ದ.ಕ. 3, ಉಡುಪಿಯ 4 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ಆರಂಭ
ಮಂಗಳೂರು, ಆ.31: ದ.ಕ. ಜಿಲ್ಲೆಯ ಉಳ್ಳಾಲ ಮತ್ತು ಪುತ್ತೂರು ನಗರಸಭೆ,ಬಂಟ್ವಾಳ ಪುರಸಭೆ ಹಾಗು ಉಡುಪಿ ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಚುನಾವಣೆ ಆರಂಭವಾಗಿದೆ. ಒಟ್ಟು 89 ವಾರ್ಡ್ಗಳ 1,17,979 ಮತದಾರರು 89 ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾಗಿದ್ದು, ಕಣದಲ್ಲಿ ಒಟ್ಟು 250 ಅಭ್ಯರ್ಥಿಗಳಿದ್ದಾರೆ.
ಉಳ್ಳಾಲದ 31 ವಾರ್ಡ್ಗಳಲ್ಲಿ 102 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, 44,132 ಮತದಾರರಿದ್ದಾರೆ. ಪುತ್ತೂರಿನ 31 ವಾರ್ಡ್ಗಳಲ್ಲಿ 77 ಅಭ್ಯರ್ಥಿಗಳು ಕಣದಲ್ಲಿದ್ದು, 39,745 ಮತದಾರರಿದ್ದಾರೆ. ಬಂಟ್ವಾಳದ 27 ವಾರ್ಡ್ ಗಳಲ್ಲಿ 71 ಅಭ್ಯರ್ಥಿಗಳು ಕಣದಲ್ಲಿದ್ದು, 34,102 ಮತದಾರರಿದ್ದಾರೆ.
ಉಳ್ಳಾಲದಲ್ಲಿ 18 ಅತಿ ಸೂಕ್ಷ್ಮ ಮತ್ತು 11 ಸೂಕ್ಷ್ಮ ಸಹಿತ 43 ಮತಗಟ್ಟೆಗಳಿವೆ. ಪುತ್ತೂರಿನಲ್ಲಿ 27 ಸೂಕ್ಷ್ಮ(ಅತಿ ಸೂಕ್ಷ್ಮ ಇಲ್ಲ) ಸಹಿತ 41 ಮತಗಟ್ಟೆಗಳಿವೆ. ಬಂಟ್ವಾಳದಲ್ಲಿ 18 ಅತಿ ಸೂಕ್ಷ್ಮ ಮತ್ತು 14 ಸೂಕ್ಷ್ಮ ಸಹಿತ 32 ಮತಗಟ್ಟೆಗಳಿವೆ.
ಮೂರು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಒಟ್ಟು 145 ಮತ ಯಂತ್ರಗಳನ್ನು ಬಳಕೆ ಮಾಡಲಾಗುತ್ತದೆ. ಅಲ್ಲದೆ 145 ಬ್ಯಾಲೆಟ್ ಯುನಿಟ್ ಮತ್ತು ಕಂಟ್ರೋಲ್ ಯುನಿಟ್ಗಳನ್ನೂ ಕೂಡಾ ಅಳವಡಿಸಲಾಗುತ್ತದೆ.
ಮತಯಂತ್ರ, ನೋಟಾ ಬಳಕೆ
ಚುನಾವಣೆಗೆ ಮತಯಂತ್ರ ಬಳಸುವುದರಿಂದ ಅಭ್ಯರ್ಥಿಗಳ ಪೈಕಿ ಯಾರೊಬ್ಬರಿಗೂ ಮತ ಚಲಾಯಿಸಲು ಇಚ್ಛಿಸದಿರುವ ಮತದಾರರು ಮತಯಂತ್ರದಲ್ಲಿ ಅಳವಡಿಸಿರುವ ನೋಟಾಕ್ಕೆ ಮತ ಚಲಾಯಿಸಲು ಅವಕಾಶವಿದೆ.
ಉಡುಪಿ ಜಿಲ್ಲಾ ಮತಗಟ್ಟೆಗಳ ವಿವರ
ಉಡುಪಿ ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಉಡುಪಿ ನಗರ ಸಭೆಯ 35 ವಾರ್ಡುಗಳಲ್ಲಿ 98 ಮತಗಟ್ಟೆಗಳಿದ್ದು, ಒಟ್ಟು 97,561 ಮತದಾರರಿದ್ದಾರೆ. ಇವರಲ್ಲಿ 47,538 ಪುರುಷರು, 50,022 ಮಹಿಳೆಯರು ಹಾಗೂ ಓರ್ವ ಇತರರು ಸೇರಿದ್ದಾರೆ.
ಕುಂದಾಪುರ ಪುರಸಭೆಯ 23 ವಾರ್ಡ್ಗಳಲ್ಲಿ 23 ಮತಗಟ್ಟೆಗಳಿದ್ದು, 11,292 ಪುರುಷರು, 12,010 ಮಹಿಳೆಯರು ಸೇರಿದಂತೆ ಒಟ್ಟು 23,302 ಮತದಾರರು ಇದ್ದಾರೆ.
ಕಾರ್ಕಳ ಪುರಸಭೆಯ 23 ವಾರ್ಡ್ಗಳಲ್ಲಿ 23 ಮತಗಟ್ಟೆಗಳಿದ್ದು, 9,879 ಪುರುಷರು, 10,725 ಮಹಿಳೆಯರು ಸೇರಿ ಒಟ್ಟು 20,604 ಮತದಾರರಿದ್ದಾರೆ.
ಸಾಲಿಗ್ರಾಮ ಪಟ್ಟಣ ಪಂಚಾಯತ್ನ 16 ವಾರ್ಡ್ಗಳಲ್ಲಿ 16 ಮತಗಟ್ಟೆಗಳಿದ್ದು, 6,213 ಪುರುಷರು, 6,748 ಮಹಿಳೆಯರು ಸೆೀರಿ ಒಟ್ಟು 12,961 ಮತದಾರರಿದ್ದಾರೆ.
ಚುನಾವಣೆಗೆ ಬಳಸಲಾಗುವ ಇವಿಎಂಗಳ ಸಂಖ್ಯೆ: ಉಡುಪಿ ನಗರಸಭೆಗೆ 98, ಕುಂದಾಪುರ ಪುರಸಭೆಗೆ 23, ಕಾರ್ಕಳ ಪುರಸಭೆಗೆ 23 ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ಗೆ 16.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಳಿಸಲಾಗದ ಶಾಯಿಯನ್ನು ಮತದಾರರ ಎಡಗೈ ಉಂಗುರದ ಬೆರಳಿಗೆ ಹಾಕಲು ರಾಜ್ಯ ಚುನಾವಣಾ ಆಯೋಗವು ನಿರ್ದೇಶಿಸಿದೆ.
ಸಾರ್ವತ್ರಿಕ ರಜೆ: ಆ.31ರಂದು ನಗರ ಸ್ಥಳೀಯ ಸಂಸ್ಥೆಗಳ ಚುನಾಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಮತ ಕ್ಷೇತ್ರಗಳ ಎಲ್ಲಾ ರಾಜ್ಯ ಸರಕಾರಿ ಕಚೇರಿ ಗಳಿಗೆ, ಶಾಲಾ ಕಾಲೇಜುಗಳಿಗೆ( ಅನುದಾನಿತ ಶಿಕ್ಷಣ ಸಂಸ್ಥೆ ಒಳಗೊಂಡಂತೆ) ಹಾಗೂ ಸರಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.