ಬಂಟ್ವಾಳ ಪುರಸಭೆ ಚುನಾವಣೆ: ಶೇ. 72.36ರಷ್ಟು ಮತದಾನ
ಬಂಟ್ವಾಳ, ಆ. 31: ಬಂಟ್ವಾಳ ಪುರಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯು ಮುಕ್ತಾಯವಾಗಿದ್ದು, ಶೇ. 72.36ರಷ್ಟು ಮತದಾನವಾಗಿದೆ. ಪುರಸಭಾ ವ್ಯಾಪ್ತಿಯ 34,102 ಮತದಾರರ ಪೈಕಿ ಶೇ. 24,676 ಮತದಾರರರು ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸಿದರು. ಅಲ್ಲಲ್ಲಿ ಸಣ್ಣಪುಟ್ಟ ಮಾತಿನ ಚಕಮಕಿಗಳನ್ನು ಹೊರತುಪಡಿಸಿದರೆ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು.
ಕೆಲವೆಡೆ ಘರ್ಷಣೆಯ ವಾತಾವರಣ ನಿರ್ಮಾಣವಾಗುವ ಪರಿಸ್ಥಿತಿ ಇತ್ತಾದರೂ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಪರಿಸ್ಥಿತಿಯನ್ನು ತಿಳಿಗೊಳಿಸಲಾಯಿತು. 4 ವಾರ್ಡುಗಳನ್ನು ಹೆಚ್ಚಿಸಿಕೊಂಡು 27 ವಾರ್ಡುಗಳನ್ನು ಹೊಂದಿರುವ ಬಂಟ್ವಾಳ ಪುರಸಭೆಗೆ 71 ಮಂದಿ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರಲ್ಲಿ ಕಾಂಗ್ರೆಸ್ 25, ಬಿಜೆಪಿ 27, ಜೆಡಿಎಸ್ 5, ಎಸ್ಡಿಪಿಐ 12, ಇತರ 2 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. 18 ಸೂಕ್ಷ್ಮ ಮತ್ತು 14 ಅತಿ ಸೂಕ್ಷ್ಮ ಮತಗಟ್ಟೆಗಳು ಇರುವ ಬಂಟ್ವಾಳ ಪುರಸಭೆಯಲ್ಲಿ 32 ವಾರ್ಡುಗಳಲ್ಲಿ 16,847 ಪುರುಷರು, 17255 ಮಹಿಳೆಯರು ಸೇರಿದಂತೆ 34,102 ಮತದಾರರು ಇದ್ದಾರೆ.
ಲೊರೆಟ್ಟೊಪದವು, ಮಂಡಾಡಿ, ಮಣಿ, ಕಾಲೇಜು ರಸ್ತೆ, ಜಕ್ರಿಬೆಟ್ಟು, ಹೊಸ್ಮರ್, ಬಂಟ್ವಾಳ ಪೇಟೆ, ಕೆಳಗಿನಪೇಟೆ, ಭಂಡಾರಿಬೆಟ್ಟು, ಕಾಮಾಜೆ, ಸಂಚಯಗಿರಿ, ಅಜ್ಜಿಬೆಟ್ಟು, ಗೂಡಿನಬಳಿ, ಜೋಡುಮಾರ್ಗ, ಕೈಕುಂಜೆ, ನಂದರಬೆಟ್ಟು, ಪರ್ಲಿಯಾ, ಶಾಂತಿ ಅಂಗಡಿ, ಅದ್ದೇಡಿ, ಮೊಡಂಕಾಪು, ತಲಪಾಡಿ, ಪಲ್ಲಮಜಲು, ಜೈನರಪೇಟೆ, ಆಲಡ್ಕ, ಬೋಳಂಗಡಿ, ಮೇಲ್ಕಾರ್, ಬೊಂಡಾಲ ವಾರ್ಡುಗಳಲ್ಲಿ ಬೆಳಗ್ಗೆಯೇ ಮತದಾರರು ಸಾಲುಗಟ್ಟಿ ನಿಂತು ಮತ ಚಲಾಯಿಸಿದರು.
ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು, ಬೆಳಗ್ಗೆ ಬಂಟ್ವಾಳದ ಬಿ.ಮೂಡ ಗ್ರಾಮದ ಭಂಡಾರಿಬೆಟ್ಟು ಬಂಟ್ವಾಳ ಎಸ್ವಿಎಸ್ ದೇವಳ ಶಾಲೆಯಲ್ಲಿ ಪತ್ನಿಯೊಂದಿಗೆ ಸಾಲಿನಲ್ಲಿ ನಿಂತು ಬಳಿಕ ಮತ ಚಲಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ಸಹಾಯಕ ಕಮೀಷನರ್ ರವಿಚಂದ್ರ ನಾಯಕ್, ತಹಶೀಲ್ದಾರ್ ಪುರಂದರ ಹೆಗ್ಡೆ ಮಾರ್ಗದರ್ಶನದಲ್ಲಿ ಬಂಟ್ವಾಳ ಚುನಾವಣಾಧಿಕಾರಿಗಳಾದ ರಾಜೇಶ್, ಕೆ. ಮೋಹನ್ ಕುಮಾರ್, ನೋಣಯ್ಯ ನಾಯ್ಕ್, ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಭಾರ ಚುನಾವಣಾ ಉಪತಹಶೀಲ್ದಾರ್ ಸೀತಾರಾಮ, ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್, ದ್ವಿತೀಯ ದರ್ಜೆ ಸಹಾಯಕ ವಿನಯ ನಾಗರಾಜ್, ಕಂದಾಯ ನಿರೀಕ್ಷಕ ರಾಮ ಕಾಟಿ ಪಳ್ಳ, ದಿವಾಕರ ಮುಗುಳಿಯ, ನವೀನ್ ಬೆಂಜನ ಪದವು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಸೆಕ್ಟರ್ ಅಧಿಕಾರಿಗಳು ಚುನಾವಣೆ ಕರ್ತವ್ಯದಲ್ಲಿ ಹಾಜರಾಗಿದ್ದರು.
ಬಂಟ್ವಾಳ ಎಎಸ್ಪಿ ಋಷಿಕೇಶ್ ಸೋನಾವಣೆ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮತ್ತು ಎಸ್ಸೈಗಳು ಬಂದೋಬಸ್ತ್ ಜವಾಬ್ದಾರಿ ವಹಿಸಿದ್ದರು. 3 ಕೆಎಸ್ಆರ್ಪಿ, ಒಂದು ಡಿಎಅರ್ ಸ್ಟ್ರೈ ಕಿಂಗ್ ಫೆÇೀರ್ಸ್ ಹೆಚ್ಚುವರಿಯಾಗಿ ಚುನಾವಣೆಯ ಬಂದೋಬಸ್ತ್ನಲ್ಲಿ ಭಾಗವಹಿಸಿದ್ದವು.
ಮಾತಿನ ಚಕಮಕಿ
ಮೊಡಂಕಾಪು ಸೇರಿದಂತೆ ಕೆಲ ವಾರ್ಡುಗಳಲ್ಲಿ ಮತದಾರರನ್ನು ಕರೆದೊಯ್ಯುವ ವಿಚಾರದಲ್ಲಿ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತಾದರೂ ಕೂಡಲೇ ಪೆÇಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಮಧ್ಯಾಹ್ನವಾಗುತ್ತಿದ್ದಂತೆ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಕಡಿಮೆಯಾಯಿತು. ಸಂಜೆಯ ವೇಳೆ ಬೆರಳೆಣಿಕೆಯಷ್ಟು ಮತದಾರರು ಬೂತ್ಗಳಲ್ಲಿ ಕಂಡುಬಂದರು.
ಅಧಿಕ ಸಂಖ್ಯೆಯ ಮತದಾರರಿರುವ ಅಜ್ಜಿಬೆಟ್ಟು ಶಾಲೆಯಲ್ಲಿ ಮೂರು ಮತಗಟ್ಟೆಗಳನ್ನು ವ್ಯವಸ್ಥೆಗೊಳಿಸಿದ್ದಾದರೂ ಸ್ಥಳಾವಕಾಶ ಕೊರತೆಯಿಂದ ಮತದಾರರು ಬಹಳ ತ್ರಾಸಪಡುವಂತಾಯಿತು. ಇಲ್ಲಿನ ಏಕಮುಖ ಸಂಚಾರದ ವ್ಯವಸ್ಥೆಯಿಂದ ಅಜ್ಜಿಬೆಟ್ಟು ರಸ್ತೆಯಿಂದ ಶಾಲೆಯವರೆಗೆ ವಾಹನಸವಾರರು ಪರದಾಡುವಂತಾಗಿ, ಕೆಲ ಕಾಲ ರಸ್ತೆ ಸಂಚಾರದಲ್ಲಿ ಅಡಚಣೆ ಉಂಟಾಯಿತು. ಈ ಮಧ್ಯೆ ಮತಗಟ್ಟೆ ವ್ಯಾಪ್ತಿಯಲ್ಲಿ ಪಕ್ಷ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಜಮಾಯಿಸಿದ್ದು, ಇವರ ನಡುವೆ ಮಾತಿನ ಚಕಮಕಿ ಉಂಟಾಯಿತು.
ಕಳೆದ ಆಡಳಿತ ಅವಧಿಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. 23 ಸ್ಥಾನಗಳಲ್ಲಿ 13 ಕಾಂಗ್ರೆಸ್ 5 ಬಿಜೆಪಿ, 3ಎಸ್ಡಿಪಿಐ, 1ಜೆಡಿಎಸ್, 1 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದರು.