ಕಲ್ಲಡ್ಕ: ಹಣದ ವಿಚಾರಕ್ಕೆ ಯುವಕರಿಬ್ಬರ ನಡುವೆ ಗಲಾಟೆ
ಬಂಟ್ವಾಳ, ಆ. 31: ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಕಲ್ಲಡ್ಕದಲ್ಲಿ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಕಲ್ಲಡ್ಕದ ಸೆಲೂನ್ ಮಾಲಕ ತಮಿಳುನಾಡು ಮೂಲದ ಸತೀಶ್ ಎಂಬವನಿಗೆ ಕಲ್ಲಡ್ಕ ನಿವಾಸಿ ಖಲೀಲ್ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ. ಸತೀಶ್ ಖಲೀಲ್ ಗೆ ಹಣ ನೀಡಿದ್ದು, ಆದರೆ ಖಲೀಲ್ ಹಣವನ್ನು ವಾಪಸ್ ನೀಡದೆ ಸತಾಯಿಸುತ್ತಿದ್ದ ಎಂದು ನಗರ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಲಾಗಿತ್ತು.
ಕೆಲವು ದಿನಗಳಿಂದ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಣ್ಣ ಪುಟ್ಟ ಮಾತುಗಳು ನಡೆಯುತ್ತಿತ್ತು ಎಂದೂ ಸ್ಥಳೀಯರು ಮಾಹಿತಿ ನೀಡಿದ್ದು, ಇಂದು ರಾತ್ರಿ 9 ಗಂಟೆಯ ವೇಳೆ ಸೆಲೂನ್ ಗೆ ನುಗ್ಗಿ ಖಲೀಲ್ ಹಲ್ಲೆ ನಡೆಸಿದ್ದಾನೆ ಎಂದು ನಗರ ಠಾಣೆಯಲ್ಲಿ ಸತೀಶ್ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ನಗರ ಠಾಣೆ ಎಸ್. ಐ. ಚಂದ್ರಶೇಖರ್ ಅವರು ಆರೋಪಿ ಖಲೀಲ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂದರ್ಭ ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದ್ದು, ಕಲ್ಲಡ್ಕ ಪರಿಸರದಲ್ಲಿ ಹೆಚ್ಚುವರಿ ಪೋಲೀಸರ ನಿಯೋಜನೆ ಮಾಡಲಾಗಿದೆ.