ನಗರಾಡಳಿತ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ: ಸಚಿವ ಝಮೀರ್ ಅಹ್ಮದ್
ಪುತ್ತೂರು, ಸೆ. 2: ನಗರಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸ್ಥಾನ ಪಡೆದುಕೊಂಡು ಅಧಿಕಾರ ನಡೆಸಲಿದ್ದು, ಮುಂದಿನ ಚುನಾವಣೆಗೆ ನಗರಾಡಳಿತ ಚುನಾವಣಾ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದು ವಕ್ಫ್ ಮತ್ತು ಆಹಾರ, ನಾಗರಿಕ ಸರಬರಾಜು ಇಲಾಖೆ ಸಚಿವ ಝಮೀರ್ ಅಹ್ಮದ್ ಹೇಳಿದರು.
ಅವರು ರವಿವಾರ ಪುತ್ತೂರಿನ ಸಾಲ್ಮರ ಅನ್ಸಾರುದ್ದೀನ್ ಯತೀಂ ಖಾನಾ (ಅನಾಥಾಲ)ಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ಕರಾವಳಿ ಸೇರಿದಂತೆ ರಾಜ್ಯದ 12 ಜಿಲ್ಲೆಗಳಿಗೆ ತಾನು ಭೇಟಿ ನೀಡಿದ್ದೇನೆ. ಸ್ಥಳೀಯಾಡಳಿತ ಚುನಾವಣೆಯಲ್ಲಿ ಈ 12 ಜಿಲ್ಲೆಗಳಲ್ಲಿ ಕಾಂಗ್ರೆಸ್ ಮೇಲುಗೈ ಪಡೆಯಲಿದೆ. ಎಲ್ಲ ಕಡೆಗಳಲ್ಲಿಯೂ ಕಾಂಗ್ರೆಸ್ ಪರವಾದ ವಾತಾವರಣವಿದೆ. ನಗರಸಭೆ ಮತ್ತು ಪುರಸಭಾ ಚುನಾವಣೆಗಳಲ್ಲೂ ಕಾಂಗ್ರೆಸ್ ಉತ್ತಮ ಸ್ಥಾನ ಪಡೆದುಕೊಳ್ಳಲಿದೆ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಿಪಿಎಲ್ ಕಾರ್ಡ್ದಾರರಿಗೆ 7 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಹಿಂದೆ ನೀಡುತ್ತಿದ್ದಂತೆ ಮುಂದುವರಿಸುವಂತೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದೆ. ಇದರ ಮೇಲೆ ಹೆಚ್ಚುವರಿಯಾಗಿ ಜನಸಾಮಾನ್ಯರಿಗೆ ಇತರ ದವಸ ಧಾನ್ಯ ನೀಡಲು ಅಡ್ಡಿ ಇಲ್ಲ ಎಂದು ತಿಳಿಸಿದ್ದೆ. ಇದಕ್ಕೆ ಸ್ಪಂದಿಸಿದ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರು 7 ಕೆಜಿ ಅಕ್ಕಿಯನ್ನು ಹಿಂದಿನಂತೆ ಪೂರೈಕೆ ಮಾಡಲು ಒಪ್ಪಿಗೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕನಚ್ಚೂರು ಮೋನು, ರಾಜ್ಯ ವಕ್ಫ್ ಸಲಹಾ ಸಮಿತಿ ಸದಸ್ಯ ಸಂಶುದ್ದೀನ್ ಸುಳ್ಯ, ಜಿಲ್ಲಾ ವಕ್ಫ್ ಸಲಹಾ ಸದಸ್ಯರಾದ ಮುಸ್ತಾಫ ಸುಳ್ಯ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಯು. ಅಬ್ದುಲ್ಲ ಹಾಜಿ, ಪ್ರ. ಕಾರ್ಯದರ್ಶಿ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಉಪಾಧ್ಯಕ್ಷ ಯಾಕೂಬ್ ಹಾಜಿ ದರ್ಬೆ, ಅನ್ಸಾರುದ್ದೀನ್ ಯತೀಂ ಖಾನದ ಅಧ್ಯಕ್ಷ ಕೆ.ಪಿ. ಅಹ್ಮದ್ ಹಾಜಿ, ಜೆಡಿಎಸ್ ರಾಜ್ಯ ಸಮಿತಿ ಉಪಾಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ, ಪಿ.ಎಂ. ಇಬ್ರಾಹಿಂ ಪರ್ಪುಂಜ, ಹಂಝ ಕಬಕ ಮತ್ತಿತರರು ಉಪಸ್ಥಿತರಿದ್ದರು.