8 ಲಕ್ಷ ಪಡಿತರ ಚೀಟಿ ವಿತರಿಸಲು ಕ್ರಮ: ಸಚಿವ ಝಮೀರ್ ಅಹ್ಮದ್
ಬಂಟ್ವಾಳ, ಸೆ. 2: ಕಳೆದ ಮಾರ್ಚ್ ತಿಂಗಳಿನಿಂದ ವಿತರಣೆಯಾಗದೇ ಬಾಕಿ ಉಳಿದಿದ್ದ ಸುಮಾರು 8 ಲಕ್ಷ ಪಡಿತರ ಚೀಟಿಗಳನ್ನು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ, ಹೊಸ ಅರ್ಜಿದಾರರ ಅರ್ಜಿಯನ್ನೂ ಸ್ವೀಕರಿಸಲಾಗುತ್ತಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಹೇಳಿದ್ದಾರೆ.
ವಕ್ಫ್ ಅಧೀನಕ್ಕೊಳಪಟ್ಟ ಪುತ್ತೂರಿನ ಸಾಲ್ಮರ ಅನ್ಸಾರುದ್ದೀನ್ ಯತೀಂ ಖಾನಕ್ಕೆ ಹಾಗೂ ಮಾಣಿ ದಾರುಲ್ ಇರ್ಷಾದ್ ಧಾರ್ಮಿಕ ವಿದ್ಯಾ ಸಂಸ್ಥೆಗೆ ರವಿವಾರ ಭೇಟಿ ನೀಡಿದ ಬಳಿಕ ಮಾಣಿ ಸಮೀಪದ ಕೊಡಾಜೆಯಲ್ಲಿರು ಎಸ್ಡಿಪಿಐ ಮುಖಂಡ ಹನೀಫ್ ಖಾನ್ ರವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು, ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡಿದರು.
ಹೊಸದಾಗಿ ಆನ್ಲೈನ್ ಮೂಲಕ ಪಡಿತರ ಚೀಟಿಯಲ್ಲಿ ಕುಟುಂಬ ಸದಸ್ಯರ ಹೆಸರನ್ನು ಸೇರಿಸುವಾಗ ವೈಯಕ್ತಿಕ ಆದಾಯ ಪ್ರಮಾಣಪತ್ರವೇ ಅಗತ್ಯ ವಾಗಿತ್ತು. ಆದರೆ ಇದರಿಂದ ಆಗುವ ಸಮಸ್ಯೆಯನ್ನು ಮನಗಂಡು ಕುಟುಂಬದ ಮುಖ್ಯಸ್ಥರೊಬ್ಬರ ಆದಾಯ ಪ್ರಮಾಣಪತ್ರವನ್ನು ಆಧರಿಸಿ ಪಡಿತರ ಚೀಟಿ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸಿದ್ದರಾಮಯ್ಯ ಸರ್ಕಾರ ನೀಡಿದ್ದ 7 ಕೆಜಿ ಪಡಿತರ ಅಕ್ಕಿಯನ್ನು ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಜೆಟ್ ನಲ್ಲಿ 5 ಕೆಜಿ ಗೆ ಇಳಿಕೆಮಾಡಿ, ಅಕ್ಕಿಯ ಜತೆಗೆ ಹೆಚ್ಚುವರಿಯಾಗಿ ಇತರ ಆಹಾರ ಧಾನ್ಯ ನೀಡುವ ನಿರ್ಧಾರ ಮಾಡಿದ್ದರು. ಪಡಿತರ ಅಕ್ಕಿಯನ್ನು 7 ಕೆಜಿಗೆ ಹೆಚ್ಚಳ ಗೊಳಿಸಲು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆ, ಸ್ಪಂದಿಸಿದ ಮುಖ್ಯಮಂತ್ರಿಯವರು 7 ಕೆಜಿಯಂತೆ ವಿತರಿಸಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಬಜೆಟ್ ನ ಹೆಚ್ಚುವರಿ ಆದಾಯದ ವಿಚಾರ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟದ್ದು ಎಂದವರು ಅಭಿಪ್ರಾಯ ಪಟ್ಟರು.
ಈ ಸಂದರ್ಭ ಪ್ರಮುಖರಾದ ಉದ್ಯಮಿ ಅಬ್ದುಲ್ ಕುಂಞಿ, ಪ್ರಮುಖರಾದ ಜಿ.ಎ.ಬಾವಾ, ಡಾ.ಇಫ್ತಿಕಾರ್ ಅಲಿ, ಅಲ್ಫೋನ್ಸೋ ಫ್ರಾಂಕ್, ಅಶ್ರಫ್ ಕಲ್ಲೆಗ, ನಾಸೀರ್ ಸಜಿಪ, ಇಕ್ಬಾಲ್ ಗೂಡಿನಬಳಿ ಮೊದಲಾದವರು ಸಚಿವರ ಜತೆಗಿದ್ದರು.