ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ಹಿರಿಯ ಸಾಹಿತಿ ಬಿ.ಎಂ. ರೋಹಿಣಿ ಆಯ್ಕೆ
ಮಂಗಳೂರು, ಸೆ.1: ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಸೆ.15ರಂದು ಜರಗಲಿರುವ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಹಿರಿಯ ಸಾಹಿತಿ ಬಿ.ಎಂ. ರೋಹಿಣಿ ಆಯ್ಕೆಯಾಗಿದ್ದಾರೆ.
ಬರಹ, ಸಂಶೋಧನೆ, ಅಧ್ಯಯನವನ್ನು ಪ್ರವೃತ್ತಿಯಾಗಿಸಿಕೊಂಡಿರುವ ಸಾಹಿತಿ ಬಿ.ಎಂ.ರೋಹಿಣಿ ವೃತ್ತಿಯಲ್ಲಿ ಮೂರು ದಶಕಗಳ ಕಾಲ ಅಧ್ಯಾಪಕಿಯಾಗಿ ನಿವೃತ್ತರು. ಸ್ತ್ರೀ ಸಂವೇದನೆ ಸಹಿತ ಸ್ತ್ರೀಯರ ಪರವಾದ ಅನೇಕ ಲೇಖನ ಸಂಕಲನಗಳಲ್ಲದೆ, ಕಥಾ ಸಂಕಲನ, ಅನುಭವಕಥನ, ವ್ಯಕ್ತಿಚಿತ್ರ, ಸಂಶೋಧನಾ ಕೃತಿಗಳನ್ನು ಬರೆದಿದ್ದಾರೆ.
ಇವರ ‘ಸ್ತ್ರೀ ಸಂವೇದನೆ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ನ ದತ್ತಿನಿಧಿ ಪ್ರಶಸ್ತಿ 1995, ‘ಸ್ತ್ರೀ ಶಿಕ್ಷಣ- ಸಂಸ್ಕೃತಿ’ ಕೃತಿಗೆ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಶ್ರೇಷ್ಠ ಕೃತಿ ಪ್ರಶಸ್ತಿ -2002 ಲಭಿಸಿದೆ.
ಮೌಲ್ಯ ಪ್ರಕಾಶನ-2006 ಕಾಂತಾವರ ಸಾಹಿತ್ಯ ಪ್ರಶಸ್ತಿ-2015. ಜೇಸಿಸ್, ಲಯನ್ಸ್, ಯುವ ವಾಹಿನಿ, ಬೆಥನಿ ಹೀಗೆ ಅನೇಕ ಸಂಸ್ಥೆಗಳೂ ಕೂಡ ಇವರನ್ನು ಗೌರವಿಸಿದೆ.
ವೀರರಾಣಿ ಅಬ್ಬಕ್ಕ ಪ್ರಸಸ್ತಿ-2016, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗೌರವ ಸನ್ಮಾನ-2015, ವಿಶುಕುಮಾರ್ ಪ್ರಶಸ್ತಿ-2018, ಹೀಗೆ ಹತ್ತು ಹಲವಾರು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿರುವ ಬಿ.ಎಂ. ರೋಹಿಣಿ ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆಗೊಂಡಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ನ ಮಂಗಳೂರು ತಾಲೂಕು ಘಟಕಾಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.