಾವಣಾ ಆಯೋಗವು ನಿರ್ದೇಶಿಸಿದೆ.
ಸಾರ್ವತ್ರಿಕ ರಜೆ: ಆ.31ರಂದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಮತ ಕ್ಷೇತ್ರಗಳ ಎಲ್ಲಾ ರಾಜ್ಯ ಸರಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ( ಅನುದಾನಿತ ಶಿಕ್ಷಣ ಸಂಸ್ಥೆ ಒಳಗೊಂಡಂತೆ) ಹಾಗೂ ಸರಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಮತಗಟ್ಟೆಯಲ್ಲಿ ಮತ ಚಲಾಯಿಸಲು ಭಾರತ ಚುನಾವಣಾ ಆಯೋಗ ನೀಡಿರುವ ಭಾವಚಿತ್ರದ ಗುರುತಿನ ಚೀಟಿ ಅಥವಾ ರಾಜ್ಯ ಚುನಾವಣಾ ಆಯೋಗ ಆದೇಶಿಸಿರುವ 22 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ. ಇವುಗಳಲ್ಲಿ ಆಧಾರ ಕಾರ್ಡ್, ಪಾಸ್ಪೋರ್ಟ್, ಡಿಎಲ್, ಆದಾಯ ತೆರಿಗೆ ಗುರುತಿನ ಚೀಟಿ, ಭಾವಚಿತ್ರದ ಪಡಿತರ ಚೀಟಿಗಳೂ ಸೇರಿವೆ. ಚುನಾವಣಾ ಕಾರ್ಯಕ್ಕಾಗಿ ಪೊಲೀಸ್ ಇಲಾಖೆ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದೆ.
ಭದ್ರತಾ ಕೊಠಡಿಗಳ ವಿವರ: ಉಡುಪಿ ನಗರಸಭೆಯ ಮತಯಂತ್ರವನ್ನು ಟಿ.ಎ.ಪೈ. ಮಾಧ್ಯಮ ಶಾಲೆ ಕುಂಜಿಬೆಟ್ಟುವಿನಲ್ಲಿ, ಕುಂದಾಪುರ ಪುರಸಭೆಯ ಮತಯಂತ್ರವನ್ನು ತಾಲೂಕು ಕಚೇರಿ, ಮಿನಿ ವಿಧಾನಸೌಧ ಕುಂದಾಪುರದಲ್ಲಿ, ಕಾರ್ಕಳ ಪುರಸಭೆಯ ಮತಯಂತ್ರವನ್ನು ತಾಲೂಕು ಕಚೇರಿ ಮಿನಿ ವಿಧಾನಸೌಧದಲ್ಲಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ನ ಮತಯಂತ್ರ ವನ್ನು ಟಿ.ಎ.ಪೈ. ಆಂಗ್ಲ ಮಾಧ್ಯಮ ಶಾಲೆ, ಕುಂಜಿಬೆಟ್ಟುವಿನಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.