18 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪ ಬಂಧನ
ಮಂಗಳೂರು, ಸೆ.1: ನ್ಯಾಯಾಲಯಕ್ಕೆ ಹಾಜರಾಗದೇ 18 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ವಿದೇಶಕ್ಕೆ ಪರಾರಿಗೆ ಯತ್ನಿಸುತ್ತಿದ್ದ ವೇಳೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದು, ಆತನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಬಡಗುಳಿಪಾಡಿ ಸೂರಲ್ಪಾಡಿ ನಿವಾಸಿ ಯಾಝ್ ಆಲಂ(43) ಬಂಧಿತ ಆರೋಪಿ.
ಈತ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ 2000ನೇ ಇಸವಿಯಲ್ಲಿ ನಡೆದ ದೊಂಬಿ ಪ್ರಕರಣದಲ್ಲಿ ಆರೋಪಿಯಾಗಿದ್ದು, 18 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕೆ ನ್ಯಾಯಾಲಯವು ವಾರಂಟ್ ಹೊರಡಿಸಿತ್ತು.
ಲುಕ್ಔಟ್ ನೋಟೀಸ್ : ಈತನ ಹುಡುಕಾಟಕ್ಕೆ ಪೊಲೀಸರು ಯತ್ನಿಸುತ್ತಿದ್ದಾಗ ಈತ ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದಾನೆ ಎಂಬ ಮಾಹಿತಿಯಂತೆ ಬಜ್ಪೆ ಪೊಲೀಸ್ ಇನ್ಸ್ಪೆಕ್ಟರ್ ವಿನಂತಿಯ ಮೇರೆಗೆ ಮಂಗಳೂರು ಪೊಲೀಸ್ ಕಮಿಷನರ್ ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಅದರ ಆಧಾರದಲ್ಲಿ ಆ.31ರಂದು ಆರೋಪಿಯು ದಿಲ್ಲಿ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ ಸಮಯ, ಅಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಬಜಪೆ ಪೊಲೀಸರು ಆರೋಪಿಯನ್ನು ಬಂಧಿಸಿ ಸೆ.1ರಂದು 2ನೇ ಜೆಎಂಎ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿ ಪತ್ತೆ ಕಾರ್ಯದಲ್ಲಿ ಪೊಲೀಸ್ ಉಪನಿರೀಕ್ಷಕ ಶಂಕರ್ ನಾಯರಿ, ಎಎಸ್ಸೈ ರಾಮಚಂದ್ರ, ಎಚ್ಸಿ ರಾಮಾನಾಯ್ಕ, ಎಚ್ಸಿ ರಾಜೇಶ್, ಕಾನ್ಸ್ಟೇಬಲ್ ಹರಿಪ್ರಸಾದ್ ಭಾಗವಹಿಸಿದ್ದಾರೆ.