ಉಡುಪಿ ನಗರಸಭೆ ಚುನಾವಣೆ: ಮುಸ್ಲಿಮ್ ಅಭ್ಯರ್ಥಿಗಳೇ ಇಲ್ಲ !
ಉಡುಪಿ, ಸೆ.1: ಅಧ್ಯಕ್ಷರಾಗಿ ಆಯ್ಕೆಯಾಗುವವರು ಹಾಜಿ ಅಬ್ದುಲ್ಲಾ ಸಾಹೇಬರು ಕುಳಿತ ಕುರ್ಚಿಯನ್ನು ಏರಿ ನಗರಾಡಳಿತ ನಡೆಸುವಂಥ ಐತಿಹಾಸಿಕ ಮಹತ್ವ ಹೊಂದಿರುವ ಉಡುಪಿ ನಗರಸಭೆಯ ಈ ಬಾರಿಯ ಚುನಾವಣಾ ಕಣದಲ್ಲಿ ಒಂದೇ ಒಂದು ಮುಸ್ಲಿಮ್ ಅಭ್ಯರ್ಥಿಗಳಿಲ್ಲ.
ಪ್ರಮುಖ ಮೂರು ರಾಜಕೀಯ ಪಕ್ಷಗಳು ಒಂದೂ ವಾರ್ಡಿನಲ್ಲಿಯೂ ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.
ಉಡುಪಿ 1935ರವರೆಗೆ ತಾಲೂಕು ಬೋರ್ಡ್ ಆಗಿ ಆಡಳಿತ ನಡೆಸುತ್ತಿದ್ದು, ಆಗ ಕೊಡುಗೈ ದಾನಿ ಹಾಜಿ ಅಬ್ದುಲ್ಲಾ ಉಡುಪಿ ತಾಲೂಕು ಬೋರ್ಡಿನ ಅಧ್ಯಕ್ಷರಾಗಿದ್ದರು. ಆಗ ಅವರು ಕುಳಿತುಕೊಂಡ ಕುರ್ಚಿ ಇಂದಿಗೂ ನಗರಸಭೆಯಲ್ಲಿದೆ. ಪ್ರತಿ ತಿಂಗಳು ನಡೆಯುವ ನಗರಸಭಾ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವವರು ಇದೇ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಮೊದಲಿನಿಂದಲೂ ನಡೆದು ಬಂದ ಸಂಪ್ರದಾಯ. ಅದು ಇಂದಿಗೂ ಮುಂದುವರಿದಿದೆ. ಹೀಗಾಗಿ ಹಾಜಿ ಅಬ್ದುಲ್ಲಾರ ಕುರ್ಚಿ ಈಗಲೂ ನಗರಸಭೆ ಯಲ್ಲಿ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ.
ಉಡುಪಿ ನಗರಸಭೆಯಲ್ಲಿ ಒಟ್ಟು 35 ವಾರ್ಡ್ಗಳಿದ್ದು, ಈ ಎಲ್ಲ ವಾರ್ಡ್ ಗಳಲ್ಲಿಯೂ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತನ್ನ ಅಭ್ಯರ್ಥಿಗಳನ್ನು ಕಣ ಕ್ಕಿಳಿಸಿವೆ. ಅಲ್ಲದೆ ಒಂಭತ್ತು ವಾರ್ಡ್ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿ ದ್ದಾರೆ. ಆದರೆ ಇದರಲ್ಲಿ ಒಂದೇ ಒಂದು ಮುಸ್ಲಿಮ್ ಅಭ್ಯರ್ಥಿಯ ಹೆಸರಿಲ್ಲ.
35 ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಪಕ್ಷ, ಅದರಲ್ಲಿ ಆರು ಮಂದಿ ಕ್ರಿಶ್ಚಿಯನ್ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಹಾರ್ಮಿಸ್ ನರೋನ್ಹಾ (ಮೂಡಬೆಟ್ಟು ವಾರ್ಡ್), ಬಬಿತಾ ಕೊಳ (ಮಲ್ಪೆ ಸೆಂಟ್ರಲ್), ಸೆಲಿನಾ ಕರ್ಕಡ (ಮೂಡುಪೆರಂಪಳ್ಳಿ), ಐರಿನ್ ಮಿನೇಜಸ್ (ಗೋಪಾಲಪುರ), ರೆನಾಲ್ಡ್ ಪ್ರವೀಣ್ ಕುಮಾರ್ (ಅಂಬಲಪಾಡಿ), ಹಿಲರಿ ಜತ್ತನ್ನ (ಇಂದಿರಾನಗರ) ಸ್ಪರ್ಧಿಸಿದ್ದಾರೆ.
ನಗರಸಭೆ ವಾರ್ಡ್ಗಳ ಪೈಕಿ ಅತ್ಯಂತ ಹೆಚ್ಚು ಮುಸ್ಲಿಮ್ ಜನಸಂಖ್ಯೆ ಇರುವುದು ಇಂದಿರಾನಗರ, ಕರಂಬಳ್ಳಿ, ವಡಬಾಂಡೇಶ್ವರ ವಾರ್ಡ್ಗಳಲ್ಲಿ. ಆದರೆ ವಡಂಬಾಡೇಶ್ವರ (ಮೀಸಲಾತಿ-ಸಾಮಾನ್ಯ)ದಲ್ಲಿ ಶೇಖರ್ ಕೋಟ್ಯಾನ್, ಕರಂಬಳ್ಳಿ (ಹಿಂದುಳಿದ ವರ್ಗ ಎ)ಯಲ್ಲಿ ಯಾದವ ಕರ್ಕೇರ, ಇಂದಿರಾನಗರ (ಸಾಮಾನ್ಯ)ದಲ್ಲಿ ಹಿಲರಿ ಜತ್ತನ್ನ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇಲ್ಲಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಅವಕಾಶ ಇದ್ದರೂ ಗೆಲ್ಲುವ ಕುದುರೆಗಳಿಲ್ಲ ಎಂಬ ನೆಪವೊಡ್ಡಿ ಟಿಕೆಟ್ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ.
ಅಲ್ಲದೆ 9 ವಾರ್ಡ್ಗಳಲ್ಲಿ ಸ್ಪರ್ಧಿಸಿರುವ ಜೆಡಿಎಸ್ ಪಕ್ಷದಲ್ಲೂ ಒಬ್ಬರೇ ಒಬ್ಬ ಮುಸ್ಲಿಮ್ ಅಭ್ಯರ್ಥಿ ಕಣದಲ್ಲಿಲ್ಲ. ಆರಂಭದಲ್ಲಿ ಗುಂಡಿಬೈಲು ವಾರ್ಡ್ ನಲ್ಲಿ ಆರೀಫ್ ಕರಂಬಳ್ಳಿಗೆ ಟಿಕೆಟ್ ನೀಡಿರುವುದಾಗಿ ಜೆಡಿಎಸ್ ಘೋಷಿಸಿತ್ತು. ಆದರೆ ಆರೀಫ್ ತಾನು ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದು, ಜೆಡಿಎಸ್ನಿಂದ ಸ್ಪರ್ಧಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು. ಬಿಜೆಪಿ ಈ ಬಾರಿ ಮಲ್ಪೆ ಸೆಂಟ್ರಲ್ ನಿಂದ ಎಡ್ವಿನ್ ಕರ್ಕಡರನ್ನು ಕಣಕ್ಕಿಳಿಸಿದೆ. ನಿರೀಕ್ಷೆಯಂತೆ ಆ ಪಕ್ಷದಲ್ಲೂ ಕೂಡ ಯಾವುದೇ ಮುಸ್ಲಿಮ್ ಅಭ್ಯರ್ಥಿಗಳು ಸ್ಪರ್ಧಿಸಿಲ್ಲ.
ಕಳೆದ 2014ರ ಉಡುಪಿ ನಗರಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದಿಂದ ಒಬ್ಬನೇ ಒಬ್ಬ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಿರಲಿಲ್ಲ. ಆ ಚುನಾವಣೆಯಲ್ಲಿ 22 ಮಂದಿ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿ ಕಾಂಗ್ರೆಸ್ ಮೊದಲ ಬಾರಿಗೆ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಇದೇ ವೇಳೆ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಕಾರಣ ಉಡುಪಿ ನಗರ ಸಭೆಗೆ ನೇಮಕ ಮಾಡಲಾದ ಐದು ಮಂದಿ ನಾಮನಿರ್ದೇಶಿತ ಸದಸ್ಯರಲ್ಲಿ ಮುಸ್ಲಿಮ್ ಸಮುದಾಯಕ್ಕೆ ಅವಕಾಶ ಕಲ್ಪಿಸಿ, ಹಸನ್ ಅಜ್ಜರಕಾಡು ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿತ್ತು.