ವಿಶೇಷ ಶಿಕ್ಷಕ ಪ್ರಶಸ್ತಿ ವಿಜೇತ ಸುರೇಂದ್ರ ಅಡಿಗ ನೀಲಾವರ
ಉಡುಪಿ, ಆ.4: ತೆಕ್ಕಟ್ಟೆಯ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನೀಲಾವರ ಸುರೇಂದ್ರ ಅಡಿಗರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ವಿಶೇಷ ಸಾಧನೆಗಾಗಿ ರಾಜ್ಯ ಸರಕಾರದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ಗೆ ಸತತ ಎರಡನೇ ಅವಧಿಗೆ ಅಧ್ಯಕ್ಷರಾಗಿರುವ ಸುರೇಂದ್ರ ಅಡಿಗ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿದ್ದಾರೆ. ಅನೇಕ ಪುಸ್ತಕಗಳನ್ನು ಪ್ರಕಟಿಸಿರುವ ಇವರು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ವಿಶೇಷ ಪ್ರಯತ್ನ ನಡೆಸುತಿದ್ದಾರೆ. ಕನ್ನಡದ ಕಟ್ಟಾಳುವೆಂದು ತನ್ನನ್ನು ಕರೆದುಕೊಳ್ಳುವ ಇವರು ತೆಕ್ಕಟ್ಟೆಯಲ್ಲಿ ತಾನು ಅಧ್ಯಾಪಕನಾಗಿರುವ ಶಾಲೆಯ ಪ್ರಗತಿಗೂ ಹಲವು ವಿಧದಲ್ಲಿ ಸೇವೆ ಸಲ್ಲಿಸುತಿದ್ದಾರೆ.
ಜಿಲ್ಲೆಯ ವಿವಿಧೆಡೆ ಸಾಹಿತ್ಯ ಸಮ್ಮೇಳನ, ಕಮ್ಮಟ, ಕಾರ್ಯಾಗಾರಗಳನ್ನು ಆಯೋಜಿಸಿ ಜನರ ಮಧ್ಯೆ ಸಾಹಿತ್ಯದ ಕಂಪನ್ನು ಹರಡುತಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿಯೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಇವರು ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ಅತಿ ಹೆಚ್ಚು ಕಾರ್ಯಕ್ರಮಗಳನ್ನು ಸಂಘಟಿಸಿದ ಕೀರ್ತಿಗೂ ಭಾಜನರಾಗಿದ್ದಾರೆ.