ನಿಮ್ಮ ನಿರೀಕ್ಷೆಗಳನ್ನು ನಾನು ಪೂರೈಸುತ್ತೇನೆ: ಶಾಸಕ ವೇದವ್ಯಾಸ ಕಾಮತ್
ರೊಸಾರಿಯೊ ಸಾಂಸ್ಕೃತಿಕ ಭವನದ ಕಾರ್ಯಕ್ರಮದಲ್ಲಿ ಶಾಸಕ
ಮಂಗಳೂರು, ಸೆ. 2: ರೊಸಾರಿಯೊ ಸಾಂಸ್ಕೃತಿಕ ಭವನದಲ್ಲಿ ರವಿವಾರ ನೂತನ ಬಿಷಪ್ ದೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು, ನಿಮ್ಮ ನಿರೀಕ್ಷೆಗಳನ್ನು ನಾನು ಪೂರೈಸುತ್ತೇನೆ ಎಂದು ಭರವಸೆ ನೀಡಿದರು.
ಈ ಅಭೂತಪೂರ್ವ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶವನ್ನು ಎಲ್ಲ ಸ್ವಯಂ ಸೇವಕರಿಗೂ ದೇವರು ನೀಡಿದ್ದಾರೆ. ನಾವು ತಪ್ಪೆಸಗಿದಾಗ ನಾವು ಫಾದರ್ ಬಳಿ ತೆರಳುತ್ತೇವೆ ಮತ್ತು ಅವರಿಗೆ ನಮ್ಮನ್ನು ಕ್ಷಮಿಸುವ ಅಧಿಕಾರವಿದೆ. ಆದರೆ ಫಾದರ್ ವಿರುದ್ಧ ನಾವೇನಾದರೂ ತಪ್ಪು ಮಾಡಿದರೆ ಅದಕ್ಕೆ ಪರಿಹಾರವಿಲ್ಲ ಎಂದು ಕಾಮತ್ ಇದೇ ವೇಳೆ ತಿಳಿಸಿದರು.
ಕಠಿಣ ಶ್ರಮವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಯನ್ನಾಗಿಸಬೇಕು ಎಂದು ಎಲ್ಲ ಸ್ವಯಂ ಸೇವಕರಿಗೆ ಕರೆ ನೀಡಿದ ಶಾಸಕರು, ಕಾರ್ಯಕ್ರಮಕ್ಕೆ ಎಲ್ಲ ರೀತಿಯಲ್ಲೂ ಸಹಕಾರ ನೀಡುವ ಭರವಸೆ ನೀಡಿದರು ಹಾಗೂ ನೂತನ ಹಾಗೂ ನಿಕಟಪೂರ್ವ ಬಿಷಪ್ಗೆ ಶುಭಾಶಯ ಕೋರಿದರು. ಇದೇ ವೇಳೆ ಕಾಮತ್, ಸ್ವಯಂಸೇವಕರ ಬ್ಯಾಡ್ಜ್ಗಳನ್ನು ಅನಾವರಣಗೊಳಿಸಿದರು.
ಈ ಬ್ಯಾಡ್ಜ್ಗಳನ್ನು ಸ್ವಯಂಸೇವಕರು ಸೆಪ್ಟಂಬರ್ 15ರಂದು ನಡೆಯಲಿರುವ ಕಾರ್ಯಕ್ರಮದ ವೇಳೆ ಧರಿಸಲಿದ್ದಾರೆ. ಶಾಸಕರ ಕುರಿತು ಪ್ರಶಂಸೆಯ ಮಾತುಗಳನ್ನಾಡಿದ ಬಿಷಪ್, ನೀವು ನಮ್ಮವರು ಮತ್ತು ನಾವು ನಿಮ್ಮವರು ಎಂದು ಹೇಳಿದರು. ನೀವು ಏನನ್ನು ನಿರೀಕ್ಷಿಸಿದ್ದೀರೋ ಅದನ್ನು ನಾನು ಮಾಡುತ್ತೇನೆ ಎಂಬ ಶಾಸಕರ ಮಾತೇ ಎಲ್ಲ ಸ್ವಯಂಸೇವಕರ ಮನೋಭಾವ ಕೂಡಾ ಆಗಬೇಕು ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದ ಯಶಸ್ಸು ಕಾರ್ಯಕರ್ತರ ಮೇಲೆ ಅವಲಂಬಿತವಾಗಿದೆ. ಈ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಲು ನೀವಾಗಿಯೇ ಮುಂದೆ ಬಂದಿದ್ದೀರಿ ಮತ್ತು ನಿಮ್ಮ ಕಾರ್ಯಕ್ಕೆ ದೇವರು ಉಡುಗೊರೆ ನೀಡುತ್ತಾರೆ ಎಂದು ಬಿಷಪ್ ತಿಳಿಸಿದರು. ಔಪಚಾರಿಕ ಕಾರ್ಯಕ್ರಮ ಮುಗಿದ ನಂತರ ಸಂಬಂಧಿತರು ಸ್ವಯಂಸೇವಕರಿಗೆ ಅಗತ್ಯ ಸೂಚನೆ ಮತ್ತು ಮಾರ್ಗದರ್ಶನವನ್ನು ನೀಡಿದರು.
ಡಾ. ಅಲೋಶಿಯಸ್ ಪೌಲ್ ಡಿಸೋಜ, ಶಾಸಕ ವೇದವ್ಯಾಸ ಕಾಮತ್, ಮುಖ್ಯ ಸಂಯೋಜಕರಾದ ಫಾ. ಜೆ.ಬಿ. ಕ್ರಾಸ್ತಾ, ಫಾ. ರೂಪೇಶ್ ಮಾಡ್ತಾ ಹಾಗೂ ಸುಶೀಲ್ ನೊರೊನ್ಹಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಯೋಸಿಸ್ನ ಪಿಆರ್ಒ ಫಾ. ವಿಕ್ಟರ್ ವಿಜಯ್ ಲೋಬೊ, ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಗ್ಲಾಡ್ವಿನ್ ಎಚ್.ಡಿ ಸಿಲ್ವಾ, ಬಿಜೆಪಿ ಮಂಗಳೂರು ನಗರ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಲತೀಫ್ ಕಾರ್ಪೊರೇಟರ್, ಸಂಚಾಲಕರು ಮತ್ತು ವಿವಿಧ ಸಮಿತಿಗಳ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.
ಫಾ.ಜೆ.ಬಿ ಕ್ರಾಸ್ತಾ ಪಾರ್ಥನೆ ನೆರವೇರಿಸಿದರು, ಸುಶೀಲ್ ನೊರೊನ್ಹಾ ಅತಿಥಿಗಳನ್ನು ಸ್ವಾಗತಿಸಿದರು, ಫಾ. ರೂಪೇಶ್ ಮಾಡ್ತಾ ಧನ್ಯವಾದ ಸಮರ್ಪಿಸಿದರು ಮತ್ತು ಫಾ. ಫ್ಲೇವಿಯನ್ ಲೋಬೊ ಕಾರ್ಯಕ್ರಮವನ್ನು ನಿರೂಪಿಸಿದರು.