ಗ್ರಾಹಕ ಸೋಗಿನಲ್ಲಿ ಮಹಿಳೆಯ ಸರ ಅಪಹರಣ
ಕಾರ್ಕಳ, ಆ.31: ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತರು ದಿನಸಿ ಅಂಗಡಿಯ ಮಾಲಕಿಯ ಚಿನ್ನದ ಸರ ಅಪಹರಿಸಿ ಪರಾರಿಯಾಗಿರುವ ಘಟನೆ ರೆಂಜಾಳ ಮಾರಿಗುಡಿ ಎಂಬಲ್ಲಿ ಆ.30ರಂದು ಸಂಜೆ ನಡೆದಿದೆ.
ರೆಂಜಾಳ ಮಾರಿಗುಡಿಯ ಪಾಂಡುರಂಗ ನಾಯಕ್ ಎಂಬವರ ಪತ್ನಿ ಗೌರಿ ನಾಯಕ್(47) ತಮ್ಮ ದಿನಸಿ ಅಂಗಡಿಯಲ್ಲಿರುವಾಗ ಬೂದು ಬಣ್ಣದ ಮಾರುತಿ ರಿಡ್ಜ್ ಕಾರಿನಲ್ಲಿ ಮೂವರು ಅಪರಿಚಿತರು ಬಂದಿದ್ದು, ಅದರಲ್ಲಿ ಓರ್ವ ಅಂಗಡಿಯ ಒಳಗಡೆ ಬಂದು ಸಿಗರೇಟ್ ಕೇಳಿದನು. ಆಗ ಕಾರಿನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಕೂಡ ಸಿಗರೇಟ್ ಕೇಳಿಕೊಂಡು ಅಂಗಡಿಗೆ ಬಂದನು.
ಗೌರಿ ನಾಯಕ್ ಸಿಗರೇಟ್ ಕೊಡುತ್ತಿರುವಾಗ ಮೊದಲು ಬಂದ ವ್ಯಕ್ತಿಯು ಗೌರಿ ನಾಯಕ್ರ ಕುತ್ತಿಗೆಯಲ್ಲಿದ್ದ 4 ಪವನ ತೂಕದ ಚಿನ್ನದ ಕರಿಮಣಿ ಸರ ಹಾಗೂ ಸುಮಾರು 1 ಪವನ್ ತೂಕದ ಮತ್ತು 3 ಗ್ರಾಂ ತೂಕದ ಲಕ್ಷ್ಮೀ ಪೆಂಡೆಂಟ್ ಇರುವ ಗೌರಿ ಪೂಜೆಯ ದಾರವನ್ನು ಎಳೆದುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ. ಇವುಗಳ ಮೌಲ್ಯ 86,000ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story