ಕಾಡೂರು ಮನೆ ಕಳವು ಪ್ರಕರಣ: ಮಹಿಳೆ ಸಹಿತ ನಾಲ್ವರ ಬಂಧನ
ಉಡುಪಿ, ಸೆ.1: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡೂರು ನೀರ್ಮಕ್ಕಿ ಎಂಬಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಡಿಸಿಐಬಿ ಪೊಲೀಸರು ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಆ.30ರಂದು ಬಂಧಿಸಿದ್ದಾರೆ.
ಮಂದರ್ತಿ ಸಮೀಪದ ತಂತ್ರಾಡಿ ಬಾಯಿರಬೆಟ್ಟುವಿನ ವಿಜಯ ಕುಮಾರ್ ಶೆಟ್ಟಿ(25) ಹಾಗೂ ಪುತ್ತೂರು ತಾಲೂಕಿನ ಕುರಿಯಾ ನಿವಾಸಿ ಎಂ.ಬಿ.ಅಬ್ದುಲ್ ಬಶೀರ್(45), ಕುಂಬ್ರ ಒಳಮೊಗರು ನಿವಾಸಿ ಕೆ.ಎಂ.ಇಸ್ಮಾಯಿಲ್(48), ಇವರ ಪತ್ನಿ, ಬಂಟ್ವಾಳ ಕರುಮೇಲುವಿನ ಜಮೀಲಾ (37) ಬಂಧಿತ ಆರೋಪಿ ಗಳು ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯ ಕುಮಾರ್ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಸಹಕರಿಸಿದ ಆರೋಪದಡಿ ಬಶೀರ್, ಇಸ್ಮಾಯಿಲ್ ಹಾಗು ಜಮೀಲಾ ಅವರನ್ನು ಬಂಧಿಸಲಾಗಿದೆ. ಇವರಿಂದ 50 ಗ್ರಾಂ ಚಿನ್ನದ ಗಟ್ಟಿ ಹಾಗೂ ಕಳ್ಳತನ ನಡೆಸಲು ಉಪಯೋಗಿಸಿದ ಕಬ್ಬಿಣದ ರಾಡ್ ಹಾಗೂ ಹೊಂಡಾ ಮ್ಯಾಟ್ರಿಕ್ಸ್ ಡಿಯೋ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 1,90,650 ರೂ. ಎಂದು ಅಂದಾಜಿಸ ಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬ.ನಿಂಬರ್ಗಿ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಮತ್ತು ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಡಿಸಿಐಬಿ ನಿರೀಕ್ಷಕ ಸಂಪತ್ ಕುಮಾರ್ ನೇತೃತ್ವದಲ್ಲಿ ಡಿಸಿಐಬಿ ಎಎಸ್ಸೈ ರವಿಚಂದ್ರ ಹಾಗೂ ಸಿಬ್ಬಂದಿಗಳಾದ ಸುರೇಶ ಕೆ., ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸಂತೋಷ ಕುಂದರ್, ರಾಘವೇಂದ್ರ ಉಪ್ಪುಂದ, ಪ್ರವೀಣ, ಶಿವಾನಂದ ಪೂಜಾರಿ, ರಾಜ್ ಕುಮಾರ್, ದಯಾನಂದ ಪ್ರಭು ಮತ್ತು ಚಾಲಕ ರಾಘವೇಂದ್ರ ಈ ಕಾರ್ಯಾಚರಣೆ ನಡೆಸಿದ್ದಾರೆ.