ಮಂಗಳೂರು: ಸಂಚಾರಿ ಆರೋಗ್ಯ ಘಟಕ ಸೇವೆಗೆ ಡಿಸಿ ಚಾಲನೆ
ಮಂಗಳೂರು, ಸೆ.3: ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಜನರು ವಾಸಿಸುವ ಗ್ರಾಮಗಳಿಗೆ ಸಂಚಾರಿ ಆರೋಗ್ಯ ಘಟಕಗಳ ಸೇವೆಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.
ಆರೋಗ್ಯ ಸೇವೆಯನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ಖಾಸಗಿ ಸಹಭಾಗಿತ್ವದಲ್ಲಿ ಕ್ರಿಯಾ ಹೆಲ್ತ್ ಕೇರ್ ಪ್ರವೇಟ್ ಲಿ. ವತಿಯಿಂದ ಆರಂಭಿಸಿದೆ. ಜಿಲ್ಲೆಯ ಪರಿಶಿಷ್ಟ ಪಂಗಡದ ಬುಡಕಟ್ಟು ಜನಾಂಗದವರು ಹೆಚ್ಚು ವಾಸವಿರುವ ತಾಲೂಕುಗಳ ವಿವಿಧ ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಸಂಚಾರಿ ಚಿಕಿತ್ಸಾಲಯ ತಲುಪಲಿದೆ.
ಹವಾ ನಿಯಂತ್ರಿತ ವಾಹನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದೊರಕುವ ಸೌಲಭ್ಯಗಳು ಲಭ್ಯವಿದೆ. ರಕ್ತಪರೀಕ್ಷೆ ಪ್ರಯೋಗಾಲಯದ ಸಲಕರಣೆಗಳು, ಉಷ್ಣಮಾಪಕ, ತೂಕಮಾಪಕ, ಎತ್ತರ ಅಳೆಯುವ ಮಾಪಕ, ಆಗ್ನಿಶಾಮಕ ಉಪಕರಣ, ಆಮ್ಲಜನಕದ ಸಿಲಿಂಡರ್, ಗ್ಲೂಕೋಸ್ ಬಾಟಲಿಗಳು, ಹಿಮೋಮೀಟರ್, ರಕ್ತದೋತ್ತಡ ಅಳೆಯುವ ಸಾಧನಗಳು ಅದರಲ್ಲಿವೆ. ಜಿಪಿಎಸ್ ಅಳವಡಿಸಿರುವ ಈ ವಾಹನದಲ್ಲಿ ಅಂದಾಜು 22 ಲಕ್ಷ ರೂ. ಮೌಲ್ಯದ ಸಲಕರಣೆಗಳಿವೆ.
ಇದು ಸಂಪೂರ್ಣ ಉಚಿತ ಚಿಕಿತ್ಸೆಯಾಗಿದ್ದು, ಪ್ರತಿ ಘಟಕದಲ್ಲಿ ಒಟ್ಟು ಆರು ಸಿಬ್ಬಂದಿ ಇರುತ್ತಾರೆ. ಅವರಲ್ಲಿ ಒಬ್ಬರು ವೈದ್ಯರು, ಒಬ್ಬರು ಸಹಾಯಕ ಸೂಲಗಿತ್ತಿ, ಸ್ಟಾಪ್ ನರ್ಸ್, ಫಾರ್ಮಸಿಸ್ಟ್, ಪ್ರಯೋಗಾಲಯ ಸಹಯಕರು ಮತ್ತು ವಾಹನ ಚಾಲಕರು ಅವರಲ್ಲಿ ಒಳಗೊಂಡಿರುತ್ತಾರೆ. ಘಟಕದ ಕಾರ್ಯ ನಿರ್ವಹಣೆಯ ವ್ಯಾಪ್ತಿಯ ಪ್ರದೇಶಗಳಲ್ಲಿ ಮನೆ ಮನೆಗಳಿಗೆ ತೆರಳುವ ಸಿಬ್ಬಂದಿ ಆರೋಗ್ಯ ಸಮೀಕ್ಷೆ ನಡೆಸುತ್ತಾರೆ. ನಂತರ ಅಲ್ಲಿಗೆ ವೇಳಾಪಟ್ಟಿ ಗುರುತು ಮಾಡಿಕೊಂಡು ತೆರಳಿ ಲಭ್ಯ ಚಿಕಿತ್ಸೆಯನ್ನು ಹಾಗೂ ಅಗತ್ಯ ಔಷಧಗಳನ್ನು ಉಚಿತವಾಗಿ ನೀಡುತ್ತಾರೆ ಎಂದು ಯೋಜನಾ ಸಮನ್ವಯಾಧಿಕಾರಿ ಡಾ. ಬಿ.ಎಸ್. ಹೇಮಲತಾ ತಿಳಿಸಿದರು.
ಈ ಸಂದರ್ಭದಲ್ಲಿ ಕ್ರಿಯಾ ಹೆಲ್ತ್ ಕೇರ್ ಪ್ರವೇಟ್ ಲಿ.ನ ಪ್ರಾದೇಶಿಕ ವ್ಯವಸ್ಥಾಪಕಿ ಪ್ರಿಯಾ ರಾಜೇಂದ್ರ ಹಾಗೂ ವೈದ್ಯಾಧಿಕಾರಿಗಳು ಇದ್ದರು.