ಗಾಮ ಮಟ್ಟದಲ್ಲಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ: ಶಾಸಕ ರಾಜೇಶ್ ನಾಯಕ್
ಸಂಗಬೆಟ್ಟು ಗ್ರಾ.ಪಂ.ನಲ್ಲಿ ಬಾಪೂಜಿ ಸೇವಾ ಕೇಂದ್ರಕ್ಕೆ ಚಾಲನೆ
ಬಂಟ್ವಾಳ, ಸೆ. 1: ಗಾಮ ಮಟ್ಟದಲ್ಲಿ ಅಭಿವೃದ್ಧಿಯಾದರೆ ಮಾತ್ರ ಈ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಹೇಳಿದ್ದಾರೆ.
ಅವರು ಸಂಗಬೆಟ್ಟು ಗ್ರಾಮ ಪಂಚಾಯತ್ನಲ್ಲಿ ಬಾಪೂಜಿ ಸೇವಾ ಕೇಂದ್ರಕ್ಕೆ ಶನಿವಾರ ಚಾಲನೆ ನೀಡಿ, ಬಳಿಕ ಗಾಂಧಿ ಗ್ರಾಮ ಪುರಸ್ಕಾರ, ಸೋಲಾರ್ ದಾರಿದೀಪ ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಭಿವೃದ್ಧಿಯೇ ಗಾಂಧೀಜಿಯವರ ಕನಸಾಗಿತ್ತು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿಶ್ವಾರ್ಥವಾಗಿ ಕಾರ್ಯನಿರ್ವಹಿಸಿದರೆ ಗ್ರಾಮೀಣ ಪ್ರದೇಶ ಅಭಿವೃದ್ಧಿಯಾಗುತ್ತದೆ.
ಸಂಗಬೆಟ್ಟು ಬಾಪೂಜಿ ಸೇವಾ ಕೇಂದ್ರದ ಅಡಿಯಲ್ಲಿ ವಿವಿಧ 43 ಸೇವೆಗಳನ್ನು ನೀಡುವ ಕೇಂದ್ರ ಜಿಲ್ಲೆಯಲ್ಲೇ ಪ್ರಥಮವಾಗಿದ್ದು, ಇದು ಇತರ ಗ್ರಾಮ ಪಂಚಾಯತ್ಗೂ ಮಾದರಿಯಾಗಿದೆ ಎಂದರು.
ತಾಲೂಕಿನಲ್ಲಿ ಇತರ ಗ್ರಾಪಂಗೂ ಪರಿಣಾಮಕಾರಿಯಾಗಿ ನಿರ್ವಹಿಸಲು ಬಾಪೂಜಿ ಕೇಂದ್ರವನ್ನು ವಿಸ್ತರಿಸುವಂತೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸೂಚನೆ ನೀಡಲಾಗುವುದು ಎಂದರು. ಗ್ರಾಪಂ ಅಧ್ಯಕ್ಷೆ ಗುಲಾಬಿ ಕಾರ್ಯಕ್ರಮದ ಅದ್ಯಕ್ಷ ತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪಿಂಚಣಿ ಸ್ವೀಕೃತಿ ಪತ್ರ, ಪರಿಹಾರ ನಿಧಿ ಚೆಕ್ ಮತ್ತಿತರರ ಸರಕಾರಿ ಸೌಲಭ್ಯ ಗಳನ್ನು ವಿತರಿಸಲಾಯಿತು. ಸಂಗಬೆಟ್ಟು ಗ್ರಾ.ಪಂ. ವ್ಯಾಪ್ತಿಯ 15 ಅಂಗನವಾಡಿ ಕೇಂದ್ರಗಳಿಗೆ ರೇಡಿಯೋ ಸೆಟ್ ವಿತರಿಸಲಾಯಿತು.
ವೇದಿಕೆಯಲ್ಲಿ ಜಿಪಂ ಸದಸ್ಯ ಎಂ.ತುಂಗಪ್ಪ ಬಂಗೇರ, ಗ್ರಾಪಂ ಉಪಾಧ್ಯಕ್ಷ ಸತೀಶ್ ಪೂಜಾರಿ, ಸದಸ್ಯರಾದ ಮಾದವ ಶೆಟ್ಟಿಗಾರ್, ಸುರೇಶ್ ಕುಲಾಲ್, ಕೆ.ಮಯ್ಯದಿ, ನಳಿನಿ, ಪದ್ಮಲತಾ, ಸುಲೋಚನಾ, ವಿಮಲಾ ಮೋಹನ, ಗ್ರಾಮಕರಣಿಕ ಪರೀಕ್ಷಿತ್, ಮೆಸ್ಕಾಂ ಜೆಇ ತಿಲಕ್ ಕುಮಾರ್, ಪಶು ವೈದ್ಯಾಧಿಕಾರಿ ಶ್ರೀಧರ್, ಪಂಚಾಯತ್ ಸಿಬ್ಬಂದಿ ಮಾಹಾಬಲ ನಾಯ್ಕ, ಮಹಮ್ಮದ್ ಶಾಫಿ, ಸುರೇಶ್, ನವೀನ್, ಗ್ರಾಮ ಸಹಾಯಕ ಸತೀಶ್ ಶೆಟ್ಟಿಗಾರ್, ಗ್ರಂಥ ಲಾಯ ಮೇಲ್ವಿಚಾರಕಿ ಶೋಭಾ ಮತ್ತಿತರರು ಉಪಸ್ಥಿತರಿದ್ದರು.
ಪಿಡಿಒ ಸಿಲ್ವಿಯಾ ಫರ್ನಾಂಡಿಸ್ ಸ್ವಾಗತಿಸಿ, ವಂದಿಸಿದರು. ಮಾಜಿ ತಾಪಂ ಸದಸ್ಯ ಪ್ರಭಾಕರ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಗಾಂಧೀ ಗ್ರಾಮ ಪುರಸ್ಕಾರ ಇದರ 5 ಲಕ್ಷ ರೂ. ವಿಶೇಷ ಅನುದಾನದಲ್ಲಿ ಅಳವಡಿಸಲಾದ ಸೋಲಾರ್ ಬೀದಿ ದೀಪವನ್ನು ಶಾಸಕರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಪಂಚಾಯತ್ ಗ್ರಂಥಾಲಯ, ಪಶು ಚಿಕಿತ್ಸಾಲಯ, ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.