ಶ್ರೀಕೃಷ್ಣಾಷ್ಟಮಿ, ಶ್ರೀೃಷ್ಣಲೀಲೋತ್ಸವಕ್ಕೆ ಉಡುಪಿ ಸಜ್ಜು
ಉಡುಪಿ, ಸೆ.1: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೆ. 2 ಮತ್ತು 3ರಂದು ಶ್ರೀಕೃಷ್ಣಾಷ್ಟಮಿ ಆಚರಣೆ ಮತ್ತು ಶ್ರೀಕೃಷ್ಣಲೀಲೋತ್ಸವಕ್ಕೆ(ವಿಟ್ಲ ಪಿಂಡಿ) ಭರದ ಸಿದ್ಧತೆಗಳು ನಡೆಯುತ್ತಿವೆ.
ವಿಟ್ಲಪಿಂಡಿಯಂದು ರಥಬೀದಿಯಲ್ಲಿ ಗೊಲ್ಲರು ಒಡೆಯುವ ಮೊಸರು ಕುಡಿಕೆಗಳನ್ನು ನೇತು ಹಾಕಲು ಗುರ್ಜಿಗಳನ್ನು ಈಗಾಗಲೇ ನೆಡಲಾಗಿದೆ. ಮಠ, ಗರ್ಭಗುಡಿ ಹಾಗೂ ರಥಬೀದಿಯಲ್ಲಿ ವಿವಿಧ ಬಗೆಯ ಆಲಂಕಾರ ಮಾಡಲಾಗಿದೆ. ಶ್ರೀಕೃಷ್ಣಾಜನ್ಮಾಷ್ಠಮಿ ಪ್ರಯುಕ್ತ ಮಠದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಹುಲಿ ವೇಷಕ್ಕೆ ಆಯಾ ತಂಡಗಳು ಬಣ್ಣ ಹಚ್ಚಲು ಆರಂಭಿದ್ದು, ನಾಳೆಯಿಂದ ಕಣಕ್ಕೆ ಇಳಿಯಲಿವೆ.
ಇಂದು ಮಠದ ಭೋಜನ ಶಾಲೆಯಲ್ಲಿ ವಿವಿಧ ಬಗೆಯ ಲಾಡುಗಳನ್ನು ಹಾಗೂ ವಿವಿಧ ಗಾತ್ರದ ಚಕ್ಕುಲಿಗಳನ್ನು ಸಾವಿರಾರು ಸಂಖ್ಯೆಯಲ್ಲಿ ತಯಾರಿಸುವ ಕೆಲಸ ನಡೆಯುತ್ತಿದೆ. ಇದನ್ನು ಭಕ್ತರಿಗೆ ಚಿಣ್ಣರ ಸಂತರ್ಪಣೆಯ ಶಾಲೆಯ ಮಕ್ಕಳಿಗೆ ವಿತರಿಸಲು ಸಣ್ಣ ಬಟ್ಟೆಯ ಚೀಲಗಳಲ್ಲಿ ಪ್ಯಾಕ್ ಮಾಡಲಾಗುತ್ತಿದೆ.
ನಾಳೆ ಬೆಳಗ್ಗೆ 6:00 ಗಂಟೆಗೆ ಕೃಷ್ಣ ಮಠದಲ್ಲಿ ಲಕ್ಷಾರ್ಚನೆ, 9ಗಂಟೆಗೆ ಮಹಾ ಪೂಜೆ ನಡೆಯಲಿದೆ. ಬಳಿಕ 10ಗಂಟೆಗೆ ಪರ್ಯಾಯ ಪಲಿಮಾರು ಶ್ರೀಗಳು ರಾತ್ರಿ ದೇವರ ಸಮರ್ಪಣೆಗಾಗಿ ಉಂಡೆ ಕಟ್ಟಲು ಮುಹೂರ್ತ ನಡೆಸಲಿದ್ದಾರೆ. ರಾತ್ರಿ 7:00ರಿಂದ ರಾಜಾಂಗಣದಲ್ಲಿ ಪ್ರವೀಣ್ ಗೋಡ್ಕಿಂಡಿ ಅವರಿಂದ ಸಂಗೀತ ಕಚೇರಿ ನಡೆಯಲಿದೆ.
ದಿನವಿಡೀ ಮಠದ ವಿವಿಧ ಕಡೆಗಳಲ್ಲಿ ವಿವಿಧ ಸ್ಪರ್ಧೆಗಳು, ಭಜನಾ ತಂಡಗಳಿಂದ ನಿರಂತರ ಭಜನೆ, ನಾಗಸ್ವರ ವಾದನಗಳು ನಡೆಯಲಿವೆ. ಹಗಲಿಡೀ ಉಪವಾಸ ವ್ರತದಲ್ಲಿರುವ ಪಲಿಮಾರುಶ್ರೀಗಳು ರಾತ್ರಿ 10 ಗಂಟೆಗೆ ವಿಶೇಷ ಮಹಾಪೂಜೆ ನಡೆಸಲಿದ್ದು, ಆ ಬಳಿಕ ಮಧ್ಯರಾತ್ರಿ 11:48ಕ್ಕೆ ಶ್ರೀಕೃಷ್ಣ ಮಠದ ತುಳಸೀಕಟ್ಟೆಯಲ್ಲಿ ಶ್ರೀಕೃಷ್ಣ ಜನಿಸಿದ, ಚಂದ್ರೋದಯವಾದ ಕ್ಷಣದಲ್ಲಿ ಅರ್ಘ್ಯ ಪ್ರದಾನ ಮಾಡುವರು.
ಈ ಸಂದರ್ಭದಲ್ಲಿ ಪರ್ಯಾಯ ಶ್ರೀಗಳಿಗೆ ಉಡುಪಿಯಲ್ಲಿ ಚಾರ್ತುಮಾಸ್ಯ ಕುಳಿತಿರುವ ಉಳಿದ ಮಠಾಧೀಶರು ಜೊತೆಯಾಗುವರು. ಅನಂತರ ಈ ಕ್ಷಣಕ್ಕಾಗಿ ಕಾದಿದ್ದ ನೂರಾರು ಮಂದಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಅರ್ಘ್ಯ ಪ್ರದಾನ ಮಾಡುವರು.
ಮರು ದಿನ ಸೆ.3ರಂದು ವಿಟ್ಲಪಿಂಡಿ ನಡೆಯಲಿದೆ. ಉಡುಪಿ ನಗರವಿಡೀ ಜನರಿಂದ ತುಂಬಿ ತುಳುಕಲಿದೆ. ವಿವಿಧ ವೇಷಗಳು ನಗರವಿಡೀ ಸಂಚರಿಸಲಿದೆ. ಇದರಲ್ಲಿ ಹುಲಿವೇಷಕ್ಕೆ ವಿಶೇಷ ಪ್ರಾಧಾನ್ಯತೆ ದೊರೆಯುತ್ತದೆ. ಸೋಮವಾರ ಬೆಳಗ್ಗೆ 11 ಗಂಟೆಯಿಂದಲೇ ರಾಜಾಂಗಣದಲ್ಲಿ ಸಾವಿರಾರು ಮಂದಿ ಭಕ್ತರಿಗೆ ಕೃಷ್ಣ ಪ್ರಸಾದದ ಭೋಜನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಈ ಬಾರಿ ಮುಂಬಯಿಯಿಂದ ಬಂದಿರುವ ಆಲಾರೆ ಗೋವಿಂದ ತಂಡದಿಂದ ದಹಿಹಿಂಡಿ ನಗರದ ಅನೇಕ ಭಾಗಗಳಲ್ಲಿ ನಡೆಯಲಿದೆ. ಬೆಳಗ್ಗೆ 10:30ಕ್ಕೆ ರಥಬೀದಿಯ ಕನಕಗೋಪುರದ ಎದುರು ಇದರ ಉದ್ಘಾಟನೆಯೂ ನಡೆಯಲಿದೆ. ಅಪರಾಹ್ನ 3:00ಕ್ಕೆ ಮೊಸರು ಕುಡಿಕೆಯ ಸಂಭ್ರಮ ರಥಬೀದಿಯಲ್ಲಿ ನಡೆಯಲಿದೆ. 5 ಗಂಟೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸರಳ ಕೃಷ್ಣ ಜನ್ಮಾಷ್ಟಮಿ
ಈ ಬಾರಿ ಕೊಡಗು ಸೇರಿದಂತೆ ವಿವಿದೆಡೆಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಸಾಕಷ್ಟು ಹಾನಿ-ನಷ್ಟ ಉಂಟಾಗಿರುವುದರಿಂದ ಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ನಡೆಸಲು ನಿರ್ಧರಿಸಲಾಗಿದೆ. ಸಾಂಪ್ರದಾಯಿಕ ಧಾರ್ಮಿಕ ವಿಧಿವಿದಾನಗಳು ಎಂದಿನಂತೆ ನಡೆದರೂ, ವಿಶೇಷ ಅಬ್ಬರವಿರುವುದಿಲ್ಲ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಬಾರಿ ಅಷ್ಟಮಿಯ ಕೃಷ್ಣ ಪ್ರಸಾದವನ್ನು ಮಡಿಕೇರಿ-ಕುಶಾಲನಗರದ ನಿರಾಶ್ರಿತರ ಶಿಬಿರದಲ್ಲಿರುವವರಿಗೆ ಕಳುಹಿಸಿಕೊಡಲಾಗುವುದು. ಅದೇ ರೀತಿ ಚಿಣ್ಣರ ಸಂತರ್ಪಣೆಯ ಶಾಲೆಗಳ ಮಕ್ಕಳಿಗೂ ಅಷ್ಟಮಿಯ ಲಾಡು-ಚಕ್ಕುಲಿಯನ್ನು ಕಳುಹಿಸುವುದಾಗಿ ಅವರು ತಿಳಿಸಿದರು.