ಪುತ್ತೂರಿನಲ್ಲಿ 'ಶ್ರೀಕೃಷ್ಣ ಲೋಕ': ಕೃಷ್ಣ ರಾಧೆ, ಯಶೋಧೆಯಾದ 1500ಕ್ಕೂ ಅಧಿಕ ಪುಟಾಣಿಗಳು
ಪುತ್ತೂರು, ಸೆ. 2: ಪುತ್ತೂರಿನ ವಿವೇಕಾನಂದ ಶಿಶು ಮಂದಿರ, ಸಾರ್ವಜನಿಕ ಶ್ರೀ ಕೃಷ್ಣ ಲೋಕ ಸಮಿತಿ ಹಾಗೂ ಮಹಾಲಿಂಗೇಶ್ವರ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ರವಿವಾರ ಶ್ರೀಕೃಷ್ಣ ಲೋಕ ನಡೆಯಿತು. 12 ವರ್ಷದೊಳಗಿನ ಎಳೆಯ ಪ್ರಾಯದ 1300ಕ್ಕಿಂತಲೂ ಮಿಕ್ಕಿದ ಪುಟಾಣಿಗಳು ಶ್ರೀ ಕೃಷ್ಣ, ರಾಧೆ, ಯಶೋಧೆಯರ ವೇಷ ಧರಿಸಿ ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆಗೆ ಪುತ್ತೂರಿನ ವಿವೇಕಾನಂದ ಶಿಶು ಮಂದಿರದಲ್ಲಿ ಕಾರ್ಯಕ್ರಮಕ್ಕೆ ಹಿರಿಯ ಆರೆಸ್ಸೆಸ್ ಮುಖಂಡ ಗೋಪಾಲ ನಾಯಕ್ ಅವರು ಚಾಲನೆ ನೀಡಿದರು. ಮಹೇಶ್ ಪ್ರಸಾದ್-ಅರ್ಚನಾ ದಂಪತಿ ಪುತ್ರ ಶಿವಂಶು ಹೆಸರಿನ ಪುಟಾಣಿಗೆ ಶ್ರೀ ಕೃಷ್ಣ ವೇಷ ತೊಡಿಸಿ ತೊಟ್ಟಿಲಲ್ಲಿ ಹಾಕಿ ಕಾರ್ಯಕ್ರಮಕ್ಕೆ ಆರಂಭ ನೀಡಲಾಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್, ಬಿರ್ಮಣ್ಣ ಗೌಡ ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕ ಸಂಜೀವ ಮಠಂದೂರು ಇನ್ನಿತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶ್ರೀ ಮಹಾಲಿಮಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಮಂಗಳೂರಿನ ಕೆಸಿಪಿ ಬಿಲ್ಡರ್ಸ್ ಮಾಲಕ ಕೆ.ಸಿ.ಪ್ರಭು ಅವರು ಉದ್ಘಾಟಿಸಿದರು. ಮಂಗಳೂರಿನ ಕೆನರಾ ಕಾಲೇಜು ಉಪನ್ಯಾಸಕಿ ಪ್ರಮೀಳಾ ರಾವ್ ಅವರು ಉಪನ್ಯಾಸ ನೀಡಿದರು. ವಿವೇಕಾನಂದ ಶಿಶು ಮಂದಿರದ ಅಧ್ಯಕ್ಷ ರವಿನಾರಾಯಣ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಶು ಮಂದಿರದ ಗೌರವಾಧ್ಯಕ್ಷೆ ರಾಜಿ ಬಲರಾಮ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಸುಲತಾ ವರದರಾಜ ನಾಯಕ್, ಕಾರ್ಯದರ್ಶಿ ಅಶೋಕ ಕುಂಬ್ಳೆ, ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಡಾ.ಸುಧಾ ಎಸ್.ರಾವ್ ಮತ್ತಿತರರು ಇದ್ದರು. ಶ್ರೀಕೃಷ್ಣ ಲೋಕ ಸಮಿತಿಯ ಅಧ್ಯಕ್ಷೆ ಡಾ.ಶೋಭಿತಾ ಸತೀಶ್ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷ ರಾಜ್ಗಣೇಶ್ ವಂದಿಸಿದರು. ನರೇಂದ್ರ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಹರಿಣಿ ಪುತ್ತೂರಾಯ, ಉಪನ್ಯಾಸಕಿ ಡಾ.ವಿಜಯ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.