ಎಡಪದವು ಐಡಿಯಲ್ ಶಾಲೆಯಲ್ಲಿ ಮಳೆನೀರು ಕೊಯ್ಲು ಮಾಹಿತಿ ಕಾರ್ಯಾಗಾರ
ಮಂಗಳೂರು, ಸೆ.1: ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಳೆ ನೀರಿನ ಕೊಯ್ಲು ಮಾಹಿತಿ ಕಾರ್ಯಾಗಾರ ಶಾಲಾ ಸಭಾಭವನದಲ್ಲಿ ಜರಗಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಮಳೆ ಕೊಯ್ಲು ತಜ್ಞ ಹಾಗೂ ಪ್ರಗತಿಪರ ಕೃಷಿಕ ಪಾಲಡ್ಕದ ವಿಕ್ಟರ್ ಕಡಂದಲೆ, ನೀರು ಒಂದು ಅಮೂಲ್ಯವಾದ ಹಾಗೂ ಅತ್ಯಗತ್ಯವಾದ ಸಂಪತ್ತು. ನಮ್ಮ ನೀರಿನ ಮೂಲಗಳಾದ ಸಮುದ್ರ ಶೇಕಡ 97, ಮಂಜುಗಡ್ಡೆ ರೂಪದಲ್ಲಿ ಶೇಕಡ 2 ಹಾಗೂ ಶೇಕಡ 1 ನದಿ, ಕೆರೆ, ತೊರೆಗಳ ರೂಪದಲ್ಲಿವೆ. ಹಾಗಾಗಿ ಶುದ್ಧವಾದ ಕುಡಿಯುವ ನೀರನ್ನು ಪಡೆಯಲು ಮಳೆ ನೀರನ್ನು ವ್ಯರ್ಥವಾಗಿ ಹರಿಯಲು ಬಿಡದೆ, ಸಾಧ್ಯವಾದಷ್ಟು ಭೂಮಿಯಲ್ಲಿ ಇಂಗಲು ಬಿಡುವುದು ಅವಶ್ಯಕವಾಗಿದೆ ಎಂದರು.
ನೀರಿನ ಅಭಾವಕ್ಕೆ ಕಾರಣಗಳು:
1. ಜನಸಂಖ್ಯೆ ಮಿತಿಮೀರಿದ ವೇಗದಲ್ಲಿ ಹೆಚ್ಚಳವಾಗಿರುವುದು.
2. ಕಟ್ಟಡಗಳ ಸಂಖ್ಯೆಯಲ್ಲಿ ವೃದ್ದಿ.
3. ಕೈಗಾರಿಕೀಕರಣ.
4. ಬೆಟ್ಟಗುಡ್ಡಗಳನ್ನು ಸಮತಟ್ಟು ಮಾಡಿ ಸೈಟ್ ನಿರ್ಮಾಣ.
5. ಹಳ್ಳ- ಕೆರೆ, ತೋಡುಗಳಲ್ಲಿ ಹೂಳು ತುಂಬಿರುವುದು.
6. ಕೀಟನಾಶಕ, ರಾಸಾಯನಿಕಗಳ ಅತಿಯಾದ ಬಳಕೆಯಿಂದ ಮಣ್ಣು ಗಡುಸು ಹೊಂದಿರುವುದು.
7. ಕೃಷಿ ಚಟುವಟಿಕೆಗಳ, ಬೇಸಾಯ ಕುಂಠಿತ
8. ಪ್ಲಾಸ್ಟಿಕ್ ಗಳ ಅತಿಯಾದ ಬಳಕೆ
9. ವಿದ್ಯುನ್ಮಾನ ಯಂತ್ರಗಳ ಅವೈಜ್ಞಾನಿಕ ನಿರ್ವಹಣೆ
ನೀರು ಇಂಗಿಸುವ ವಿಧಾನಗಳು:
1 ಕೃಷಿಯಲ್ಲಿ ಹನಿ ನೀರಾವರಿ ಬಳಕೆ.
2. ಮನೆಯ ಛಾವಣಿಗೆ ಬೀಳುವ ನೀರನ್ನು ಸಮೀಪದ ಬಾವಿ ಅಥವಾ ಗುಂಡಿ ತೋಡಿ ಭೂಮಿಗೆ ಇಂಗಿಸುವುದು.
3. ಇಂಗು ಗುಂಡಿಗಳ ನಿರ್ಮಾಣ.
4. ಮನೆಯ ಅಂಗಳದ ಹುಲ್ಲನ್ನು ಮಣ್ಣಿನ ಸಮೇತ ತೆಗೆಯದೆ ,ಮೇಲ್ಬಾಗದಲ್ಲಿ ಮಾತ್ರ ತೆಗೆಯುವುದು. ಇದರಿಂದ ಮಳೆ ನೀರು ಇಂಗಲು ಸಹಾಯವಾಗುತ್ತದೆ. ಜೊತೆಗೆ ಮಣ್ಣಿನ ಸವೆತವನ್ನು ತಡೆಗಟ್ಟಬಹುದು.
5. ಮನೆಯ ಅಂಗಳ ಮತ್ತು ಪರಿಸರದಲ್ಲಿ ಇಂಟರ್ ಲಾಕ್ ಅಳವಡಿಸದೆ ಇರುವುದು.
ಶಾಲಾ ಸಂಚಾಲಕರಾದ ವೈ.ಮೊಹಮ್ಮದ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯಿನಿ ನಂದಾ ಉಮಾಪ್ರಿಯಾ ಗಡಿಯಾರ್, ಸಹ ಮುಖ್ಯೋಪಾಧ್ಯಾಯ ಫೆಲಿಕ್ಸ್ ಸಿಕ್ವೇರ, ಮ್ಯಾನೇಜರ್ ಫ್ಲೋಸಿ ತಾವ್ರೊ ಉಪಸ್ಥಿತರಿದ್ದರು.
ಶಿಕ್ಷಕಿ ಯಾಸ್ಮೀನ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ನೌಶೀದ ಸ್ವಾಗತಿಸಿದರು.