ಉಡುಪಿ: ಎಲ್ಲಾ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳು ಬಿಜೆಪಿ ತೆಕ್ಕೆಗೆ
ನಗರಸಭೆಯಲ್ಲಿ 22ರಿಂದ 4ಕ್ಕೆ ಇಳಿದ ಕಾಂಗ್ರೆಸ್ ಸ್ಥಾನ
ಉಡುಪಿ, ಸೆ.3: ಉಡುಪಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಯಲ್ಲಿ ಬಿಜೆಪಿಯ ಪ್ರಾಬಲ್ಯ ಮರು ಸ್ಥಾಪನೆಗೊಂಡಿದೆ. ಉಡುಪಿ ನಗರಸಭೆ ಯಲ್ಲಿ ಐದು ವರ್ಷಗಳ ಹಿಂದೆ ಮೊದಲ ಬಾರಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೇರಿದ್ದ ಕಾಂಗ್ರೆಸ್ ಈ ಬಾರಿ ಹೀನಾಯ ಸೋಲನುಭವಿಸಿದ್ದಲ್ಲದೇ, ಕುಂದಾಪುರ ಹಾಗೂ ಸಾಲಿಗ್ರಾಮಗಳಲ್ಲೂ ಕಳಪೆ ಸಾಧನೆ ತೋರಿದೆ. ಕಾರ್ಕಳದಲ್ಲಿ ಅಧಿಕಾರಕ್ಕೇರಲು ವಿಫಲವಾದರೂ, ಸಮಾಧಾನಕರ ಪ್ರದರ್ಶನದ ತೃಪ್ತಿಯನ್ನು ಹೊಂದಿದೆ.
ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿತವಾದ ಉಡುಪಿ ನಗರಸಭೆಯಲ್ಲಿ ಬಿಜೆಪಿಯ ಪ್ರಾಬಲ್ಯ ಮರು ಸ್ಥಾಪನೆಗೊಂಡಿದೆ. 1968ರಲ್ಲಿ ದಿ.ಡಾ.ವಿ.ಎಸ್. ಆಚಾರ್ಯರ ನೇತೃತ್ವದಲ್ಲಿ ದೇಶದಲ್ಲೇ ಪ್ರಥಮವಾಗಿ ಅಧಿಕಾರಕ್ಕೇರಿದ್ದ ಜನಸಂಘ ಆ ಬಳಿಕ ಬಿಜೆಪಿ ರೂಪದಲ್ಲಿ ನಗರಸಭೆಯ ಮೇಲೆ ಸಂಪೂರ್ಣ ಏಕಸ್ವಾಮ್ಯ ಹೊಂದಿತ್ತು. ಐದು ವರ್ಷಗಳ ಹಿಂದೆ ಮೊದಲ ಬಾರಿಗೆ ಕಾಂಗ್ರೆಸ್ಗೆ ಸೋತ ಬಿಜೆಪಿ, 50 ವರ್ಷಗಳ ಬಳಿಕ ದಾಖಲೆಯ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಆ.31ರಂದು ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತಗಳ ಎಣಿಕೆ ಇಂದು ನಡೆದಿದ್ದು, ಉಡುಪಿ ನಗರಸಭೆಯಲ್ಲಿ ಬಿಜೆಪಿ 35 ಸ್ಥಾನಗಳಲ್ಲಿ 31ನ್ನು ಗೆದ್ದುಕೊಂಡಿದೆ. ಕಳೆದ ಬಾರಿ ಅದು 12 ಸ್ಥಾನಗಳಲ್ಲಿ ಮಾತ್ರ ಜಯ ದಾಖಲಿಸಿತ್ತು. ಕಳೆದ ಸಲ 22 ಸ್ಥಾನ ಜಯಿಸಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಉಳಿಸಿಕೊಳ್ಳಲು ಸಫಲವಾಗಿದ್ದು ಕೇವಲ ನಾಲ್ಕು ವಾರ್ಡುಗಳನ್ನು ಮಾತ್ರ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಕೊಡವೂರು ಗ್ರಾಮ ವ್ಯಾಪ್ತಿಯ ಆರಕ್ಕೆ ಆರು ವಾರ್ಡುಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ.
ಇನ್ನು ಕುಂದಾಪುರ ಪುರಸಭೆಯ 23 ವಾರ್ಡುಗಳಲ್ಲಿ ಬಿಜೆಪಿ 14ನ್ನು ಜಯಿಸಿದ್ದು, ಕಾಂಗ್ರೆಸ್ ಎಂಟು ವಾರ್ಡುಗಳನ್ನು ಮಾತ್ರ ಜಯಿಸಿದೆ. ಒಂದು ವಾರ್ಡಿನಲ್ಲಿ ಬಿಜೆಪಿಯ ಬಂಡಾಯ ಅಭ್ಯಥ್ಯಿ ಪಕ್ಷೇತರರಾಗಿ ಜಯಿಸಿದ್ದಾರೆ. ಇನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್ನ 16 ವಾರ್ಡುಗಳಲ್ಲಿ 10ನ್ನು ಬಿಜೆಪಿ ಗೆದ್ದುಕೊಂಡು ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಾಂಗ್ರೆಸ್ ಕೇವಲ ಐದನ್ನು ಗೆದ್ದರೆ ಉಳಿದೊಂದು ವಾರ್ಡು ಪಕ್ಷೇತರ ಅಭ್ಯರ್ಥಿ ಪಾಲಾಗಿದೆ.
ಕಾರ್ಕಳ ಪುರಸಭೆಯ 23 ವಾರ್ಡುಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 11 ವಾರ್ಡುಗಳನ್ನು ಗೆದ್ದುಕೊಂಡಿವೆ. ಉಳಿದೊಂದು ಸ್ಥಾನ ಬಿಜೆಪಿ ಬಂಡಾಯ ಅಭ್ಯರ್ಥಿಯ ಪಾಲಾಗಿದ್ದು, ಇಲ್ಲಿ ಶಾಸಕ ಹಾಗೂ ಸಂಸದೆ ಅವರಿಂದ ಬಿಜೆಪಿ ಸುಲಭವಾಗಿ ಅಧಿಕಾರದ ಗದ್ದುಗೆಗೇರಲಿದೆ. ಕಳೆದ ಬಾರಿ ಕಾಂಗ್ರೆಸ್ 12 ಹಾಗೂ ಬಿಜೆಪಿ 11 ಸ್ಥಾನಗಳನ್ನು ಜಯಿಸಿದ್ದವು.
ಕಳೆದ ಬಾರಿ ಕುಂದಾಪುರ ಪುರಸಭೆಯಲ್ಲಿ ಬಿಜೆಪಿ 12, ಕಾಂಗ್ರೆಸ್ 9 ಹಾಗೂ ಅದರೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡ ಸಿಪಿಎಂ ಪಕ್ಷ ಎರಡು ಸ್ಥಾನ ಜಯಿಸಿದ್ದವು. ಸಾಲಿಗ್ರಾಮ ಪಟ್ಟಣ ಪಂಚಾಯತ್ನಲ್ಲಿ ಕಳೆದ ಸಲ 14 ವಾರ್ಡುಗಳಿದ್ದು, ಬಿಜೆಪಿ ಅಭ್ಯರ್ಥಿಗಳು ಎಂಟರಲ್ಲಿ ಕಾಂಗ್ರೆಸ್ ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು.
ಸೋತ ಅಧ್ಯಕ್ಷೆ: ಉಡುಪಿ ನಗರಸಭೆಯಲ್ಲಿ ಕಳೆದ ಎರಡೂವರೆ ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಮೀನಾಕ್ಷಿ ಮಾಧವ ಬನ್ನಂಜೆ ಅವರು ಕೊಡವೂರು ವಾರ್ಡಿನಲ್ಲಿ ತನ್ನ ಎದುರಾಳಿ ವಿಜಯ ಕೆ. ವಿರುದ್ಧ 258 ಮತಗಳ ಅಂತರದಿಂದ ಪರಾಜಿತರಾದರು.
ವಿಶೇಷವೆಂದರೆ ಕಾಂಗ್ರೆಸ್ನಿಂದ ಈ ಬಾರಿ ಗೆದ್ದ ನಾಲ್ವರು ಸಹ ಕಳೆದ ಬಾರಿ ಸದಸ್ಯರಾಗಿದ್ದವರೇ ಆಗಿದ್ದಾರೆ. ಕಿನ್ನಿಮೂಲ್ಕಿಯಲ್ಲಿ ಜಯ ಗಳಿಸಿದ ಅಮೃತಾ ಕೃಷ್ಣಮೂರ್ತಿಗೆ ಇದು ಸತತ ನಾಲ್ಕನೇ ಗೆಲುವಾಗಿದೆ. ಹಿಂದೆ ಒಮ್ಮೆ ಬಿಜೆಪಿ ಯಲ್ಲಿ ಹಾಗೂ ಎರಡು ಬಾರಿ ಕಾಂಗ್ರೆಸ್ನಿಂದ ಇದೇ ಕ್ಷೇತ್ರದಲ್ಲಿ ಜಯಗಳಿಸಿ ದ್ದರು.
ಉಳಿದಂತೆ ರಮೇಶ್ ಕಾಂಚನ್ ಬೈಲೂರು ವಾರ್ಡುನ್ನು ಉಳಿಸಿಕೊಂಡರೆ, ಬಡಗುಬೆಟ್ಟು ವಾರ್ಡನ್ನು ವಿಜಯ ಪೂಜಾರಿ ಈ ಸಲವೂ ತನ್ನಲ್ಲೇ ಉಳಿಸಿಕೊಂಡರು. ಇನ್ನು ಮೂಡುಪೆರಂಪಳ್ಳಿಯಿಂದ ಸೆಲಿನ ಕರ್ಕಡ ಅವರ ಸಹ ಸತತ ಎರಡನೇ ಬಾರಿಗೆ ಗೆಲುವು ದಾಖಲಿಸಿದ್ದಾರೆ.
ಬಿಜೆಪಿಯಿಂದ ಪರ್ಕಳದಲ್ಲಿ ಸುಮಿತ್ರಾ ನಾಯಕ್ ಅವರು ತನ್ನ ಸ್ಥಾನವನ್ನು ಉಳಿಸಿಕೊಂಡರು. ಅದೇ ರೀತಿ ಸತತ ಎರಡನೇ ಗೆಲುವು ದಾಖಲಿಸಿದ ಮತ್ತೊಬ್ಬ ಬಿಜೆಪಿ ಅಭ್ಯರ್ಥಿ ಕಡಿಯಾಳಿಯ ಗೀತಾ ದೇವರಾಯ ಶೇಟ್. ಇವರು ಕಳೆದ ಬಾರಿ ಕಾಂಗ್ರೆಸ್ನಿಂದ ಗೆದ್ದಿದ್ದು, ಈ ಬಾರಿ ಬಿಜೆಪಿ ಸೇರಿ ಟಿಕೇಟ್ ಪಡೆದು ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಮೂರು ಬಾರಿ ಸದಸ್ಯರಾಗಿದ್ದ ಹಿರಿಯ ಸದಸ್ಯ ಮಹೇಶ್ ಠಾಕೂರ್ ಈ ಬಾರಿ ಬೈಲೂರು ವಾರ್ಡಿನಲ್ಲಿ ಪರಾಜಿತರಾದರು.
ಬಿಜೆಪಿಗೆ 66, ಕಾಂಗ್ರೆಸ್ಗೆ 28: ಜಿಲ್ಲೆಯ ಮಟ್ಟಿಗೆ ಎಲ್ಲಾ ನಾಲ್ಕು ಸ್ಥಳೀಯ ಸಂಸ್ಥೆಗಳಲ್ಲೂ ನೇರ ಮುಖಾಮುಖಿ ನಡೆದಿರುವುದು ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ. ಜೆಡಿಎಸ್, ಸಿಪಿಎಂ, ಬಿಎಸ್ಪಿ, ಶಿವಸೇನೆ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರೂ ಎಲ್ಲೂ ತಮ್ಮ ಇರುವಿಕೆಯನ್ನು ತೋರ್ಪಡಿ ಸಲು ಶಕ್ತವಾಗಲಿಲ್ಲ. ಅದರಲ್ಲೂ ಸಿಪಿಎಂ ಕುಂದಾಪುರದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ.
ಒಟ್ಟಾರೆಯಾಗಿ ಜಿಲ್ಲೆಯ ಎಲ್ಲಾ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಲ್ಲಿದ್ದ 97 ಸ್ಥಾನಗಳಲ್ಲಿ ಬಿಜೆಪಿ 66ನ್ನು ಗೆದ್ದುಕೊಂಡರೆ, ಕಾಂಗ್ರೆಸ್ ಪಡೆದಿರುವುದು 28 ಮಾತ್ರ. ಉಳಿದ ಮೂರು ಪಕ್ಷೇತರರ ಪಾಲಾದವು. ಕಳೆದ ಬಾರಿ ಒಟ್ಟು 95 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 49 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿಗೆ ದಕ್ಕಿದ್ದು 43 ಸೀಟುಗಳು ಮಾತ್ರ.
ಬಿಜೆಪಿಗೆ ಶೇ.57.5 ಮತ: ಉಡುಪಿ ನಗರಸಭೆಯಲ್ಲಿ ಮತದಾನವಾದ ಒಟ್ಟು 66,891 ಮತಗಳಲ್ಲಿ ಬಿಜೆಪಿ ಶೇ.57.488ರಷ್ಟು ಅಂದರೆ 38,441 ಮತಗಳನ್ನು ಪಡೆದರೆ, ಕಾಂಗ್ರೆಸ್ಗೆ ಸಿಕ್ಕಿರುವುದು ಶೇ.38.718ರಷ್ಟು ಅಂದರೆ 25,899 ಮತಗಳು ಮಾತ್ರ. ಜೆಡಿಎಸ್ನ 10 ಅಭ್ಯರ್ಥಿಗಳು ಒಟ್ಟು 1016 ಮತಗಳನ್ನು ಪಡೆದರೆ, ನೋಟಾಕ್ಕೆ 466 ಮಂದಿ ಮತ ಹಾಕಿದರು. ಬಿಎಸ್ಪಿ 40 ಹಾಗೂ ಶಿವಸೇನೆ 88 ಮತಗಳನ್ನು ಪಡೆದವು. ಪಕ್ಷೇತರರಿಗೆ ಉಡುಪಿಯಲ್ಲಿ ಸಿಕ್ಕಿದ್ದು 941 ಮತಗಳು.
ಗರಿಷ್ಠ-ಕನಿಷ್ಠ: ಉಡುಪಿಯಲ್ಲಿ ಅತೀ ಹೆಚ್ಚು ಮತಗಳ ಅಂತರದಿಂದ ಗೆದ್ದವರು ಮೂಡುಸಗ್ರಿ ವಾರ್ಡಿನ ಬಿಜೆಪಿ ಅಭ್ಯರ್ಥಿ ಭಾರತಿ. ಅವರು ತನ್ನ ಕಾಂಗ್ರೆಸ್ ಅಭ್ಯರ್ಥಿ ಜಾನಕಿ ಕೃಷ್ಣ ನಾಯ್ಕೆರನ್ನು 932 ಮತಗಳ ಅಂತರದಿಂದ ಪರಾಭವಗೊಳಿಸಿದರು.
ಅದೇ ರೀತಿ ಕನಿಷ್ಠ ಮತಗಳ ಅಂತರದಿಂದ ಗೆದ್ದ ದಾಖಲೆ ಬಿಜೆಪಿಯ ರಾಜು ಅವರದಾಗಿದೆ. ಅವರು ಕಾಂಗ್ರೆಸ್ನ ಪ್ರಣಮ್ಕುಮಾರ್ ಅವರನ್ನು ಕೇವಲ ಮೂರು ಮತಗಳ ಅಂತರದಿಂದ ಹಿಮ್ಮೆಟ್ಟಿಸಿದರು. ರಾಜು ಅವರಿಗೆ 912 ಮತಗಳು ಬಿದ್ದರೆ, ಪ್ರಣಮ್ಗೆ 909 ಮತಗಳು ಬಿದ್ದವು. ಇಲ್ಲಿ ಜೆಡಿಎಸ್ನ ಚಂದ್ರಕಲಾ 56 ಮತಗಳನ್ನು ಪಡೆದರು.