ಮಂಗಳೂರು : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ಗೆ ಚಾಲನೆ
ಮಂಗಳೂರು, ಸೆ.1: ದೇಶದಾದ್ಯಂತ ಇಂದು ಭಾರತೀಯ ಅಂಚೆ ಕಚೇರಿಯಿಂದ ಆರಂಭಗೊಂಡ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ನ ಮಂಗಳೂರು ಶಾಖೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಕೇಂದ್ರ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ದೇಶದ ಆರ್ಥಿಕ ವ್ಯವಸ್ಥೆಗೆ ಕಟ್ಟಕಡೆಯ ವ್ಯಕ್ತಿಯನ್ನೂ ಸೇರಿಸುವ ಶತಮಾನದ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮದ ಮೂಲಕ ಇದೀಗ ಪ್ರಧಾನ ಮಂತ್ರಿಯವರ ಡಿಜಿಟಲ್ ಇಂಡಿಯಾದ ಕನಸು ನನಸಾಗುತ್ತಿದೆ ಎಂದರು.
ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಹೊಸ ಅಧ್ಯಾಯ ತೆರೆಯಬೇಕೆಂಬ ಮೋದಿ ಅವರ ಆಶಯಕ್ಕೆ ಪೂರಕವಾಗಿರುವ ಈ ಕಾರ್ಯಕ್ರಮದ ಮೂಲಕ 2018ರ ಡಿಸೆಂಬರ್ನೊಳಗೆ 1.55 ಲಕ್ಷ ಆ್ಯಕ್ಸೆಸ್ ಪಾಯಿಂಟ್ಗಳಿಗೆ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ. ಇಂದು ದೇಶದ 650 ಶಾಖೆಗಳು ಮತ್ತು 3,250 ಆ್ಯಕ್ಸೆಸ್ ಪಾಯಿಂಟ್ಗಳು ಕಾರ್ಯಾರಂಭಗೊಂಡಿವೆ ಎಂದು ಸಚಿವ ಸದಾನಂದ ಗೌಡ ತಿಳಿಸಿದರು.
ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳಾದ ರಾಜೇಂದ್ರ ಕುಮಾರ್, ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ಬಲ್ಮಠ ಶಾಖೆಯಲ್ಲಿ ಈ ಸೌಲಭ್ಯ ಪ್ರಾರಂಭಿಸಲಾಗಿದೆ. ಅಲ್ಲದೆ ಬಲ್ಮಠ, ಕಾಟಿಪಳ್ಳ, ಕುತ್ತೆತ್ತೂರು, ಸೂರಿಂಜೆಯಲ್ಲಿ ಆಕ್ಸೆಸ್ ಪಾಯಿಂಟ್ಗಳನ್ನೂ ರೂಪಿಸಲಾಗಿದೆ. ಪುತ್ತೂರು ಉಪವಿಭಾಗದಲ್ಲಿ ಎರಡನೇ ಹಂತದಲ್ಲಿ ಪ್ರಾರಂಭಗೊಳ್ಳಲಿದೆ. ಅಂಚೆ ಇಲಾಖೆ ನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ವಿಸ್ತಾರ ಜಾಲ ಹೊಂದಿದ್ದು, ಪೋಸ್ಟ್ಮ್ಯಾನ್, ಗ್ರಾಮೀಣ ಡಾಕ್ ಸೇವಕ್ ಮತ್ತಿತರ ಸಿಬ್ಬಂದಿಗಳ ಮೂಲಕ ಮನೆ ಮನೆಗೆ ಬ್ಯಾಂಕಿಂಗ್ ಸೌಲಭ್ಯ ತಲಪಿಸುವ ವ್ಯವಸ್ಥೆ ಮಾಡಲಾಗಿದೆ. ಆಧಾರ್ ಕಾರ್ಡ್ ಹಾಗೂ ಮೊಬೈಲ್ ಬಳಸುವ ಮೂಲಕ ಗ್ರಾಹಕರು ಬಯೋಮೆಟ್ರಿಕ್ ತಂತ್ರಜ್ಞಾನ ಹಾಗೂ ಒಟಿಪಿ ಪಡೆದು ಸರಳವಾಗಿ ವ್ಯವಹಾರ ನಡೆಸಬಹುದು.
ಇದೇ ವೇಳೆ ಹೊಸದಿಲ್ಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರ ಮಟ್ಟದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ಗೆ ಚಾಲನೆ ನೀಡುವ ಹಾಗೂ ಸಂದೇಶ ನೀಡುವ ಕಾರ್ಯಕ್ರಮವನ್ನು ವೇದಿಕೆಯ ಬೃಹತ್ ಪರದೆಯ ಮೂಲಕ ಪ್ರಸಾರ ಮಾಡಲಾಯಿತು.