ಕಾಸರಗೋಡು: ತಾಯಿ - ಮಗುವನ್ನು ಅಪಹರಿಸಿದ ದುಷ್ಕರ್ಮಿಗಳ ತಂಡ
ಕಾಸರಗೋಡು, ಆ. 31: ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಹಾಡಹಗಲೇ ತಾಯಿ ಮತ್ತು ಮಗುವನ್ನು ಅಪಹರಿಸಿದ ಘಟನೆ ಇಂದು ಬೆಳಗ್ಗೆ ಚಿತ್ತಾರಿಕ್ಕಾಲ್ ನಲ್ಲಿ ನಡೆದಿದೆ.
ಚಿತ್ತಾರಿಕ್ಕಾಲ್ ವೆಲ್ಲಡ್ಕದ ಮನೋಜ್ ಎಂಬವರ ಪತ್ನಿ ಮಿನು (23) ಮತ್ತು ಸಾಯಿ ಕೃಷ್ಣ (3) ಅಪಹರಣಕ್ಕೊಳಗಾದವರು. ಪೂರ್ವದ್ವೇಷದಿಂದ ನಡೆದಿದೆಯೇ ಅಥವಾ ದುಷ್ಕರ್ಮಿಗಳ ಕೃತ್ಯವೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಮೆಕಾನಿಕ್ ಆಗಿರುವ ಮನೋಜ್ ಮನೆಯಿಂದ ತೆರಳಿದ ಬಳಿಕ ಘಟನೆ ನಡೆದಿದೆ. ಕಾರಿನಲ್ಲಿ ಬಂದ ತಂಡ ಕೃತ್ಯ ನಡೆಸಿದ್ದು, ದುಷ್ಕರ್ಮಿಗಳ ತಂಡ ಮನೆಗೆ ಬಂದಿರುವುದಾಗಿ ಮಿನು ಪತಿ ಮನೋಜ್ ರಿಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದರು. ಬಳಿಕ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಬರುವಷ್ಟರಲ್ಲಿ ಕಾರಿನಲ್ಲಿ ಇಬ್ಬರನ್ನು ಅಪಹರಿಸಿ ತಂಡವು ಪರಾರಿಯಾಗಿದೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು , ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನೆ ಸುದ್ದಿ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎ . ಶ್ರೀನಿವಾಸ್ , ಕಾಞ೦ಗಾಡ್ ಡಿ ವೈ ಎಸ್ ಪಿ ಪಿ.ಕೆ.ಸುಧಾಕರನ್ , ಚಿತ್ತಾರಿಕ್ಕಾಲ್ ಠಾಣೆ ಸಬ್ ಇನ್ಸ್ ಪೆಕ್ಟರ್ ರಂಜಿತ್ ರವೀಂದ್ರನ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲಪಿದ್ದು, ತನಿಖೆ ನಡೆಸುತ್ತಿದ್ದಾರೆ.