‘ಸ್ವರಕ್ಷಾ ಫಾರ್ ವಿಮನ್’ನ ಕಾರ್ತಿಕ್ ಎಸ್.ಕಟೀಲ್ರಿಂದ ಮಣಿಪಾಲದಲ್ಲಿ ಮಿಕ್ಸೆಡ್ ಮಾರ್ಷಲ್ ಆರ್ಟ್ ಅಕಾಡೆಮಿ
ಉಡುಪಿ, ಆ.31: ನಾಲ್ಕು ವರ್ಷಗಳ ಹಿಂದೆ ಶಾಲಾ ವಿದ್ಯಾರ್ಥಿನಿಯರು, ಯುವತಿಯರು ಹಾಗೂ ಮಹಿಳೆಯರ ಸ್ವರಕ್ಷಣೆಗಾಗಿ ‘ಸ್ವರಕ್ಷಾ ಫಾರ್ ವಿಮೆನ್’ ಕಾರ್ಯಕ್ರಮವನ್ನು ಪ್ರಾರಂಭಿಸಿದ ಮಂಗಳೂರಿನ ಕರಾಟೆಪಟು ಹಾಗೂ ಸ್ವರಕ್ಷಾ ಫಾರ್ ವಿಮೆನ್ ಟ್ರಸ್ಟ್ನ ಸ್ಥಾಪಕ ಕಾರ್ತಿಕ್ ಎಸ್. ಕಟೀಲ್ ಅವರು ಮಣಿಪಾಲದಲ್ಲಿ ಮಿಕ್ಸೆಡ್ ಮಾರ್ಷಲ್ ಆರ್ಟ್ ಅಕಾಡೆಮಿಯನ್ನು ಪ್ರಾರಂಭಿಸಲಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಣಿಪಾಲದಲ್ಲಿರುವ ಕೋರ್ ಫಿಟ್ನೆಸ್ ಸೆಂಟರ್ನಲ್ಲಿ ಈ ಅಕಾಡೆಮಿ ಪ್ರಾರಂಭಗೊಳ್ಳಲಿದೆ ಎಂದರು.
ಅಕಾಡೆಮಿ ಎಲ್ಲಾ ವಯಸ್ಸಿನ ಪುರುಷರು ಮತ್ತು ಮಹಿಳೆಯರಿಗೆ ಸ್ವರಕ್ಷಣೆಯ ವಿವಿಧ ಕಲೆಗಳಲ್ಲಿ ತರಬೇತಿಯನ್ನು ನೀಡಲಿದೆ. ಇದರಲ್ಲಿ ಟೇಕ್ವಾಂಡೋ, ಮುಅತ್ತಾಯ್, ಜೀತ್ಸುಂಡೋ, ಜುಜಿತ್ಸು ಮತ್ತು ಕರಾಟೆ ತರಬೇತಿಯನ್ನು ನೀಡಲಾಗುತ್ತದೆ ಎಂದವರು ವಿವರಿಸಿದರು.
ಅಕಾಡೆಮಿಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಜೀತ್ಕುಂಡೊ ಅಕಾಡೆಮಿಯ ಪ್ರಮಾಣ ಪತ್ರದೊಂದಿಗೆ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವನ್ನು ನೀಡಲಾಗುತ್ತದೆ ಎಂದು ಕಾರ್ತಿಕ್ ಕಟೀಲ್ ತಿಳಿಸಿದರು.
ಸ್ವರಕ್ಷಾ ಫಾರ್ ವಿಮೆನ್ ಎಂಬುದು 95 ನಿಮಿರ್ಷಗಳ ಸರಳ ಹಾಗೂ ಪರಿಣಾಮಕಾರಿಯಾದ ಮಹಿಳಾ ಸ್ವರಕ್ಷಣಾ ತರಬೇತಿ ಕಾರ್ಯಕ್ರಮವಾಗಿದೆ. ಮನ:ಶಾಸ್ತ್ರ ಹಾಗೂ ನೈಜ ಘಟನೆಗಳ ಆಧಾರದ ಮೇಲೆ ರೂಪಿತವಾದ ಐದು ರಕ್ಷಣಾ ತಂತ್ರಗಳನ್ನು 11ರ ಹರೆಯದ ಬಾಲಕಿಯಿಂದ 60 ವರ್ಷ ಪ್ರಾಯದ ಮಹಿಳೆಯವರೆಗೆ ಎಲ್ಲರೂ ಕಲಿತು ಸ್ವರಕ್ಷಣೆಗೆ ಸುಲಭವಾಗಿ ಉಪಯೋಗಿಸ ಬಹುದಾಗಿದೆ ಎಂದು ಕಟೀಲ್ ವಿವರಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ 430 ಸಂಸ್ಥೆಗಳ 1.30 ಲಕ್ಷಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರಿಗೆ 700ಕ್ಕೂ ಅಧಿಕ ಕಾರ್ಯಾಗಾರ ಗಳಲ್ಲಿ ತರಬೇತಿ ನೀಡಲಾಗಿದೆ. ಇದರಿಂದ ನೂರಾರು ಮಹಿಳೆಯರು ಲೈಂಗಿಕ ದೌರ್ಜನ್ಯದಿಂದ ಪಾರಾಗಲು ಸಾಧ್ಯವಾಗಿದ್ದು, ಪೊಲೀಸ್ ಇಲಾಖೆ, ವೈದ್ಯರು, ಶಿಕ್ಷಣ ತಜ್ಞರು ಈ ಕಾರ್ಯಕ್ರಮವನ್ನು ಶ್ಲಾಘಿಸಿದ್ದಾರೆ ಎಂದು ಕಾರ್ತಿಕ್ ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಉಡುಪಿ ಪವರ್ ಸಂಸ್ಥೆಯ ಸ್ಥಾಪಕಿ ಸರಿತಾ ಸಂತೋಷ್, ಡಾ.ಜಿ.ಶಂಕರ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ, ಸ್ವರಕ್ಷಾ ಫಾರ್ ವಿಮೆನ್ ಟ್ರಸ್ಟ್ನ ಉಪಾಧ್ಯಕ್ಷೆ ಶೋಭಲತಾ ಉಪಸ್ಥಿತರಿದ್ದರು.