ಕನ್ಯಾಡಿಯಲ್ಲಿ ಸೆ.3ರಂದು ರಾಷ್ಟ್ರೀಯ ಧರ್ಮ ಸಂಸದ್: ಉದ್ಘಾಟನೆಗೆ ಸಿಎಂ ಕುಮಾರಸ್ವಾಮಿ, ಸಚಿವ ಪ್ರಕಾಶ್ ಜಾವಡೇಕರ್
ಮಂಗಳೂರು, ಸೆ.1: ಧರ್ಮಸ್ಥಳದ ಕನ್ಯಾಡಿ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದಲ್ಲಿ ಸೆ.3ರಂದು ನಡೆಯಲಿರುವ ರಾಷ್ಟ್ರೀಯ ಧರ್ಮ ಸಂಸದ್ -2018 ಕಾರ್ಯಕ್ರಮವನ್ನು ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಟಾಟಿಸುವರು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವೆಡೇಕರ್ ಭಾಗವಹಿಸುವರು ಎಂದು ಸಂಸದ ಹಾಗೂ ಕಾರ್ಯಕ್ರಮ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿಂದು ಕರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಸ್ಥಳ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಅಂಕಿಅಂಶ ಮತ್ತು ಯೋಜನಾ ಖಾತೆಯ ಸಚಿವ ಡಿ.ವಿ.ಸದಾನಂದ ಗೌಡ, ಮಾಜಿ ಮುಮಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ದ.ಕ., ಚಿಕ್ಕಮಗಳೂರು ಸೇರಿದಂತೆ ಸ್ಥಳೀಯ ಸಂಸದರು, ಶಾಸಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸೆ.2ರಂದು ದೇಶದ ವಿವಿಧೆಡೆಗಳಿಂದ ಆಗಮಿಸುವ 2000ಕ್ಕೂ ಅಧಿಕ ಸಾಧು-ಸಂತರು ಜನಾರ್ದನ ದೇವಸ್ಥಾನದಿಂದ ಮೆರವಣಿಗೆಯಲ್ಲಿ ನಿತ್ಯಾನಂದ ನಗರಕ್ಕೆ ಆಗಮಿಸಲಿದ್ದಾರೆ. ಮಂಗಳೂರಿನಿಂದ ಕನ್ಯಾಡಿಗೆ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. 1,000 ಸ್ವಯಂ ಸೇವಕರು, 400 ಮಂದಿ ಕರ್ತವ್ಯ ಪ್ರಮುಖರನ್ನು ನೇಮಿಸಲಾಗಿದೆ ಎಂದು ನಳಿನ್ ಕುಮಾರ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಭರತ್ ಶೆಟ್ಟಿ, ಧರ್ಮ ಸಂಸದ್ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ.ಚಿತ್ತರಂಜನ್, ಕಾರ್ಯದರ್ಶಿ ವಸಂತ ಪೂಜಾರಿ, ಸಹ ಕಾರ್ಯದರ್ಶಿ ನವೀನ್ ಸುವರ್ಣ, ಸಹ ಸಂಚಾಲಕ ಕೃಷ್ಣಪ್ಪ ಪೂಜಾರಿ, ಕಿರಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.