ಉಡುಪಿ: ವಿಕಲಚೇತನ ವಿದ್ಯಾರ್ಥಿಗಳಿಗೆ ನೆರವಾದ ಜಮಾಅತೆ ಇಸ್ಲಾಮೀ ಹಿಂದ್
ಉಡುಪಿ, ಸೆ. 2: ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಮತ್ತು ಮಂಗಳೂರು ವತಿಯಿಂದ ಮಣಿಪಾಲ ಸರಳೇಬೆಟ್ಟು ವಾರ್ಡಿನ ಗಣೇಶಬಾಗ್ ನಿವಾಸಿ ಪ್ರಮೀಳಾ ಪೂಜಾರಿಯ ಮಕ್ಕಳಾದ ಧನುಷ್(19) ಮತ್ತು ದರ್ಶನ್ (16) ಎಂಬ ವಿಕಲಚೇತನ ಸಹೋದರರಿಗೆ ಇಂದು ಲ್ಯಾಪ್ಟಾಪ್ ಹಾಗೂ ಗಾಲಿ ಕುರ್ಚಿಗಳನ್ನು ಹಸ್ತಾಂತರಿಸಲಾಯಿತು.
ಮಣಿಪಾಲ ಎಂಐಟಿಯಲ್ಲಿ ಪ್ರಥಮ ಡಿಪ್ಲಮೋ ಕಂಪ್ಯೂಟರ್ ಸಯನ್ಸ್ ಕಲಿಯುತ್ತಿರುವ ಧನುಷ್ ಮತ್ತು ಮಣಿಪಾಲ ಜೂನಿಯರ್ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದರ್ಶನ್ಗೆ ಶಿಕ್ಷಣ ಮುಂದುವರಿಸಲು ವಿಕಲಚೇತನವು ಅಡ್ಡಿಯಾಗಿದ್ದು, ಈ ಬಗ್ಗೆ ಚಿಕಿತ್ಸೆ ನೀಡಿದ್ದರೂ ಇವರಿಬ್ಬರು ಈವರೆಗೆ ಗುಣಮುಖರಾಗಿಲ್ಲ. ಇದೀಗ ಮಕ್ಕಳು ಇತರರ ಸಹಾಯದಿಂದಲೇ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ.
ಸರಕಾರದಿಂದ ಮಂಜೂರಾದ ಮನೆಯಲ್ಲಿ ವಾಸವಾಗಿರುವ ಈ ಮಕ್ಕಳನ್ನು ಕಾಲು ದಾರಿಯಲ್ಲಿ ಹೊತ್ತುಕೊಂಡು ಗುಡ್ಡವೇರಬೇಕಾದ ಪರಿಸ್ಥಿತಿ ಇದೆ. ಪ್ರತಿ ಭಾವಂತರಾಗಿರುವ ಇವರು ಮನೆಯಲ್ಲೇ ಕುಳಿತು ಕಂಪ್ಯೂಟರಿನಲ್ಲಿ ಉದ್ಯೋಗ ಮಾಡುವ ಇರಾದೆ ಹೊಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಇವರಿಬ್ಬರಿಗೆ ಲ್ಯಾಪ್ ಟಾಪ್ ಹಾಗೂ ಗಾಲಿ ಕುರ್ಚಿಯನ್ನು ಅವರ ಮನೆಯಲ್ಲೇ ಹಸ್ತಾಂತರಿ ಸಲಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಜಿಲ್ಲಾಧ್ಯಕ್ಷ ಶಬ್ಬೀರ್ ಮಲ್ಪೆ, ಸೋಮಪ್ಪ ಕೋಟ್ಯಾನ್ ಸರಳಬೆಟ್ಟು, ಇದ್ರಿಸ್ ಹೂಡೆ, ಉಡುಪಿ ಜಮಾಅತ್ನ ಹಂಗಾಮಿ ಅಧ್ಯಕ್ಷ ಅಬ್ದುಲ್ ಅಝೀಝ್ ಆದಿಉಡುಪಿ, ವೆಲ್ಫೇರ್ ಪಾರ್ಟಿಯ ಅಬ್ದುಲ್ ಅಝೀಝ್ ಉದ್ಯಾವರ, ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ, ಫೈರೋಝ್ ಮನ್ನಾ, ನಿಸಾರ್ ಅಹಮದ್, ಎಸ್ಐಒ ಉಡುಪಿ ಅಧ್ಯಕ್ಷ ಫಾಝಿಲ್, ಅಬ್ದುಲ್ ಸಮೀ ಉಡುಪಿ ಮೊದಲಾದವರು ಉಪಸ್ಥಿತರಿದ್ದರು.