ಉಡುಪಿ ನಗರಸಭೆ ಚುನಾವಣೆ: ಆಸ್ಕರ್, ರಘುಪತಿ ಭಟ್ ಸಹಿತ ಗಣ್ಯರಿಂದ ಮತದಾನ
ಉಡುಪಿ, ಆ.31: ಉಡುಪಿ ನಗರಸಭಾ ಚುನಾವಣೆಯಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಶಾಸಕ ರಘುಪತಿ ಭಟ್ ಸೇರಿದಂತೆ ಹಲವು ಗಣ್ಯರು ವಿವಿಧ ವಾರ್ಡ್ಗಳ ಮತಗಟ್ಟೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಿದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅಂಬಲಪಾಡಿ ವಾರ್ಡ್ನ ಅಂಬಲಪಾಡಿ ಕಿದಿಯೂರು ವಿದ್ಯಾಸಮುದ್ರ ಆಂಗ್ಲ ಮಾಧ್ಯಮ ವಾದಿರಾಜ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಪತ್ನಿ ಬ್ಲೋಸಂ ಫೆರ್ನಾಂಡಿಸ್ ಜೊತೆ ಆಗಮಿಸಿ ಮತದಾನ ಮಾಡಿದರು. ಈ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ಎಂ.ಎ.ಗಫೂರ್ ಹಾಜರಿದ್ದರು.
ಬಳಿಕ ಮಾತನಾಡಿದ ಆಸ್ಕರ್, ಕಾಂಗ್ರೆಸ್ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂಬ ಉದ್ದೇಶದಿಂದ ಪ್ರಚಾರ ಕಾರ್ಯ ವನ್ನು ಮಾಡಿದ್ದೇವೆ. ಯಾರು ಅಧಿಕಾರಕ್ಕೆ ಬರಬೇಕೆಂಬುದು ಜನರ ಕೈಯಲ್ಲಿದೆ. ಜನರು ಮನಸ್ಸು ಮಾಡಿದರೆ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು.
ಕರಂಬಳ್ಳಿ ವಾರ್ಡ್ ಸಂಖ್ಯೆ 12ರ ನಿಟ್ಟೂರು ಶಾಲೆಯ ಮತಗಟ್ಟೆಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ಇವರೊಂದಿಗೆ ತಾಯಿ ಸರಸ್ವತಿ ಬಾರಿತ್ತಾಯ, ಪತ್ನಿ ಶಿಲ್ಪಾ ಮತ ದಾನ ಮಾಡಿದರು.
ಬಳಿಕ ಮಾತನಾಡಿದ ಶಾಸಕರು, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ನೆಲೆಕೊಟ್ಟ ಉಡುಪಿ ನಗರಸಭೆಯಲ್ಲಿ ಈ ಬಾರಿಯ ಗೆಲುವು ನಮಗೆ ಬಹಳ ಮುಖ್ಯ. ರಾಷ್ಟ್ರದಲ್ಲೇ ಮೊದಲ ಬಾರಿ ಬಿಜೆಪಿಗೆ ಅಧಿಕಾರ ಕೊಟ್ಟ ಉಡುಪಿ ನಗರಸಭೆ ಯನ್ನು ವಾಜಪೇಯಿ, ಅಡ್ವಾಣಿ ಹೆಮ್ಮೆಯಿಂದ ಗುರುತಿಸುತ್ತಾರೆ. ಪ್ರಧಾನಿ ಮೋದಿಯೂ ಉಡುಪಿ ನಗರಸಭೆಯ ಬಿಜೆಪಿ ಆಡಳಿತದ ಬಗ್ಗೆ ಮಾತನಾಡು ತ್ತಾರೆ ಎಂದರು.
ಮಲ್ಪೆ ಕೊಳ ವಾರ್ಡ್ ಸಂಖ್ಯೆ ಒಂದರ ಮಲ್ಪೆ ಮಹಾತ್ಮ ಗಾಂಧೀ ಶತಾಬ್ದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತದಾನ ಕೇಂದ್ರಕ್ಕೆ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ತಾಯಿ, ಮಾಜಿ ಸಚಿವೆ ಮನೋರಮಾ ಮಧ್ವರಾಜ್ ಅವರೊಂದಿಗೆ ಆಗಮಿಸಿ ಮತದಾನ ಮಾಡಿದರು.
ಬಳಿಕ ಮಾತನಾಡಿದ ಪ್ರಮೋದ್ ಮಧ್ವರಾಜ್, ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಅಪಪ್ರಚಾರದಿಂದ ಜನ ಭಿನ್ನವಾಗಿ ಮತದಾನ ಮಾಡಿದ್ದಾರೆ. ಉಡುಪಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಉತ್ತಮ ಫಲಿತಾಂಶ ಬರು ತ್ತದೆ. ನಾವು ಸೇವಕರಾಗಿರುವುದರಿಂದ ಸವಾಲು ಪ್ರತಿಷ್ಠೆ ಅಗತ್ಯವಿಲ್ಲ. ಯಾರು ಬೇಕು ಅವರನ್ನು ಜನ ಆಯ್ಕೆ ಮಾಡುತ್ತಾರೆ. ಜನಾದೇಶಕ್ಕೆ ನಾವೆಲ್ಲರೂ ತಲೆಬಾಗಬೇಕು ಎಂದು ತಿಳಿಸಿದರು.
ಅಜ್ಜರಕಾಡು ವಾರ್ಡ್ನ ಕಾಡಬೆಟ್ಟು ಮತಗಟ್ಟೆಗೆ ಆಗಮಿಸಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಪತ್ನಿ ಜೊತೆ ಮತ ಚಲಾಯಿಸಿದರು. ಉಡುಪಿ ಶ್ರೀಕೃಷ್ಣ ಮಠದ ಸ್ವಾಮೀಜಿಗಳು ಚಾರ್ತುಮಾಸದಲ್ಲಿರುವುದರಿಂದ ಈ ಬಾರಿ ಮತದಾನ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.