ಭಾರತದ ಆತ್ಮಸಾಕ್ಷಿ ಕುಲದೀಪ್ ನಯ್ಯರ್: ಚಿಂತಕ ಜಿ.ರಾಜಶೇಖರ್
ಮಂಗಳೂರು, ಆ.30: ದೇಶದ ರೋಗಿಗಳಿಗೆ ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರ ಬದುಕು, ಬರವಣಿಗೆ ಔಷಧಪ್ರಾಯವಾಗಿತ್ತು. ಆದರ್ಶಮಯವಾಗಿ ಜೀವನ ನಡೆಸಿದ್ದ ಕುಲದೀಪ್ ನಯ್ಯರ್ ಭಾರತದ ಆತ್ಮ ಸಾಕ್ಷಿಯಾಗಿದ್ದರು ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಲ್ಮಠ ಸಹೋದಯದಲ್ಲಿ ಸಮಾನ ಮನಸ್ಕ ಸಂಘಟನೆಗಳಾದ ಡಿವೈಎಫ್ಐ, ಡಿಎಸ್ಎಸ್, ಸಮುದಾಯ, ಎಸ್ಎಫ್ಐ, ಎಐವೈಎಫ್, ಅಭಿಮತ, ದ.ಕ. ಜಿಲ್ಲಾ ವಿಚಾರವಾದಿಗಳ ಸಂಘಗಳ ಆಶ್ರಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಕುಲದೀಪ್ ನಯ್ಯರ್ ಅವರಿಗೆ ನಾಗರಿಕ ನುಡಿ ನಮನ’ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಶ್ನೆ ಮಾಡುವ ವಿಚಾರವಾದಿಗಳನ್ನು ಗುಂಡಿಟ್ಟು ಕೊಲ್ಲಲಾಗುತ್ತಿದೆ. ದೇಶದಲ್ಲಿ ಇಂತಹ ಏಕಾಏಕಿ ಘಟನೆಗಳು ನಡೆಯುತ್ತಿವೆ. ಆರೋಪಿಗಳ ಬಂಧನ ಮಾಹಿತಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಕೆಲವು ಘಟನೆಗಳಲ್ಲಿ ಪೊಲೀಸರೂ ಶಾಮೀಲಾಗಿ ಅಮಾಯಕರನ್ನು ಥಳಿಸುವಂತಹ ಉದಾಹರಣೆಗಳು ಹೆಚ್ಚುತ್ತಿವೆ. ಇಂತಹ ಘಟನೆಗಳಿಗೆ ಚರಿತ್ರೆಯೇ ಇದೆ. ದೇಶದ ಪ್ರಸ್ತುತ ದಿನಗಳಲ್ಲಿ ಮನುಷ್ಯ ಪ್ರಜ್ಞೆಗೆ ಮೀರಿದ ಘಟನೆಗಳು ನಡೆಯುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿಯೇತರ ಸರಕಾರಗಳು ಇರುವುದರಿಂದಲೇ ಕೊಲೆ, ಇತರ ಪ್ರಕರಣಗಳ ಸತ್ಯಾಸತ್ಯತೆ ಹೊರಬರುತ್ತಿವೆ. ಇಲ್ಲದಿದ್ದರೆ ಪ್ರಕರಣದ ಒಂದಂಶವೂ ಬೆಳಕಿಗೆ ಬರುತ್ತಿರಲಿಲ್ಲ. ಉಳಿದ ರಾಜ್ಯಗಳಲ್ಲಿ ನಡೆದ ವಿಚಾರವಾದಿಗಳ ಹತ್ಯೆ ಪ್ರಕರಣಗಳಲ್ಲಿ ತನಿಖೆ ಮಾಡುವ ನಾಟಕ ಆಡುತ್ತಿದ್ದಾರೆ. ಕುಲದೀಪ್ ನಯ್ಯರ್ ಅವರ ಸಾವು ಒಳ್ಳೆಯದೇ ಆಗಿದೆ. ಅವರು ಬದುಕಿದ್ದರೆ ಇಂತಹ ಹಲವಾರು ಘಟನೆಗಳನ್ನು ನೋಡುವ ಪ್ರಸಂಗ ಬರುತ್ತಿತ್ತು ಎಂದು ತಿಳಿಸಿದರು.
ಕುಲದೀಪ್ ನಯ್ಯರ್ ಸ್ಕೂಪ್ ವರದಿಗಳನ್ನು ಮಾಡುವಲ್ಲಿ ಯಶಸ್ವಿ ಪತ್ರಕರ್ತರರಾಗಿದ್ದರು. ಇಂದಿನ ಯಾವುದೇ ದಿನಪತ್ರಿಕೆಗಳಲ್ಲಿ ಅಂತಹ ಸ್ಕೂಪ್ ವರದಿಗಳು ಬರುವುದಿಲ್ಲ. ಸ್ಕೂಪ್ ಎನ್ನುವ ಪದದ ಅರ್ಥವೇ ಗೊತ್ತಿಲ್ಲದ ಅನೇಕ ಪತ್ರಕರ್ತರಿದ್ದಾರೆ. ಕುಲದೀಪ್ ನಯ್ಯರ್ ಅಂದಿನ ತುರ್ತು ಪರಿಸ್ಥಿತಿಯ ದಿನಗಳ ವಿರೋಧಿಯಾಗಿದ್ದರು. ಅಂದಿನ ಸರಕಾರ ಬಗ್ಗಲು ಹೇಳಿದರೆ, ಪತ್ರಿಕೆಗಳು ತೆವಳಿಕೊಂಡು ಸಾಗುತ್ತಿದ್ದವು ಎನ್ನುವುದು ಕುಲದೀಪ್ ನಯ್ಯರ್ ಅವರ ಬರಹಗಳಿಂದ ತಿಳಿದು ಬರುತ್ತದೆ. ದೇಶದಲ್ಲಿ ಇಂದಿನ ಪರಿಸ್ಥಿತಿಯಲ್ಲೂ ಯಾವುದೇ ಭಿನ್ನತೆಯಿಲ್ಲ. ಇಂದು ಅದೇ ಅಘೋಷಿತ ತುರ್ತು ಪರಿಸ್ಥಿತಿ ದೇಶದಲ್ಲಿ ಇದೆ ಎಂದು ತಿಳಿಸಿದರು.
ಪಾಕಿಸ್ಥಾನದ ಜೊತೆ ಇರುವುದು ದಾಯಾದಿಗಳ ಸಂಬಂಧ ಎನ್ನುವುದು ಕುಲದೀಪ್ ಅವರ ನಿಲುವಾಗಿತ್ತು. ಪಾಕಿಸ್ಥಾನದೊಂದಿಗೆ ಸ್ನೇಹದಿಂದ ಇರಬೇಕು. ಎರಡು ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿ ಅಮೆರಿಕದಂತಹ ರಾಷ್ಟ್ರಗಳು ಲಾಭವನ್ನು ಮಾಡಿಕೊಳ್ಳುತ್ತಿವೆ. ಸದ್ಯ ಯದ್ಧ ಒಂದು ಲಾಭದಾಯಕ ಉದ್ಯಮವಾಗಿ ಬದಲಾಗಿದೆ. ಯುದ್ಧಕ್ಕೂ ದೇಶಭಕ್ತಿಗೂ ಯಾವುದೇ ಸಂಬಂಧವಿಲ್ಲ ಎಂದರು.
ಪ್ರೊ.ವರದೇಶ ಹಿರೇಗಂಗೆ ಮಾತನಾಡಿ, ಕುಲದೀಪ್ ದೇಶದ ಆಗುಹೋಗುಗಳನ್ನು ದಾಖಲಿಸುವುದರ ಜೊತೆಗೆ ಬದಲಾವಣೆಗೂ ಪ್ರಯತ್ನಿಸಿದ್ದರು. ಅವರದು ಸಾಕ್ಷಿ ಪ್ರಜ್ಞೆಗೂ ಮೀರಿದ ಶಕ್ತಿಯಾಗಿತ್ತು. ಸೂಕ್ಷ್ಮ ಪ್ರಜ್ಞೆಯ, ವೈಚಾರಿಕತೆಯ, ತಾತ್ವಿಕ ನಿಲುವುಗಳ ಪತ್ರಕರ್ತರಾಗಿದ್ದರು ಎಂದರು.
ಪತ್ರಿಕೋದ್ಯಮದಲ್ಲಿ ಇಂದಿನ ದಿನಗಳಲ್ಲಿ ಕಾಂಟ್ರಾಕ್ಟ್ ವ್ಯವಸ್ಥೆ ಬಂದಿದೆ. ಮಾಲಕರು ಹೇಳಿದಂತೆ ಸುದ್ದಿಗಳು ರೂಪ ಪಡೆಯುತ್ತಿವೆ. ಇಂದಿನ ಪತ್ರಕರ್ತರಿಗೆ ಯಾವುದೇ ಸೇವಾ ಭದ್ರತೆ ಇಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅಧ್ಯಕ್ಷತೆ ವಹಿಸಿದ್ದರು.
ಖಂಡನಾ ನಿರ್ಣಯವನ್ನು ವಾಸುದೇವ ಉಚ್ಚಿಲ್ ಮಂಡಿಸಿದರು. ಸಮಾರಂಭದಲ್ಲಿ ಸಮುದಾಯ ಸಂಘಟನೆಯ ಪ್ರೊ.ರಾಜೇಂದ್ರ ಉಡುಪ, ದಲಿತ ಸಂಘಟನೆಯ ಮುಖಂಡ ಎಂ.ದೇವದಾಸ್, ಮಾನವತಾ ವೇದಿಕೆಯ ಡಾ. ಕೃಷ್ಣಪ್ಪ ಕೊಂಚಾಡಿ, ಎಐವೈಎಫ್ನ ಕರುಣಾಕರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.